Breaking: ಬಿಜೆಪಿ ಸೇರಿದ ವಾಯುಸೇನೆ ಮಾಜಿ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ!
ಲೋಕಸಭೆ ಚುನಾವಣೆಗೂ ಮುನ್ನ ವಾಯುಪಡೆಯ ಮಾಜಿ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ
ನವದೆಹಲಿ (ಮಾ.24): ಭಾರತೀಯ ವಾಯುಸೇನೆಯ ಮಾಜಿ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಯಾಗಿದ್ದಾರೆ. 2019ರ ಸೆಪ್ಟೆಂಬರ್ 19 ರಿಂದ 2021ರ ಸೆಪ್ಟೆಂಬರ್ 30ರವರೆಗೆ ಇವರು ಭಾರತೀಯ ವಾಯುಸೇನೆಯ ಚೀಫ್ ಆಫ್ ಏರ್ ಸ್ಟಾಫ್ ಆಗಿ ಸೇವೆ ಸಲ್ಲಿಸಿದ್ದರು. ಭಾನುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ರಾಕೇಶ್ ಭದೌರಿಯಾ ಬಿಜೆಪಿಗೆ ಸೇರ್ಪಡೆಗೊಂಡರು. ಪ್ರಸ್ತುತ ಭಾರತೀಯ ವಾಯುಸೇನೆಯ ಮುಖ್ಯಸ್ಥರಾಗಿರುವ ವಿವೇಕ್ ರಾಮ್ ಚೌಧರಿ ಅವರಿಗೂ ಮುನ್ನ ಆರ್ಕೆಎಸ್ ಭದೌರಿಯಾ ಈ ಹುದ್ದೆಯಲ್ಲಿದ್ದರು. 2019ರ ಮೇ 1 ರಂದು ಏರ್ ಮಾರ್ಷಲ್ ಅನಿಲ್ ಖೋಸ್ಲಾ ಅವರ ನಿವೃತ್ತಿಯ ಬಳಿಕ ವೈಸ್ ಚೀಫ್ ಆಫ್ ದ ಏರ್ ಸ್ಟಾಫ್ ಆಗಿಯೂ ಜವಾಬ್ದಾರಿ ಹೊತ್ತಿದ್ದರು. ತಮ್ಮ ಸೇನಾ ಅವಧಿಯಲ್ಲಿ 26ಕ್ಕೂ ಅಧಿಕ ವಿವಿಧ ಮಾದರಿಯ ಯುದ್ಧವಿಮಾನಗಳು ಹಾಗೂ ಟ್ರಾನ್ಸ್ಪೋರ್ಟ್ ಏರ್ಕ್ರಾಫ್ಟ್ಅನ್ನು ಚಲಾಯಿಸಿದ ಅನುಭವವನ್ನು ಇವರು ಹೊಂದಿದ್ದಾರೆ. ಒಟ್ಟು 4250 ಗಂಟೆಗಳ ಹಾರಾಟದ ಅನುಭವ ಇವರಲ್ಲಿದೆ.
ಆಗ್ರಾ ಜಿಲ್ಲೆಯ ಬಾಹ್ ತೆಹಸಿಲ್ ಪ್ರದೇಶದವರಾದ ಆರ್ಕೆಎಸ್ ಭದೌರಿಯಾ ಅವರನ್ನು ಬಿಜೆಪಿ, ಉತ್ತರ ಪ್ರದೇಶದ ಗಾಜಿಯಾಬಾದ್ನಿಂದ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಗಾಜಿಯಾಬಾದ್ನಿಂದ ನಿವೃತ್ತ ಸೇನಾ ನಾಯಕ ಮೇಜರ್ ಜನರಲ್ ವಿಕೆ ಸಿಂಗ್ ಬಿಜೆಪಿಯಿಂದ ಲೋಕಸಭಾ ಸಂಸದರಾಗಿದ್ದಾರೆ. ಇದೇ ಕ್ಷೇತ್ರದಿಂದ ಅವರು ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. 2014ರಲ್ಲಿ ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದ ವಿಕೆ ಸಿಂಗ್, 2019ರಲ್ಲೂ ಜಯದ ಸಿಹಿ ಕಂಡಿದ್ದರು. ಇಲ್ಲಿಯವರೆಗೂ ಬಿಜೆಪಿ ನಾಲ್ಕು ಬಾರಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಗಾಜಿಯಾಬಾದ್ ಕ್ಷೇತ್ರಕ್ಕೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಶನಿವಾರ ಬಿಜೆಪಿಯ ಉನ್ನತ ನಾಯಕರು ಹಾಗೂ ಪ್ರಧಾನಿ ಮೋದಿ ಹೈವೋಲ್ಟೇಜ್ ಸಿಇಸಿ ಸಭೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಅಭ್ಯರ್ಥಿಗಳ ಐದನೇ ಲಿಸ್ಟ್ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ಭಾರತದ ಮಾಜಿ ಸೇನಾ ಮುಖ್ಯಸ್ಥರ ತೈವಾನ್ ಭೇಟಿ, ಒನ್ ಚೀನಾ ಪಾಲಿಸಿ ಗೌರವಿಸಿ ಎಂದ ಚೀನಾ!
ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾತನಾಡಿದ ವಾಯುಪಡೆಯ ಮಾಜಿ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ 'ಮತ್ತೊಮ್ಮೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನನಗೆ ಈ ಅವಕಾಶವನ್ನು ನೀಡಿದ ಪಕ್ಷದ ನಾಯಕತ್ವಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನಾನು ನಾಲ್ಕು ದಶಕಗಳಿಗಿಂತ ಹೆಚ್ಚಿನ ಕಾಲ ಐಎಎಫ್ಗೆ ಸೇವೆ ಸಲ್ಲಿಸಿದ್ದೇನೆ. ಆದರೆ ನನ್ನ ಸೇವೆಯ ಅತ್ಯುತ್ತಮ ಸಮಯ ಬಿಜೆಪಿ ಸರ್ಕಾರದ ನಾಯಕತ್ವ ಕಳೆದ 8 ವರ್ಷಗಳು. ಈ ಸರ್ಕಾರವು ನಮ್ಮ ಸಶಸ್ತ್ರ ಪಡೆಗಳನ್ನು ಸಬಲೀಕರಣಗೊಳಿಸಲು ಮತ್ತು ಆಧುನೀಕರಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ತೆಗೆದುಕೊಂಡ ಕಠಿಣ ಕ್ರಮಗಳು ಸೇನಾಪಡೆಗಳಲ್ಲಿ ಸಾಮರ್ಥ್ಯ ಹಾಗೂ ಹೊಸ ಆತ್ಮವಿಶ್ವಾಸವನ್ನು ನೀಡಿದೆ. ಸರ್ಕಾರದ ಸ್ವಾವಲಂಬಿ ನಡೆಯ ಫಲಿತಾಂಶಗಳನ್ನು ನಾವೀಗಾಗಲೇ ಕಾಣುತ್ತಿದ್ದೇವೆ. ಭದ್ರತೆಯ ದೃಷ್ಟಿಯಿಂದ, ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮಗಳು ಬಹಳ ಮುಖ್ಯ ಮತ್ತು ಭಾರತವನ್ನು ಜಾಗತಿಕವಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ..." ಎಂದು ಹೇಳಿದ್ದಾರೆ.
RKS ಬದೌರಿಯಾ ಸೆ.30ಕ್ಕೆ ನಿವೃತ್ತಿ, ಮುಂದಿನ IAF ಮುಖ್ಯಸ್ಥರಾಗಿ ವಿಆರ್ ಚೌಧರಿ ಆಯ್ಕೆ!