370 ರದ್ದತಿ ನಕಲಿ ಯುದ್ಧ ನಿಲ್ಲಿಸಿದೆ: ಭೂಸೇನಾ ಮುಖ್ಯಸ್ಥ!
ಆರ್ಟಿಕಲ್ 370 ರದ್ದತಿ ಪರ ನಿಂತ ನೂತನ ಸೇನಾ ಮುಖ್ಯಸ್ಥ| 'ನೆರೆ ರಾಷ್ಟ್ರದ ನಕಲಿ ಯುದ್ಧ ನಿಲ್ಲಿಸಿದ ಆರ್ಟಿಕಲ್ 370 ರದ್ದತಿ'| ಇಡೀ ಕಾಶ್ಮೀರ ಒಂದಾಗಿದೆ ಎಂದ ಜನರಲ್ ಮುಕುಂದ್ ನರವಣೆ| 'ಪ್ರತ್ಯೇಕತಾವಾದದ ಬೀಜ ಬಿತ್ತುತ್ತಿದ್ದ ನೆರೆ ರಾಷ್ಟ್ರದ ರಾಜಕೀಯ ಹುನ್ನಾರ ವಿಫಲ'| 'ಸಶಸ್ತ್ರ ಪಡೆಗಳು ಭಯೋತ್ಪಾದನೆ ವಿರುದ್ಧ 'ಜಿರೋ ಟಾಲರೆನ್ಸ್' ನೀತಿಯನ್ನು ಅನುಸರಿಸಲಿವೆ'|
ನವದೆಹಲಿ(ಜ.15): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮ, ಪಾಕಿಸ್ತಾನ ಪ್ರೇರಿತ ನಕಲಿ ಯುದ್ಧಕ್ಕೆ ತಡೆ ನೀಡಿದೆ ಎಂದು ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನರವಣೆ ಹೇಳಿದ್ದಾರೆ.
ಭೂಸೇನೆಯ 72ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಜನರಲ್ ನರವಣೆ, ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದನೆ ವಿರುದ್ಧ 'ಜಿರೋ ಟಾಲರೆನ್ಸ್' ನೀತಿಯನ್ನು ಅನುಸರಿಸಲಿವೆ ಎಂದು ಭರವಸೆ ನೀಡಿದರು.
ಆರ್ಟಿಕಲ್ 370 ರದ್ದತಿ ಜಮ್ಮು ಮತ್ತು ಕಾಶ್ಮೀರದ ಒಗ್ಗಟ್ಟನ್ನು ಹೆಚ್ಚಿಸಿದ್ದು, ಪ್ರತ್ಯೇಕತಾವಾದದ ಬೀಜ ಬಿತ್ತುತ್ತಿದ್ದ ನೆರೆ ರಾಷ್ಟ್ರದ ರಾಜಕೀಯ ಹುನ್ನಾರವನ್ನು ವಿಫಲಗೊಳಿಸಿದೆ ಎಂದು ಜನರಲ್ ನರವಣೆ ಅಭಿಪ್ರಾಯಪಟ್ಟಿದ್ದಾರೆ.
ವಿಶೇಷ ಸ್ಥಾನಮಾನ ರದ್ದತಿ ಬಳಿಕ ಇಡೀ ಕಾಶ್ಮಿರ ಒಂದಾಗಿದ್ದು, ಇದು ಸೇನೆಯ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿಸಿದೆ ಎಂದು ಜನರಲ್ ನರವಣೆ ಈ ವೇಳೆ ನುಡಿದರು.
ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪೋಷಿಸುವ ರಾಷ್ಟ್ರಗಳ ವಿರುದ್ಧ ಅದೇ ನೀತಿಯನ್ನು ಜಾರಿಗೊಳಿಸಲು ನಮ್ಮ ಬಳಿ ಅನೇಕ ಅವಕಾಶಗಳಿವೆ ಎಂದು ಜನರಲ್ ನರವಣೆ ಈ ವೇಳೆ ಸೂಚ್ಯವಾಗಿ ಹೇಳಿದ್ದಾರೆ.
ಮುಯ್ಯಿಗೆ ಮುಯ್ಯಿ ಎಂಬ ಜನರಲ್ ನರವಣೆ ಹೇಳಿಕೆ, ಬಲೂಚಿಸ್ತಾನ್ ಸ್ವಾತಂತ್ರ್ಯ ಹೋರಾಟದ ಕುರಿತು ಪರೋಕ್ಷ ಉಲ್ಲೇಖ ಎಂಬ ಮಾತುಗಳು ಕೇಳಿ ಬಂದಿವೆ.