ಬಂದ್ ಆಗಿಲ್ಲ ಭಾರತ, ರೈತ ಸಂಘಟನೆ ಪ್ರತಿಭಟನೆ ಹೆಸರಿಗಷ್ಟೇ ಸೀಮಿತ ಎಂದ ನೆಟಿಜೆನ್ಸ್!
- ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ಗೆ ನೀರಸ ಪ್ರತಿಕ್ರಿಯೆ
- ಕೃಷಿ ಕಾಯ್ದೆ ವಿರೋಧಿಸಿ ಸೆ.27ಕ್ಕೆ ಭಾರತ್ ಬಂದ್ ಕರೆ
- ದೇಶದ ಬಹುತೇಕ ರಾಜ್ಯದಲ್ಲಿ ಭಾರತ್ ಬಂದ್ಗೆ ನೀರಸ
- ಭಾರತ ತೆರೆದಿದೆ, ಬಂದ್ ಆಗಿಲ್ಲ ಎಂದ ನೆಟ್ಟಿಗರು
ನವದೆಹಲಿ(ಸೆ.27): ಕೇಂದ್ರ ಕೃಷಿ ಕಾಯ್ದೆ(Farm Law) ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ವರ್ಷ ತಲುಪುತ್ತಿದೆ. ಇದರ ನಡುವೆ ಹಲವು ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ. ಇದೀಗ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇಂದು(ಸೆ.27) ಸಂಯುಕ್ತ ಕಿಸಾನ್ ಮೋರ್ಚಾ(SKM) ಭಾರತ್ ಬಂದ್ಗೆ(Bharat bandh) ಕರೆ ನೀಡಿತ್ತು. ಈ ಬಂದ್ಗೆ ಭಾರತದ ಬಹುತೇಕ ರಾಜ್ಯಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತ ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಕಾಲು ಮೇಲೆ ಹರಿದ ಕಾರು
ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ 40 ರೈತ ಸಂಘಟನೆಗಳು(Famers Unions) ಭಾರತ್ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು. ಇದರ ಜೊತೆಗೆ 400 ಸಂಘಟನೆಗಳು ಬೆಂಬಲ ನೀಡಿದೆ ಎಂದು ಘೋಷಿಸಿತ್ತು. ಆದರೆ ಬಹುತೇಕ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿತ್ತು. ಯಾರೂ ಕೂಡ ಅಖಾಡಕ್ಕಿಳಿದು ಬಂದ್ ಮಾಡಲು ಮುಂದಾಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಭಾರತ ತೆರೆದಿದೆ(India is Open)ಟ್ರೆಂಡ್ ಆಗಿದೆ.
ನೆಟ್ಟಿಗರು ತಮ್ಮ ತಮ್ಮ ನಗರ, ಜಿಲ್ಲೆ, ರಾಜ್ಯಗಳ ವಿಡಿಯೋ ಹಾಕಿ ಭಾರತ್ ಬಂದ್ ಆಗಿಲ್ಲ. ಎಲ್ಲವೂ ತೆರೆದಿದೆ. ಮುಕ್ತ ಓಡಾಟ, ಯಾವ ಅಂಗಡಿ ಮುಂಗಟ್ಟು ಬಂದ್ ಆಗಿಲ್ಲ. ನಕಲಿ ಹೋರಾಟಕ್ಕೆ ಭಾರತೀಯರ ಬೆಂಬಲ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಹಾಗೂ ರೈತರ ಅಭಿವೃದ್ಧಿಗೆ 3 ಕಾಯ್ದೆ ಜಾರಿಗೆ ತಂದಿದೆ. ರೈತರಿಗೆ ಎಂಪಿಎಂಸಿ ಹೊರತು ಪಡಿಸಿ ಎಲ್ಲಿ ಬೇಕಾದರೆ ಅಲ್ಲಿ ಬೆಳೆಗಳನ್ನು ಮಾರಾಟ ಮಾಡುವ ಅವಕಾಶ, ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಪ್ರಮುಖ ಸುಧಾರಣೆಗಳನ್ನು ಈ ಕಾಯ್ದೆಯಲ್ಲಿ ಮಾಡಲಾಗಿದೆ. ಈ ಮೂರು ಕಾಯ್ದೆಗಳು ರೈತರಿಕೆ ಮಾರಕ ಎಂದು ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದ ನವೆಂಬರ್ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದೆ.
ಪ್ರತಿಭಟನೆ ವೇಳೆ ಕುಡುಕನ ಕಾಟ : ನಾನೂ ರೈತನ ಮಗನೇ.
ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಆರಂಭಿಕ ಹಂತದಲ್ಲಿ ರೈತರ ಪ್ರತಿಭಟನೆಗೆ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆದರೆ ಜನವರಿ 26ರ ಗಣರಾಜ್ಯೋತ್ಸವಂದು ಟ್ರಾಕ್ಟರ್ ರ್ಯಾಲಿ ಹಮ್ಮಿಕೊಂಡ ಪ್ರತಿಭಟನಾ ರೈತರು, ದೆಹಲಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದರು.
ಕೆಂಪು ಕೋಟೆಯ ಮೇಲಿನ ತ್ರಿವರ್ಣ ಧ್ವಜ ಕಿತ್ತೆಸೆದು ಖಲಿಸ್ತಾನ ಧ್ವಜ ಹಾರಿಸಲಾಗಿತ್ತು. 400ಕ್ಕೂ ಹೆಚ್ಚಿನ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಘಟನೆ ಬಳಿಕ ರೈತರ ಪ್ರತಿಭಟನೆ ಬೆಂಬಲ ಕಡಿಮೆಯಾಯಿತು. ಹಲವು ಸಂಘಟನೆಗಳು ಪ್ರತಿಭಟನೆ ಅರ್ಧಕ್ಕೆ ನಿಲ್ಲಿಸಿ ವಾಪಸ್ ಆಯಿತು.