ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆಗೂ ಮುನ್ನವೇ ಮಾಡಬೇಕು ಎಂದಿದ್ದ ಭಾಷಣ ಈಗ ಬಹಿರಂಗಗೊಂಡಿದ್ದು, ‘ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಕೈವಾಡವಿದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ

ಢಾಕಾ (ಆ.12) : ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆಗೂ ಮುನ್ನವೇ ಮಾಡಬೇಕು ಎಂದಿದ್ದ ಭಾಷಣ ಈಗ ಬಹಿರಂಗಗೊಂಡಿದ್ದು, ‘ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಕೈವಾಡವಿದೆ. ದೇಶದ ಗಡಿಯಲ್ಲಿ ನೆಲೆಯೂರಲು ಅಮೆರಿಕ ಪ್ರಯತ್ನಿಸುತ್ತಿದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ.ಅಲ್ಲದೆ, ‘ಜೊತೆಗೆ ವಿದ್ಯಾರ್ಥಿಗಳ ಶವದ ಮೆರವಣಿಗೆ ತಡೆಯುವ ಸಲುವಾಗಿ ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದೆ’ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೇಖ್‌ ಹಸೀನಾ ರಾಜೀನಾಮೆಗೂ ಮುನ್ನ ದೇಶವನ್ನುದ್ದೇಶಿಸಿ ಮಾಡಲು ನಿರ್ಧರಿಸಿ ಭಾಷಣ ಸಿದ್ಧಪಡಿಸಿದ್ದರು. ಆದರೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಅವರ ಮನೆಗೇ ನುಗ್ಗಿದ ಕಾರಣ ಭಾಷಣ ಮಾಡದೇ ಬಾಂಗ್ಲಾದೇಶ ತೊರೆದು ಭಾರತಕ್ಕೆ ಪಲಾಯನ ಮಾಡಿದ್ದರು.ಈಗ ಅವರ ಭಾಷಣದ ಅಂಶ ಬಹಿರಂಗವಾಗಿದ್ದು, ‘ಬಾಂಗ್ಲಾದೇಶದಲ್ಲಿ ಹಾಲಿ ಇರುವ ಸರ್ಕಾರದ ಬದಲಾವಣೆಯನ್ನು ಅಮೆರಿಕ ಬಯಸುತ್ತಿತ್ತು. ದೇಶದ ತುತ್ತ ತುದಿಯಲ್ಲಿರುವ ಸೇಂಟ್‌ ಮಾರ್ಟಿನ್‌ ದ್ವೀಪದಲ್ಲಿ ನೆಲೆ ಸ್ಥಾಪಿಸಲು ಮುಂದಾಗಿತ್ತು. 

ಭಾರತ ಯಾವತ್ತಿಗೂ ನಮ್ಮ ಪರಮಾಪ್ತ ರಾಷ್ಟ್ರ; ದ್ವೇಷ ಕಾರುತ್ತಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಹಾಡಿಹೊಗಳಿದ್ದಾರೆ

ನಮ್ಮ ಸಾರ್ವಭೌಮತೆಯನ್ನು ನಾನು ಕೈಬಿಟ್ಟು ಅಲ್ಲಿ ಅಮೆರಿಕಕ್ಕೆ ನೆಲೆಯೂರಲು ಅವಕಾಶ ಕೊಟ್ಟಿದ್ದರೆ ನಾನು ಅಧಿಕಾರದಲ್ಲಿ ಮುಂದುವರೆಯಬಹುದಿತ್ತು. ಆದರೆ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ಅಧಿಕಾರ ಬಿಡಬೇಕಾಗಿ ಬಂತು’ ಎಂದಿದ್ದಾರೆ.ಜೊತೆಗೆ, ‘ಅವರು (ಪ್ರತಿಪಕ್ಷ ಬಿಎನ್‌ಪಿ) ವಿದ್ಯಾರ್ಥಿಗಳ ಶವಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬರಲು ಯತ್ನಿಸಿದರು. ಅದಕ್ಕೆ ನಾನು ಅವಕಾಶ ನೀಡಲಿಲ್ಲ’ ಎಂದೂ ಆರೋಪಿಸಿದ್ದಾರೆ.ಇದೇ ವೇಳೆ, ‘ಬಾಂಗ್ಲಾದೇಶದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ದಾಳಿಯನ್ನೂ ಶೇಖ್‌ ಹಸೀನಾ ಬಲವಾಗಿ ಖಂಡಿಸಿದ್ದಾರೆ. ಅಲ್ಲದೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ನಾನು ರಜಾಕಾರರು ಎಂದು ಟೀಕಿಸಿಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

ಮಾಲ್ಡೀವ್ಸ್ ತೊರೆದ ಭಾರತೀಯ ಯೋಧರು: ಅಸಮರ್ಥ ಮಾಲ್ಡೀವ್ಸ್ ಸೇನೆಯ ಕೈಯಲ್ಲಿ ಭಾರತ ನೀಡಿದ ವಿಮಾನಗಳು

ಬಿಎನ್‌ಪಿ ನಕಾರ:ಆದರೆ ಈ ಆರೋಪವನ್ನು ಬಿಎನ್‌ಪಿ ಸ್ಪಷ್ಟವಾಗಿ ತಳ್ಳಿಹಾಕಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಅಮೆರಿಕದ ಹಾಗೂ ವಿಪಕ್ಷದ ಹೆಸರು ಹೇಳುತ್ತಿರುವುದು ಸರಿಯಲ್ಲ ಎಂದಿದೆ.