ಲಡಾಖ್‌ ಮುಂಚೂಣಿ ಪ್ರದೇಶಕ್ಕೆ ಸೇನಾ ಮುಖ್ಯಸ್ಥ ನರವಣೆ ಭೇಟಿ| ಕ್ರಿಸ್‌ಮಸ್‌ ಪ್ರಯುಕ್ತ ಯೋಧರಿಗೆ ಸಿಹಿ, ಕೇಕ್‌ಗಳ ವಿತರಣೆ| ಶತ್ರು ರಾಷ್ಟ್ರದ ದಾಳಿ ತಡೆಗೆ ಸೇನೆಯ ಸಿದ್ಧತೆ ಬಗ್ಗೆ ಮಾಹಿತಿ ಸಂಗ್ರಹ

ಲಡಾಖ್(ಡಿ.24)‌: ವಾಸ್ತವ ಗಡಿ ರೇಖೆಯಲ್ಲಿ ಭಾರತ ಮತ್ತು ಚೀನಾ ಮಧ್ಯೆ ತ್ವೇಷಮಯ ಸ್ಥಿತಿ ಮುಂದುವರೆರುವಾಗಲೇ, ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರು ಲಡಾಖ್‌ನ ರೆಚಿನ್‌ ಲಾ ಸೇರಿದಂತೆ ಇನ್ನಿತರ ಗಡಿ ಮುಂಚೂಣಿ ಪ್ರದೇಶಗಳಿಗೆ ಬುಧವಾರ ದಿಢೀರ್‌ ಭೇಟಿ ನೀಡಿದರು.

Add Asianetnews Kannada as a Preferred SourcegooglePreferred

ಮೈಕೊರೆಯುವ ಚಳಿಯಲ್ಲೂ ದೇಶದ ರಕ್ಷಣೆಗೆ ಹಗಲಿರುಳು ಶ್ರಮಿಸುವ ಯೋಧರಿಗೆ ಕ್ರಿಸ್‌ಮಸ್‌ ಪ್ರಯುಕ್ತ ಸಿಹಿತಿಂಡಿಗಳು ಮತ್ತು ಕೇಕ್‌ಗಳನ್ನು ನೀಡಿ ಶುಭ ಕೋರಿದರು. ತನ್ಮೂಲಕ ಗಡಿ ಮುಂಚೂಣಿ ಯೋಧರಿಗೆ ನೈತಿಕ ಸ್ಥೈರ್ಯ ತುಂಬಿದರು.

ಅಲ್ಲದೆ ಪಾಕಿಸ್ತಾನ ಮತ್ತು ಚೀನಾ ಜೊತೆ ವ್ಯೂಹಾತ್ಮಕವಾದ ಪ್ರದೇಶಗಳಲ್ಲಿ ಭದ್ರತೆಗೆ ನಿಯೋಜಿಸಲಾದ ಭಾರತೀಯ ಸೇನೆಯ 14 ಕಾಫ್ಸ್‌ರ್‍ ತಂಡದ ಜೊತೆ ಸಭೆ ನಡೆಸಿದರು. ಅಲ್ಲದೆ ಒಂದು ವೇಳೆ ಭಾರತದ ಮೇಲೆ ಚೀನಾದ ಸೇನೆ ದಾಳಿಗೆ ಮುಂದಾದಲ್ಲಿ, ಅದನ್ನು ಎದುರಿಸಲು ಸೇನೆಯ ಒಟ್ಟಾರೆ ಸಿದ್ಧತೆಗಳ ಬಗ್ಗೆ 14 ಕಾಫ್ಸ್‌ರ್‍ನಿಂದ ಮಾಹಿತಿ ಪಡೆದರು.

ಈ ಹಿಂದೆ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೇನೆಯ 3 ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಸಹ ಲಡಾಖ್‌ಗೆ ಭೇಟಿ ನೀಡಿ, 13 ಕಾಫ್ಸ್‌ರ್‍ ಯೋಧರ ಕುಂದುಕೊರತೆಗಳನ್ನು ಆಲಿಸಿದ್ದನ್ನು ಸ್ಮರಿಸಬಹುದು.