ಅಕ್ರಮ ಗಣಿಗಾರಿಕೆ ತಡೆಯಲು ಹೋದಾಗ, ಫೋನ್‌ನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನೇ 'ನೀವು ಯಾರು' ಎಂದು ಪ್ರಶ್ನಿಸಿದ್ದ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಅವರ ವಿಡಿಯೋ ವೈರಲ್ ಆಗಿದೆ. ಈ ಲೇಖನವು ಈ ಘಟನೆ, ಅಜಿತ್ ಪವಾರ್ ನೀಡಿದ ಸ್ಪಷ್ಟನೆ  ಸಂಪೂರ್ಣ ವಿವರವನ್ನು ನೀಡುತ್ತದೆ.

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ಇಂದು ಬೆಳಗ್ಗೆ ಲಘು ವಿಮಾನ ಪತನದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುಣೆಯಿಂದ ಬಾರಾಮತಿಯತ್ತ ಹೊರಟಿದ್ದ ಲಿಯರ್‌ಜೆಟ್ 45 ಏರ್‌ಕ್ರಾಫ್ಟ್‌, ಬಾರಾಮತಿಯಲ್ಲಿ ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ವಿಮಾನ ಪತನವಾಗಿದೆ. ಇನ್ನು ಅಜಿತ್ ಪವಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಕೂಡಾ ಸಂತಾಪ ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೆಲ್ಲ ಒಂದು ಕಡೆಯಾದರೇ, ಕಳೆದ ಕೆಲವು ತಿಂಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಅಜಿತ್ ಪವಾರ್‌ಗೆ ಶಾಕ್ ನೀಡುವ ಕೆಲಸವನ್ನು ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಅವರು ಮಾಡಿದ್ದರು. ಆ ವಿಡಿಯೋ ವೈರಲ್ ಆಗುತ್ತಿದೆ. 'ನೀವು ಉಪಮುಖ್ಯಮಂತ್ರಿ ಎಂದು ನಾನು ಹೇಗೆ ನಂಬಲಿ? ಎಂದು ದೂರವಾಣಿ ಮೂಲಕ ಪ್ರಭಾವ ಬೀರಲು ಯತ್ನಿಸಿದ್ದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ಗೆ ಐಪಿಎಲ್ ಅಧಿಕಾರಿ ಅಂಜನಾ ಕೃಷ್ಣ ಶಾಕ್ ನೀಡಿದ್ದರು. ಅಕ್ರಮ ಉತ್ಖನನದ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಬಂದಾಗ, ಅಲ್ಲಿದ್ದ ಜನರು ಪೊಲೀಸರೊಂದಿಗೆ ವಾಗ್ವಾದಕ್ಕೆ ಪ್ರಾರಂಭಿಸಿದರು. ಆಗ ಒಬ್ಬ ವ್ಯಕ್ತಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ನೇರವಾಗಿ ಕರೆ ಮಾಡಿದ. ಆಗ ಅಂಜನಾ ಅವರು ಯಾರು ಮಾತಾಡುತ್ತಿದ್ದೀರಾ ಎಂದು ಕೇಳಿದರು. ಆಗ ಮತ್ತೊಂದು ತುದಿಯಿಂದ ನಾನು ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಾತನಾಡುತ್ತಿದ್ದೇನೆ. ಯಾಕೆ ನಾನು ಗೊತ್ತಿಲ್ವಾ? ನಿಮ್ಮ ನಂಬರ್ ಕೊಡಿ, ಬೇಕಿದ್ದರೇ ವಿಡಿಯೋ ಕಾಲ್ ಮಾಡುತ್ತೇನೆ ಎಂದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Scroll to load tweet…

ವಿಡಿಯೋ ವೈರಲ್ ಆಗಿದ್ದರ ಬಗ್ಗೆ ಅಜಿತ್ ಪವಾರ್ ಏನಂದಿದ್ರು?

ಇನ್ನು ಅಧಿಕಾರಿಯ ಜತೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾತನಾಡಿದ ಅಜಿತ್ ಪವಾರ್, ಕಾನೂನು ಪಾಲನೆ ಮಾಡುವಾಗ ಹಸ್ತಕ್ಷೇಪ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಆದರೆ ಆ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಶಾಂತವಾಗಿಸುವುದು ಹಾಗೂ ಅದು ಮತ್ತಷ್ಟು ಉಲ್ಬಣಗೊಳ್ಳದಂತೆ ನೋಡಿಕೊಳ್ಳುವುದು ನನ್ನ ಉದ್ದೇಶವಾಗಿತ್ತು ಎಂದಿದ್ದರು. ನಮ್ಮ ಪೊಲೀಸ್ ಪಡೆ ಮತ್ತು ಮಹಿಳಾ ಅಧಿಕಾರಿಗಳು ಸೇರಿದಂತೆ ಅದರ ಅಧಿಕಾರಿಗಳ ಬಗ್ಗೆ ನನಗೆ ಅಪಾರ ಗೌರವವಿದೆ ಮತ್ತು ಕಾನೂನಿನ ನಿಯಮವನ್ನು ಅತ್ಯುನ್ನತವೆಂದು ಪರಿಗಣಿಸುತ್ತೇನೆ. ಪಾರದರ್ಶಕ ಆಡಳಿತಕ್ಕೆ ಮತ್ತು ಮರಳು ಗಣಿಗಾರಿಕೆ ಸೇರಿದಂತೆ ಪ್ರತಿಯೊಂದು ಕಾನೂನುಬಾಹಿರ ಚಟುವಟಿಕೆಯನ್ನು ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ನಿಭಾಯಿಸಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ಅಜಿತ್ ಪವಾರ್ ಹೇಳಿದ್ದರು.

Scroll to load tweet…

ಅಷ್ಟಕ್ಕೂ ಯಾರು ಈ ಅಂಜನಾ ಕೃಷ್ಣ:

2023ರ ಬ್ಯಾಚ್‌ನ ಐಪಿಎಲ್ ಅಧಿಕಾರಿಯಾದ ಅಂಜನಾ ಕೃಷ್ಣ ಪತ್ರಿಕೋದ್ಯಮ ಮತ್ತು ಗಣಿತಶಾಸ್ತ್ರದ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರು ಯಾವಾಗಲೂ ಓದಿನಲ್ಲಿ ತುಂಬಾ ಮುಂದಿದ್ದರು. ತಿರುವನಂತಪುರದ ಎನ್‌ಎಸ್‌ಎಸ್ ಮಹಿಳಾ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ವಿಜ್ಞಾನ ಪದವಿಯನ್ನು ಗಳಿಸಿದ್ದಾರೆ. ಅವರು ಪೂಜಾಪುರದ ಸೇಂಟ್ ಮೇರಿ ಸೆಂಟ್ರಲ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. 2022-2023 ರ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅವರು 355 ನೇ ಅಖಿಲ ಭಾರತ ರ್ಯಾಂಕ್ ಗಳಿಸಿದರು. ಅವರು ಇಂಗ್ಲಿಷ್ ಮಾಧ್ಯಮದ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಮಲಯಾಳಂ ಸಾಹಿತ್ಯವನ್ನು ತಮ್ಮ ಐಚ್ಛಿಕ ವಿಷಯವಾಗಿ ಆರಿಸಿಕೊಂಡಿದ್ದರು. ನಾಗರಿಕ ಸೇವೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಕೃಷ್ಣ ಪ್ರಮುಖ ಮಲಯಾಳಂ ದಿನಪತ್ರಿಕೆಯಲ್ಲಿ ಸುದ್ದಿ ವರದಿಗಾರರಾಗಿ ಇಂಟರ್ನ್‌ಶಿಪ್ ಮಾಡಿದ್ದರು.

ದಿಟ್ಟ ಅಧಿಕಾರಿ ಅಂಜನಾ ಕೃಷ್ಣ ಹಿನ್ನೆಲೆ ಏನು?

ಕೇರಳದ ತಿರುವನಂತಪುರಂನ ನಿವಾಸಿಯಾಗಿರುವ ಅಂಜನಾ ಕೃಷ್ಣ ಅವರು 2023ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ನಾಗರೀಕ ಸೇವೆ ಮಾಡುತ್ತಿದ್ದಾರೆ. ಅವರ ತಂದೆ ಓರ್ವ ಸಣ್ಣ ಬಟ್ಟೆಯಂಗಡಿ ನಡೆಸುತ್ತಿದ್ದಾರೆ. ಇನ್ನು ಅವರ ತಾಯಿ ಕೋರ್ಟ್‌ನಲ್ಲಿ ಟೈಪ್‌ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಧಾರಣ ಕುಟುಂಬದ ಹಿನ್ನೆಲೆಯಿಂದ ಬಂದ ಅಂಜನಾ ಕೃಷ್ಣ ಇದೀಗ ತಮ್ಮ ದಿಟ್ಟ ನಿಲುವುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.