ಕುಂಭಮೇಳ ಆರಂಭವಾದ ಬಳಿಕ ನಿತ್ಯವೂ ಕನಿಷ್ಠ 10-20 ಲಕ್ಷ ಭಕ್ತರ ಆಗಮನಕ್ಕೆ ಸಾಕ್ಷಿಯಾಗಿರುವ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇದೀಗ ಹೊಸ ಸಮಸ್ಯೆಯೊಂದು ಎದುರಾಗಿದೆ. 

ಅಯೋಧ್ಯೆ (ಮಾ.03): ಕುಂಭಮೇಳ ಆರಂಭವಾದ ಬಳಿಕ ನಿತ್ಯವೂ ಕನಿಷ್ಠ 10-20 ಲಕ್ಷ ಭಕ್ತರ ಆಗಮನಕ್ಕೆ ಸಾಕ್ಷಿಯಾಗಿರುವ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇದೀಗ ಹೊಸ ಸಮಸ್ಯೆಯೊಂದು ಎದುರಾಗಿದೆ. ದೇಗುಲದ ಪ್ರವೇಶ ಗೇಟ್‌ ಬಳಿ ನಿತ್ಯವೂ ಲಕ್ಷಾಂತರ ಪ್ರಮಾಣದಲ್ಲಿ ಚಪ್ಪಲಿ ಮತ್ತು ಶೂಗಳು ಸಂಗ್ರಹವಾಗುತ್ತಿದ್ದು, ಅದರ ನಿರ್ವಹಣೆಯೇ ಮಹಾನಗರ ಪಾಲಿಕೆಗೆ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಕಳೆದ 2 ತಿಂಗಳ ಅವಧಿಯಲ್ಲಿ ದೇಗುಲ ಪ್ರವೇಶ ಮತ್ತು ನಿರ್ಗಮನಕ್ಕೆ ಇದ್ದ ಗೇಟ್‌ಗಳಲ್ಲಿ ಬದಲಾವಣೆ ಮಾಡಿರುವುದು. ಕಳೆದ 2 ತಿಂಗಳಲ್ಲಿ ಏನಿಲ್ಲವೆಂದರೂ ಕೋಟಿಗೂ ಹೆಚ್ಚು ಚಪ್ಪಲಿ ಮತ್ತು ಪಾದರಕ್ಷಣೆಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ನಗರದ ಹೊರ ವಲಯದ ತ್ಯಾಜ್ಯ ನಿರ್ವಹಣಾ ಪ್ರದೇಶದಲ್ಲಿ ಕೊಂಡೊಯ್ದು ಹಾಕಿದ್ದಾರೆ.

Add Asianetnews Kannada as a Preferred SourcegooglePreferred

ಸಮಸ್ಯೆ ಏನು?: ಕುಂಭಮೇಳ ಆರಂಭಕ್ಕೂ ಮುನ್ನ ಭಕ್ತರಿಗೆ ದೇಗುಲ ಪ್ರವೇಶಿಸಲು ರಾಮಪಥ ಎಂದು ಕರೆಯುವ ಗೇಟ್ 1ರ ಮೂಲಕ ಅವಕಾಶ ನೀಡಲಾಗುತ್ತಿತ್ತು. ಅಲ್ಲೇ ಪಾದರಕ್ಷೆ ಬಿಟ್ಟು ಒಳಗೆ ಪ್ರವೇಶಿಸುವ ಭಕ್ತರು ಒಳಗೆಲ್ಲಾ ಸುತ್ತಾಡಿ ಮತ್ತೆ ಗೇಟ್‌ 1ರ ಬಳಿಯೇ ಬಂದು ತಮ್ಮ ಪಾದರಕ್ಷೆ ಮರಳಿ ಪಡೆದು ತೆರಳುತ್ತಿದ್ದರು. ಈ ಇಡೀ ಪ್ರಕ್ರಿಯೆಗೆ ಭಕ್ತರು ಅರ್ಧ ಕಿ.ಮೀ ಸುತ್ತಾಡಿದರೆ ಸಾಕಿತ್ತು. ಆದರೆ ಕುಂಭಮೇಳ ಆರಂಭದ ಬಳಿಕ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾದ ಕಾರಣ ಜನಸಂದಣಿ ನಿರ್ವಹಣೆಗಾಗಿ ಭಕ್ತರನ್ನು ಗೇಟ್‌ 1ರ ಮೂಲಕ ಒಳಗೆ ಪ್ರವೇಶಿಸಲು ಬಿಟ್ಟು, ಗೇಟ್‌ 3ರ ಮೂಲಕ ಹೊರಗೆ ಬಿಡಲಾಗುತ್ತಿದೆ. 

ಚಂದ್ರನಂಗಳಕ್ಕೆ ಮೊದಲ ಖಾಸಗಿ ನೌಕೆ ಲಗ್ಗೆ: ಮೊದಲ ಯತ್ನದಲ್ಲೇ ಬ್ಲೂ ಘೋಸ್ಟ್ ಯಶ

ಗೇಟ್‌ 3ರ ಮೂಲಕ ಹೊರಗೆ ಬಂದು ಮತ್ತೆ ಪಾದರಕ್ಷೆ ಪಡೆಯಲು ಗೇಟ್‌1ರ ಬಳಿ ಬರಬೇಕಾದರೆ ಕನಿಷ್ಠ 5-6 ಕಿ.ಮೀ ನಡೆದು ಬರಬೇಕು. ಆದರೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ನೆರೆದಿರುವ ಪ್ರದೇಶದಲ್ಲಿ ವಾಹನ ಸಂಚಾರವೇ ಸಾಧ್ಯವಿಲ್ಲದ ಕಾರಣ ಭಕ್ತರು ತಮ್ಮ ಪಾದರಕ್ಷೆಗಳನ್ನು ಮರಳಿ ಪಡೆಯದೇ ಹಾಗೆಯೇ ತೆರಳುತ್ತಿದ್ದಾರೆ. ಹೀಗಾಗಿ ನಿತ್ಯವೂ ದೇಗುಲದ ಪ್ರವೇಶದ ಗೇಟ್‌ ಬಳಿ ಲಕ್ಷಾಂತರ ಪ್ರಮಾಣದಲ್ಲಿ ಹೊಸ, ಹಳೆಯ ಚಪ್ಪಲಿ, ಶೂ ಸಂಗ್ರಹವಾಗುತ್ತಿದೆ. ನಿತ್ಯವೂ ಸಂಜೆಯವರೆಗೆ ಕಾದ ಬಳಿಕ ಮಹಾನಗರ ಪಾಲಿಕೆ ಅಧಿಕಾರಿಗಳು ಉಳಿದ ಎಲ್ಲಾ ಪಾದರಕ್ಷೆಗಳನ್ನು ಜೆಸಿಬಿ ಮೂಲಕ ಎತ್ತಿ ಲಾರಿಗೆ ತುಂಬಿ ದೇಗುಲದಿಂದ 3-4 ಕಿ.ಮೀ ದೂರದ ತ್ಯಾಜ್ಯ ಸಂಗ್ರಹ ಪ್ರದೇಶದಲ್ಲಿ ಎಸೆದು ಬರುತ್ತಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಹೀಗೆ ಸಂಗ್ರಹವಾದ ಚಪ್ಪಲಿ ಮತ್ತು ಶೂಗಳ ಗುಡ್ಡವೇ ಇದೀಗ ಅಲ್ಲಿ ಕಂಡುಬರುತ್ತಿದೆ. 

- ಮಂದಿರದ ಆಗಮನ, ನಿರ್ಗಮನ ದ್ವಾರ ಬೇರೆ ಆಗಿದ್ದರಿಂದ ಸಮಸ್ಯೆ
- ಪ್ರತಿನಿತ್ಯವೂ ಲಕ್ಷಾಂತರ ಪ್ರಮಾಣದಲ್ಲಿ ಚಪ್ಪಲಿ, ಶೂಗಳ ವಿಲೇವಾರಿ
- ಜೆಸಿಬಿಗಳ ಬಳಸಿ ಪಾದರಕ್ಷೆ ವಿಲೇವಾರಿ ಮಾಡುತ್ತಿರುವ ನಗರ ಪಾಲಿಕೆ

ಕಾಂಗ್ರೆಸ್‌ನಲ್ಲಿ ಮತ್ತೆ ‘ಡಿಕೆಶಿ ಸಿಎಂ’ ಕೂಗು: ಡಿ.ಕೆ.ಶಿವಕುಮಾರ್‌ ಅವರ ಪರ ಬ್ಯಾಟ್‌ ಬೀಸಿದ ವೀರಪ್ಪ ಮೊಯ್ಲಿ

ಏನಿದು ಪಾದರಕ್ಷೆ ಸಮಸ್ಯೆ?
- ಈ ಮೊದಲು ಗೇಟ್‌ 1ರ ಮೂಲಕ ದೇಗುಲ ಪ್ರವೇಶ, ಅಲ್ಲಿಂದಲೇ ನಿರ್ಗಮನ ಇತ್ತು
- ಹೀಗಾಗಿ ಭಕ್ತರು ಅರ್ಧ ಕಿ.ಮೀ ಸುತ್ತಾಡಿ ಬಂದು ಪಾದರಕ್ಷೆ ಪಡೆದು ತೆರಳುತ್ತಿದ್ದರು.
- ಕುಂಭಮೇಳದ ಬಳಿಕ ಗೇಟ್‌ 1ರಲ್ಲಿ ಪ್ರವೇಶ, ಗೇಟ್‌ 3ರ ಮೂಲಕ ನಿರ್ಗಮನ
- ಗೇಟ್‌ 3ರಿಂದ ಹೊರಬಂದು ಗೇಟ್ 1ಕ್ಕೆ ಬರಲು 6 ಕಿ.ಮೀ. ನಡೆದು ಬರಬೇಕು!
- ಗೇಟ್‌ 3ರಿಂದ ಗೇಟ್‌ 1ರವರೆಗಿನ 6 ವಾಹನ ಸಂಚಾರಕ್ಕೆ ಅವಕಾಶ ಇಲ್ಲ
- 6 ಕಿ.ಮೀ. ಬರಿಗಾಲಲ್ಲಿ ನಡೆಯಲಾಗದೆ ಪಾದರಕ್ಷೆ ಬಿಟ್ಟು ಹೋಗುತ್ತಿರುವ ಜನ