ಆಂತರಿಕ ಕಲಹದಲ್ಲಿರುವ ಪಾಕಿಸ್ತಾನ ಶೀಘ್ರದಲ್ಲಿಯೇ ನಾಲ್ಕು ಹೋಳಾಗಲಿದೆ. ಇದರಲ್ಲಿ ಮೂರು ಭಾಗ ಭಾರತದೊಂದಿಗೆ ವಿಲೀನವಾಗಲಿದೆ. ಪಾಕಸ್ತಾನದಲ್ಲಿ ಧಾರ್ಮಿಕ ಭಯೋತ್ಪಾದನೆ ಅತಿರೇಕಕ್ಕೆ ಏರಿದೆ ಎಂದು ಬಾಬಾ ರಾಮ್‌ದೇವ್‌ ಹರಿದ್ವಾರದಲ್ಲಿ ಹೇಳಿದ್ದಾರೆ.

ನವದೆಹಲಿ (ಜ. 26): ಹರಿದ್ವಾರದಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಆಚರಿಸಿದ ಬಾಬಾ ರಾಮ್‌ದೇವ್‌, ಶೀಘ್ರದಲ್ಲಿಯೇ ಪಾಕಿಸ್ತಾನ 4 ಹೋಳಾಗಲಿದೆ ಎಂದು ಹೇಳಿದ್ದಾರೆ. ಇದರಲ್ಲಿ ಬಲೂಚಿಸ್ತಾನ ಪ್ರತ್ಯೇಕ ದೇಶವಾಗಲಿದ್ದರೆ, ಪಾಕ್‌ ಆಕ್ರಮಿತ ಕಾಶ್ಮೀರ ಭಾಗ ಹಾಗೂ ಪಂಜಾಬ್‌ ಭಾರತದೊಂದಿಗೆ ವಿಲೀನಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಭಾರತ ಸೂಪರ್‌ ಪವರ್‌ ಆಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ. ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಾಬಾ ರಾಮ್‌ದೇವ್ ಜನರನ್ನುದ್ದೇಶಿಸಿ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ. ವಿಶ್ವ ರಾಜಕೀಯದಲ್ಲಿ ಬಹಳಷ್ಟು ವಿದ್ಯಮಾನಗಳು ನಡೆಯುತ್ತಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧ ನಡೆಯುತ್ತಿದೆ. ಚೀನಾ ಮತ್ತು ಪಾಕಿಸ್ತಾನದಿಂದ ಕೆಟ್ಟ ಚಟುವಟಿಕೆಗಳು ನಡೆಯುತ್ತಿವೆ. ಈಗ ಅಫ್ಘಾನಿಸ್ತಾನ ತಾಲಿಬಾನಿಗಳಿಂದಲೂ ಸುರಕ್ಷಿತವಾಗಿರಲು ಆಗುತ್ತಿಲ್ಲ. ಪಾಕಿಸ್ತಾನದ ಮೂರು ಭಾಗಗಳು ಭಾರತದಲ್ಲಿ ಸೇರುವುದರಿಂದ ಅಖಂಡ ಭಾರತದ ಕನಸು ನನಸಾಗಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಸನಾತನ ಧರ್ಮದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ರಾಮಾಯಣ, ಭಗವದ್ಗೀತೆ, ವೇದ, ಉಪನಿಷತ್ತುಗಳಿಗೆ ಕಳಂಕ ತರುವ ಪ್ರಯತ್ನಗಳು ನಡೆಯುತ್ತಿವೆ. ಇದೆಲ್ಲವೂ ಅಂತಾರಾಷ್ಟ್ರೀಯ ಷಡ್ಯಂತ್ರದ ಅಡಿಯಲ್ಲಿ ನಡೆಯುತ್ತಿದೆ. ಸನಾತನ ಸಂಸ್ಥೆಯ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಸನಾತನ ಧರ್ಮವನ್ನು ಕೆಡಿಸಲು ದೇಶದಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಕೆಲವೊಮ್ಮೆ ಸನಾತನ ಧರ್ಮ ಮತ್ತು ಕೆಲವೊಮ್ಮೆ ನಮ್ಮ ಮಹಾಪುರುಷರ ಚಾರಿತ್ರ್ಯದ ಮೇಲೆ ನಾನಾ ರೀತಿಯಲ್ಲಿ ಆರೋಪ ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವವರು ದೇಶ ವಿರೋಧಿಗಳು. ಇದೆಲ್ಲ ವಿದೇಶಿ ಶಕ್ತಿಗಳ ಒತ್ತಾಯದ ಮೇರೆಗೆ ನಡೆಯುತ್ತಿದೆ ಎಂದಿದ್ದಾರೆ.

ಶೀಘ್ರದಲ್ಲೇ Patanjali ಬ್ರ್ಯಾಂಡ್‌ಗಳ 4 ಐಪಿಒ ಪ್ರಾರಂಭಿಸಲಿರುವ ಬಾಬಾ ರಾಮ್‌ದೇವ್‌

ಇತ್ತೀಚೆಗೆ ಪುಣೆಯಲ್ಲಿ ನಡೆದ ಯೋಗ ಶಿಬಿರದಲ್ಲಿ ಬಾಬಾ ರಾಮ್‌ದೇವ್‌ ಸೀರೆ ಮತ್ತು ಸಲ್ವಾರ್-ಸೂಟ್‌ಗಳಲ್ಲಿಯೂ ಮಹಿಳೆಯರು ಉತ್ತಮವಾಗಿ ಕಾಣುತ್ತಾರೆ ಎಂದಿದ್ದಾರೆ. ನೀವು ನನ್ನಂತೆ ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತೀರಿ. ವೇದಿಕೆಯಲ್ಲಿ ರಾಮ್‌ದೇವ್ ಅವರೊಂದಿಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಕೂಡ ಉಪಸ್ಥಿತರಿದ್ದರು. ಬಾಬಾ ರಾಮದೇವ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಈ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು, ಬಾಬಾ ದೇಶದ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದರು.

ಅಲೋಪಥಿ ವಿರುದ್ಧ ಬಾಬಾ ರಾಮ್‌ದೇವ್‌ ಟೀಕೆ: ಸುಪ್ರೀಂಕೋರ್ಟ್‌ ಆಕ್ರೋಶ

ಈ ವರ್ಷದ ಫೆಬ್ರುವರಿ-ಮಾರ್ಚ್‌ನಲ್ಲಿ ಹರಿಯಾಣದ ಕರ್ನಾಲ್‌ನಲ್ಲಿ ಬಾಬಾ ರಾಮ್‌ದೇವ್ ಬೆಲೆ ಏರಿಕೆಯ ವಿಷಯವಾಗಿ ಆಕ್ರೋಶಗೊಂಡರು. ಆ ವೇಳೆ ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದ ಅವರು, ಈಗ ಸುಮ್ಮನಿರಿ, ಇಲ್ಲದಿದ್ದರೆ ಸರಿ ಇಲ್ಲ ಎಂದು ಹೇಳಿದ್ದರು.