ಅಹಮದಾಬಾದ್ನಲ್ಲಿ ದೋಸೆ ಹಿಟ್ಟು ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆಗೆ ಆಘಾತಕಾರಿ ತಿರುವು ಸಿಕ್ಕಿದೆ. ಇದು ಫುಡ್ ಪಾಯ್ಸನಿಂಗ್ ಅಲ್ಲ, ಬದಲಿಗೆ ಕೀಟನಾಶಕ ಸೇವನೆಯಿಂದಾದ ಸಾವು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಂಪತಿಯ ಅನುಮಾನಾಸ್ಪದ ನಡವಳಿಕೆ ಮತ್ತು ಹೇಳಿಕೆಗಳು ಇದೊಂದು ಕುಟುಂಬ ಆತ್ಮಹ*ತ್ಯಾ ಯತ್ನವಿರಬಹುದೆಂಬ ಶಂಕೆಯನ್ನು ಹುಟ್ಟುಹಾಕಿದೆ.
ಅಹಮದಾಬಾದ್: ಅಂಗಡಿಯಿಂದ ಖರೀದಿ ಮಾಡಿ ತಂದಿದ್ದ ದೋಸೆ ಹಿಟ್ಟನ್ನು ತಂದು ಇಬ್ಬರು ಮಕ್ಕಳ ಸಾವನ್ನಪ್ಪಿದ್ದು, ದಂಪತಿ ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಅಹಮದಾಬಾದ್ನ ಚಾಂದ್ಖೇಡಾ ಪ್ರದೇಶದಲ್ಲಿ ನಡೆದ ಈ ಘಟನೆ ದೋಸೆ ಹಿಟ್ಟನ್ನು ತಂದು ತಿನ್ನುವವರಿಗೆ ಇದು ಅರಗಿಸಿಕೊಳ್ಳಲಾಗದ ತುತ್ತಾಗಿ ಹೋಗಿತ್ತು. ದೋಸೆ ಹಿಟ್ಟಿನಲ್ಲಿ ಏನೋ ಬೆರೆತಿದೆ, , ಏನೋ ಬಿದ್ದಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡಿ, ಈ ಹಿಟ್ಟನ್ನು ಕೊಟ್ಟಿರುವವರ ವಿರುದ್ಧವೂ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಈಗ ಈ ಘಟನೆಯ ಹಿಂದೆ ಇರೋದು ಬೇರೆಯದ್ದೇ ಸತ್ಯ ಎನ್ನುವ ಶಾಕಿಂಗ್ ವಿಷ್ಯವನ್ನು ಪೊಲೀಸರು ರಿವೀಲ್ ಮಾಡಿದ್ದು, ಈ ಸಾವಿನ ಹಿಂದೆ ಅನುಮಾನದ ಹುತ್ತ ಹೊಗೆಯಾಡುತ್ತಿದೆ.
ಇಬ್ಬರು ಮಕ್ಕಳ ಸಾವು
ಚಾಂದ್ಖೇಡಾ ನಿವಾಸಿಗಳಾದ ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ದಂಪತಿಗಳು ಸ್ಥಳೀಯ ಡೈರಿಯಿಂದ ದೋಸೆ ಹಿಟ್ಟನ್ನು ಖರೀದಿಸಿ ತಂದಿದ್ದರು. ಇದನ್ನು ಸೇವಿಸಿದ ಇಡೀ ಕುಟುಂಬಕ್ಕೆ ತೀವ್ರವಾಗಿ ವಾಂತಿ-ಭೇದಿಯಾಗಿ ಫುಡ್ ಪಾಯ್ಸನ್ ಆಗಿ ಪರಿಣಮಿಸಿದೆ. ಈ ದುರಂತದಲ್ಲಿ ಮೂರು ತಿಂಗಳ ಶಿಶು ರಾಹಾ ಮತ್ತು ನಾಲ್ಕು ವರ್ಷದ ಬಾಲಕಿ ಮಿಶ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿ ಭಾವನಾ ಮತ್ತು ತಂದೆ ವಿಮಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಮೂರು ತಿಂಗಳ ಮಗುವಿಗೆ ದೋಸೆಯಂತಹ ಘನ ಆಹಾರವನ್ನು ನೀಡುವುದಿಲ್ಲ. ಹಾಗಿದ್ದರೂ ಮಗು ಸಾವನ್ನಪ್ಪಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ತಾಯಿ ದೋಸೆ ಸೇವಿಸಿ ವಿಷಾಹಾರದ ಸಮಸ್ಯೆಗೆ ತುತ್ತಾದ ನಂತರ ಮಗುವಿಗೆ ಸ್ತನ್ಯಪಾನ ಮಾಡಿಸಿರಬಹುದು, ಇದರಿಂದ ಮಗುವಿನ ಮೇಲೆ ಪರಿಣಾಮ ಬೀರಿದೆ ಎಂಬ ಸಂಶಯ ವ್ಯಕ್ತವಾಗಿತ್ತು.
ಇದು ಆಕಸ್ಮಿಕ ಘಟನೆಯಲ್ಲ?
ಆದರೆ, ಇದೀಗ ಇಡೀ ಪ್ರಕರಣ ಹಿಂದೆ ಆ*ತ್ಮಹತ್ಯೆಯ ಅನುಮಾನ ವ್ಯಕ್ತವಾಗಿದೆ! ಚಾಂದ್ಖೇಡಾ ಪೊಲೀಸರು ಮತ್ತು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನ ಆಹಾರ ಇಲಾಖೆ ಅಧಿಕಾರಿಗಳು ದೋಸೆ ಹಿಟ್ಟಿನ ಮಾದರಿಯನ್ನು ಸಂಗ್ರಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಅದನ್ನು ಪರೀಕ್ಷೆಗೆ ಒಡ್ಡಲಾಗಿದ್ದು, ಇನ್ನಷ್ಟೇ ವರದಿ ಬರಬೇಕಿದೆ.. ಮಕ್ಕಳ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಇದು ಕೇವಲ ಫುಡ್ ಪಾಯ್ಸನಿಂಗ್ ಅಥವಾ ಆಹಾರದಲ್ಲಿನ ಕಲಬೆರಕೆಯೇ ಎಂಬುದು ಸ್ಪಷ್ಟವಾಗಲಿದೆ. ಆದರೆ ಪ್ರಾಥಮಿಕ ವರದಿಯಲ್ಲಿ, ಪೊಲೀಸರು ಹಾಗೂ ವೈದ್ಯರು ಕಂಡುಕೊಂಡಿರುವುದೇ ಬೇರೆ. ದಂಪತಿಯ ರಕ್ತದ ಮಾದರಿಗಳಲ್ಲಿ ಪ್ರಬಲ ಕೀಟನಾಶಕವಾದ ಅಲ್ಯೂಮಿನಿಯಂ ಫಾಸ್ಫೈಡ್ ಪತ್ತೆಯಾಗಿದೆ ಎಂದು ಎಫ್ಎಸ್ಎಲ್ ವರದಿಗಳು ತಿಳಿಸಿವೆ. ಆದ್ದರಿಂದ ಇದು ದೋಸೆಹಿಟ್ಟಿನಲ್ಲಿ ಬಂದದ್ದು ಹೇಗೆ ಎನ್ನುವ ಬಗ್ಗೆ ಆಳವಾಗಿ ತನಿಖೆ ಮಾಡಿರುವ ಪೊಲೀಸರಿಗೆ ಇನ್ನಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಆತ್ಮಹ*ತ್ಯೆ ಉದ್ದೇಶ?
ದಂಪತಿಗಳಾದ ವಿಮಲ್ ಮತ್ತು ಭಾವನಾ ಪ್ರಜಾಪತಿ, ಘಟನೆಗಳ ಸಮಯ ಮತ್ತು ಆಹಾರ ಸೇವನೆಯ ಬಗ್ಗೆ ಆಗಾಗ್ಗೆ ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ. 200 ಕ್ಕೂ ಹೆಚ್ಚು ಜನರಿಗೆ ಮಾರಾಟವಾದ ಈ ದೋಸೆ ಹಿಟ್ಟು ಒಂದೇ ಕುಟುಂಬದ ಎಲ್ಲಾ ಸದಸ್ಯರಿಗೆ ಮಾರಕ ಉಂಟು ಮಾಡಿದ್ದು ಹೇಗೆ ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದು ವೇಳೆ ಮಗುವಿಗೆ ತಾಯಿ ಎದೆಹಾಲು ಉಣಿಸಿದ್ದರೆ, ಅಷ್ಟು ಬೇಗ ಮಗು ಸಾವನ್ನಪ್ಪಿದ್ದು ಹೇಗೆ ಎನ್ನುವ ಬಗ್ಗೆ ಇನ್ನಷ್ಟು ಅನುಮಾನ ಬಂದಿದ್ದು, ಉದ್ದೇಶಪೂರ್ವಕವಾಗಿ ಮಗುವಿಗೆ ನೀಡಲಾಗಿದೆ ಎನ್ನುವ ಗುಮಾನಿ ಬಂದಿದೆ.
ಎಲ್ಲವೂ ಗುಟ್ಟು
ವಿಶೇಷವಾಗಿ ಮೊದಲು ಮಗು ಸಾವನ್ನಪ್ಪಿತ್ತು. ಆದರೆ ಈ ಬಗ್ಗೆ ದಂಪತಿ ಎಲ್ಲಿಯೂ ವಿಷಯ ಬಹಿರಂಗಪಡಿಸಿರಲಿಲ್ಲ. ಏಪ್ರಿಲ್ 4 ರಂದು ಕುಟುಂಬವು ತಮ್ಮ ಮೂರು ತಿಂಗಳ ಶಿಶುವಿನ ಅಂತ್ಯಕ್ರಿಯೆಯನ್ನು ರಹಸ್ಯವಾಗಿ ಏಕೆ ನಡೆಸಿತು, ಒಂದು ದಿನದ ನಂತರ ಅವರ ಎರಡನೇ ಮಗಳು ಸಾವನ್ನಪ್ಪಿದ ನಂತರವೇ ಈ ವಿಷಯ ಬೆಳಕಿಗೆ ಬಂದಿತ್ತು. ಹಾಗಿದ್ದರೆ ಇದು ದೋಸೆಹಿಟ್ಟಿನ ತಪ್ಪಲ್ಲ, ಬದಲಿಗೆ ಇಡೀ ಕುಟುಂಬ ಆತ್ಮಹ*ತ್ಯೆಯನ್ನು ಮಾಡಿಕೊಳ್ಳಲು ಯೋಚಿಸಿತ್ತೇ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ವಿಮಲ್ ಪ್ರಜಾಪತಿಯನ್ನು ಕೆಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಬಳಿಕ ಸತ್ಯ ತಿಳಿಯಬೇಕಿದೆ. ಜೊತೆಗೆ, FSL ವರದಿ ಬದಬೇಕಿದೆ. "ಮಕ್ಕಳ ದೇಹದಲ್ಲಿ ಕಂಡುಬಂದಿರುವ ವಿಷಕಾರಿ ವಸ್ತುಗಳು ಮನೆಯಿಂದ ವಶಪಡಿಸಿಕೊಂಡ ವಸ್ತುಗಳಿಗೆ ಅಥವಾ ಡೈರಿ ಬ್ಯಾಟರ್ಗೆ ಹೊಂದಿಕೆಯಾಗುತ್ತದೆಯೇ ಅಥವಾ ಬೇರೆ ಆಹಾರೇತರ ವಸ್ತು ಸೇರಿದೆಯೇ ಎಂಬುದನ್ನು ಇದು ನಿರ್ಣಾಯಕವಾಗಿ ಬಹಿರಂಗಪಡಿಸುತ್ತದೆ ಎಂದಿದ್ದಾರೆ ಪೊಲೀಸರು!


