ದೆಹಲಿ ಚುನಾವಣೆಗೆ ಬಿಜೆಪಿ ಉಚಿತ ಕೊಡುಗೆಗಳ ಪ್ರಣಾಳಿಕೆ ಘೋಷಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ನವದೆಹಲಿ: ಬಿಜೆಪಿ ದೆಹಲಿ ವಿಧಾನಸಭೆಗೆ ಚುನಾವಣೆಗೆ ಉಚಿತ ಕೊಡುಗೆಗಳ ಪ್ರಣಾಳಿಕೆ ಘೋಷಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
‘ಬಿಜೆಪಿ ಆಮ್ ಆದ್ಮಿ ಪಕ್ಷದಿಂದ ನಕಲು ಮಾಡಿದೆ. ಆದರೆ ಉಚಿತಗಳ ವಿರೋಧೀಯಾದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭರವಸೆಗಳನ್ನು ತಾವು ಒಪ್ಪಲ್ಲ ಎಂದು ಹೇಳಬೇಕು’ ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದ, ’ಈಗಲಾದರೂಈ ಮೋದಿ ಉಚಿತ ಯೋಜನೆಗಳು ದೇಶಕ್ಕೆ ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಲಿ’ ಎಂದಿದ್ದಾರೆ.
ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಉಚಿತ ಭರವಸೆಗಳನ್ನು ಟೀಕಿಸುವುದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ಅರಿತುಕೊಳ್ಳಬೇಕು. ಆಪ್ ಉಚಿತ ಯೋಜನೆಗಳನ್ನು ನೀಡುತ್ತದೆ ಎಂದು ಬಿಜೆಪಿ ಪದೇ ಪದೇ ಹೇಳುತ್ತದೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ, ತಾವೂ ಕೂಡ ದೆಹಲಿಯ ಜನತೆಗೆ ಉಚಿತ ಭರವಸೆಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಮೋದಿ ನಮ್ಮ ಬಗ್ಗೆ ಮಾಡಿದ ಟೀಕೆ ತಪ್ಪು ಎಂದು ಒಪ್ಪಿಕೊಳ್ಳಬೇಕು. ಉಚಿತ ಯೋಜನೆಗಳು ತಪ್ಪಲ್ಲ ಎನ್ನುವುದು ಅರಿತುಕೊಳ್ಳಬೇಕು. ಅದು ದೇವರ ಕೊಡುಗೆ. ಅದರಿಂದ ದೇಶಕ್ಕೆ ಒಳ್ಳೆಯದು. ಮೋದಿಯವರು ಮುಂದೆ ಬಂದು ಬಿಜೆಪಿ ನೀಡಿರುವ ಭರವಸೆಗಳಿಗೆ ಒಪ್ಪಿಗೆ ನೀಡಬೇಕು’ ಎಂದರು.
ಇದನ್ನೂ ಓದಿ: ದಿಲ್ಲಿ ಚುನಾವಣೆಯಲ್ಲೂ ಗ್ಯಾರಂಟಿ ಮಂತ್ರ, ನಿರುದ್ಯೋಗಿಗಳಿಗೆ ಮಾಸಿಕ 8500 ರು. ಕಾಂಗ್ರೆಸ್ ಘೋಷಣೆ!
ಅಲ್ಲದೇ ಬಿಜೆಪಿಯು ತಮ್ಮ ಪ್ರಣಾಳಿಕೆಯನ್ನು ನಕಲು ಮಾಡಿದೆ ಎಂದು ಆರೋಪಿಸಿರುವ ಆಪ್, ‘ ಬಿಜೆಪಿಯ ಪ್ರಣಾಳಿಕೆಯು ಆಪ್ ಈಗಾಗಲೇ ನೀಡುತ್ತಿರುವ ಭರವಸೆಯನ್ನು ಮಾತ್ರ ನೀಡುತ್ತಿದೆ. ಹಾಗಾದರೆ ಜನರು ಅವರಿಗೆ ಏಕೆ ಮತ ಹಾಕಬೇಕು. ಬಿಜೆಪಿ ಪ್ರಣಾಳಿಕೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಭರವಸೆಯನ್ನು ನೀಡಲು ವಿಫಲವಾಗಿದೆ. ಹಳೆಯ ಯೋಜನೆಗಳನ್ನೇ ಭರವಸೆ ನೀಡಿದೆ. ಮೊಹಲ್ಲಾ ಕ್ಲಿನಿಕ್ಗಳನ್ನು ಮುಚ್ಚಲಾಗುತ್ತದೆ ಎಂದು ಬಿಜೆಪಿ ಭರವಸೆ ಹೇಳುತ್ತದೆ. ಈ ಕ್ಲಿನಿಕ್ ಬೇಕೋ ಬೇಡವೋ ಎಂದು ಕೇಳಲು ಆಪ್ ದೆಹಲಿ ಜನರ ಬಳಿ ಹೋಗಲಿದೆ’ ಎಂದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲಿ ಬಿಜೆಪಿಯಿಂದ ಮಹಿಳೆಯರಿಗೆ ಮಾಸಿಕ ₹2500 ಭರವಸೆ
