SPBಗೆ ಭಾರತರತ್ನ ಗೌರವ ಸಿಗಲಿ; ಮೋದಿಗೆ ಪತ್ರ ಬರೆದ ಮುಖ್ಯಮಂತ್ರಿ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಗೌರವ ಸಿಗಬೇಕು/ ಪ್ರಧಾನಿಗೆ ಪತ್ರ ಬರೆದ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ/ ಚೆನ್ನೈನ ಆಸ್ಪತ್ರೆಯಲ್ಲಿ ಸಂಗೀತ ಲೋಕ ಅಗಲಿದ್ದ ಎಸ್ಪಿಬಿ/ 16 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳು
ಹೈದರಾಬಾದ್(ಸೆ. 28) ಅಪಾರ ಸಂಗೀತ ಖಜಾನೆಯನ್ನು ಬಿಟ್ಟು ಅಗಲಿದ ಚೇತನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಮಂತ್ರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ, ರಾಜ್ಯದ ನೆಲ್ಲೂರು ಜಿಲ್ಲೆಯಲ್ಲಿ ಜನಿಸಿದ ಬಹುಮುಖ ಗಾಯಕ, ಐದು ದಶಕಗಳ ವೃತ್ತಿಜೀವನದ ಅವಧಿಯಲ್ಲಿಸಂಗೀತದ ಜೀವಾಳವಾಗಿದ್ದರು. ಪ್ರಪಂಚದ ಎಲ್ಲ ಕಡೆ ಅವರನ್ನು ಆರಾಧಿಸುತ್ತಾರೆ ಎಂದು ಸ್ಮರಿಸಿಕೊಂಡಿದ್ದಾರೆ.
ಕನ್ನಡದಲ್ಲೇ ಎಸ್ಪಿಬಿಗೆ ಸಂತಾಪ ಸೂಚಿಸಿ ಗಾಯಕಿ ಎಸ್. ಜಾನಕಿ ಕಣ್ಣೀರು
ಎಸ್ಪಿಬಿ ಸಂಗೀತ ಕ್ಷೇತ್ರಕ್ಕೆ ಮಾತ್ರ ಸಿಮೀತರಾಗಿರಲಿಲ್ಲ. ನಟನೆ, ಸಂಗೀತ ಸಂಯೋಜನೆ, ಚಿತ್ರ ನಿರ್ಮಾಣದಲ್ಲಿಯೂ ಅವರ ಕೊಡುಗೆ ಮರೆಯುವಂತೆ ಇಲ್ಲ. ಅವರ ನಿಧನವನ್ನು ಅರಗಿಸಿಕೊಳ್ಳಲು ಇನ್ನು ಹಲವು ದಿನ ಬೇಕು ಎಂದಿದ್ದಾರೆ.
ಲತಾ ಮಂಗೇಶ್ಕರ್, ಭೂಪೆನ್ ಹಜಾರಿಕಾ, ಬಿಸ್ಮಿಲ್ಲಾ ಖಾನ್ ಮತ್ತು ಭೀಮ್ ಸೇನ್ ಜೋಶಿ ಅವರಂತಹ ಇತರ ಸಂಗೀತಗಾರರಿಗೆ ಭಾರತರತ್ನ ಗೌರವ ಸಂದಿದೆ. ಎಸ್ಪಿಬಿ ಸಹ ಅದೆ ಹಾದಿಯಲ್ಲಿ ಇದ್ದಾರೆ ಎಂದು ರೆಡ್ಡಿ ಮನವರಿಕೆ ಮಾಡುವ ಯತ್ನ ಮಾಡಿದ್ದಾರೆ.
ಪದ್ಮಶ್ರೀ ಮತ್ತು ಪದ್ಮಭೂಷಣ ಗೌರವ ಪಡೆದಿರುವ ಎಸ್ಪಿ ಬಾಲಸುಬ್ರಹ್ಮಣ್ಯಂ 16 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆರು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕೊರೋನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕ ಕೊರೋನಾದಿಂದ ಮುಕ್ತಿ ಪಡೆದರೂ ಬಹುಅಂಗಾಂಗ ವೈಫಲ್ಯಕ್ಕೆ ಸಿಲುಕಿ ನಮ್ಮನ್ನೆಲ್ಲ ಅಗಲಿದರು.