ನಡೆಯಲಿಲ್ಲ ಉದಯ್ಪುರ್ ಚಿಂತನ ಶಿಬಿರದ ಜಾದೂ, ಹಾರ್ದಿಕ್ ಪಟೇಲ್ ಕಾಂಗ್ರೆಸ್ಗೆ ರಾಜೀನಾಮೆ!
* ಕಾಂಗ್ರೆಸ್ಗೆ ಹಾರ್ದಿಕ್ ಪಟೇಲ್ ರಾಜೀನಾಮೆ
* ಉದಯ್ಪುರ್ ಚಿಂತನ ಶಿಬಿರದ ಬೆನ್ನಲ್ಲೇ ಹಾರ್ದಿಕ್ ಮಹತ್ವದ ಘೋಷಣೆ
* ಹಾರ್ದಿಕ್ ಪಟೇಲ್ ಈ ನಿರ್ಧಾರಕ್ಕೇನು ಕಾರಣ?
ನವದೆಹಲಿ(ಮೇ.18) : ಉದಯಪುರ್ `ಜಾದು' ಮತ್ತು ಹಾರ್ದಿಕ್ ಪಟೇಲ್ ರಾಜೀನಾಮೆ, ಮೂರೇ ದಿನಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಇವೆರಡು ತದ್ವಿರುದ್ಧ ಪದಗಳಾಗಿ ಬಿಟ್ಟಿವೆ. ಹೊಸ ಆಶಯ, ಹೊಸ ಸಂಕಲ್ಪ ಹೊತ್ತು ಮುಂದಿನ ಚುನಾವಣೆಗೆ ತಯಾರಿ ನಡೆಸಲು ಗಾಂಧಿ ಕುಟುಂಬ ಮಂಡಿಸಿದ ನಿರ್ಣಯಕ್ಕೆ ಇಡೀ ಕಾಂಗ್ರೆಸ್ ಕುಟುಂಬ ಒಪ್ಪಿಗೆ ಸೂಚಿಸಿತ್ತು. ಇಷ್ಟರ ನಡುವೆಯೇ ಯುವನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಇಸ್ತಿಫಾ ನೀಡಿದ್ದಾರೆ.
ಉದಯಪುರ್, ಮರುಭೂಮಿಯ ರಾಜ್ಯ, ರಾಜಸ್ಥಾನದಲ್ಲಿ ಹೆಚ್ಚುಕಡಿಮೆ ಯಾವಾಗಲೂ 35-40 ಡಿಗ್ರಿ ಸೆಲಿಯ್ಸನ್ ಉಷ್ಟಾಂಶ ಇರುವ ನಗರ ಇದು. ಬೆಟ್ಟಗಳ ನಡುವೆ ಇರುವ ಕೆರೆಗಳು ಒಂದಷ್ಟು ವಾತಾವರಣಕ್ಕೆ ತಂಪೆರೆಯುವ ವಾತಾವರಣ ಸೃಷ್ಠಿಸಿದರೂ ಆದರೆ ಬಿಸಿಲಿನ ಅಬೆ ಮಾತ್ರ ಯಾವಾಗಲೂ ಮೈಯಲ್ಲಿನ ನೀರು ಇಳಿಸುತ್ತಲ್ಲೇ ಇರುತ್ತೆ. ಇಂಥ ವಾತಾವರಣದ ಜೊತೆಗೆ ಬೇಸಿಗೆ ಪೀಕ್ ತಲುಪುತ್ತಿರುವಾಗಲ್ಲೇ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಉದಯಪುರ್ನಲ್ಲಿ ಬಹುದೊಡ್ಡ ಚಿಂತನಾ-ಮಂಥನ ಕಾರ್ಯಕ್ರಮ ಹಮ್ಮಿಕೊಂಡಿತು. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಇರುವ ಕಾರಣಕ್ಕೆ ಆ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು ಅಂತ ಮತ್ತೆ ಹೇಳಬೇಕಾಗಿಲ್ಲ.
ಹೊಸ ಹುರುಪು : ಹೌದು. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಕನಸುಗಳು ಬಿತ್ತಲು ಒಂದಷ್ಟರ ಮಟ್ಟಿಗೆ ಯಶಸ್ವಿಯಾಯ್ತು. ಇಡೀ ಇಂಡಿಯಾದಲ್ಲಿ ಒಂದೊಂದೇ ರಾಜ್ಯ ಅಧಿಕಾರ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಮತ್ತಷ್ಟು ತಳಮಟ್ಟ ಕಾಣುವ ಲಕ್ಷಣಗಳು ಇವೆ ಅಂತೆಲ್ಲಾ ಅಭಿಪ್ರಾಯಗಳು ಹಿರಿಯ ನಾಯಕರಿಂದ ವ್ಯಕ್ತವಾದಾಗ, ರಿಪೇರಿ ಕೆಲಸಕ್ಕೆ ಗಾಂಧಿ ಕುಟುಂಬ ಕೈ ಹಾಕಿತು. ಇದರ ಭಾಗವೇ ಉದಯಪುರ್ದ ಮೂರು ದಿನಗಳ ಹೊಸ ಸಂಕಲ್ಪ ಸಮಾವೇಶ. ಇಡೀ ದೇಶದಲ್ಲಿರುವ ಕಾಂಗ್ರೆಸ್ ನಾಯಕರನ್ನು ಕರೆದು ಮೂರು ದಿನಗಳ ಕಾಲ ದೇಶದ ಸಮಸ್ಯೆಗಳು ಹಾಗು ಇದಕ್ಕೆ ಕಾಂಗ್ರೆಸ್ ಮಾಡಬೇಕಾದ ಕೆಲಸಗಳ ಕುರಿತು ಚರ್ಚೆ ನಡೆಸಿತು. ದೇಶದ ಆರ್ಥಿಕತೆ, ನಿರುದ್ಯೋಗ, ರಾಜಕೀಯ ದ್ರುವೀಕರಣ, ಕಾಂಗ್ರೆಸ್ ಬ್ರಾಂಡ್ ಆಗಿರುವ `ಜಾತ್ಯಾತೀತೆ' ಅನ್ನೋ ಪದವನ್ನು ಪ್ರಾದೇಶಿಕ ಪಕ್ಷಗಳು ಹಂಚಿಕೊಳ್ಳುತ್ತಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಯ್ತು. ಒಂದೊಂದು ವಿಭಾಗಗಕ್ಕೆ ಒಬ್ಬರಂತೆ ಹೆಚ್ಚು ಕಡಿಮೆ ಎಲ್ಲಾ ವಿಭಾಗಗಳಲ್ಲೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೃಷ್ಣಭೈರೇಗೌಡ, ಬಿ.ವಿ.ಶ್ರೀನಿವಾಸ್ ಹೀಗೆ ಕರ್ನಾಟಕದ ಕಾಂಗ್ರೆಸ್ ನಾಯಕರು ಸ್ಥಾನ ಗಿಟ್ಟಿಸಿಕೊಂಡಿದ್ದರು. ಇಡೀ ದೇಶದ ಪರಿಸ್ಥಿತಿಯನ್ನು ಚಿಂತನಾ-ಮಂಥನ ಸಭೆಯಲ್ಲಿ ಮಂಡಿಸಿದರು. ಈ ಎಲ್ಲಾ ಸಭೆಗಳಲ್ಲಿ ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಸಕ್ರಿಯವಾಗಿ ಭಾಗವಹಿಸಿದ್ದರು.
ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹುರುಪು ತುಂಬಿದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಯುವರಾಜ ರಾಹುಲ್ ಗಾಂಧಿಯವರ ಮಾತುಗಳು. ಬಿಜೆಪಿ ಸರ್ಕಾರದ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ರಾಜಕಾರಣ, ನಿರುದ್ಯೋಗದ ಸಮಸ್ಯೆ ಬಗ್ಗೆ ಸೋನಿಯಾ ಗಾಂಧಿಯವರು ಕಟುಶಬ್ಧಗಳಲ್ಲಿ ಹೇಳಿದರೆ, ಸಂಘಟನೆ, ಕಾಂಗ್ರೆಸ್ ಅಸ್ಥಿತ್ವದ ಕುರಿತಾಗಿ ರಾಹುಲ್ ಗಾಂಧಿಯವರ ಮಾಡಿದ ಭಾಷಣ ಯುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿತು. `ನಾನು ಪಕ್ಕಾ ಕಾಂಗ್ರೆಸ್ ಮೆನ್. ಕಾಂಗ್ರೆಸ್ ಸಿದ್ದಾಂತಗಳಿಗೆ ನಾನು ಬದ್ದ. ದೇಶದ ಉಳಿವಿಗೆ, ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಬೇಕು. ಯಾವ ಆರ್.ಎಸ್ಎಸ್ ಹಾಗು ಬಿಜೆಪಿಗೆ ನಾನು ಹೆದರುವುದಿಲ್ಲ. ಬಿಜೆಪಿ ವಿರುದ್ಧ ತೊಡೆತಟ್ಟಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಅಂದಾಗ ಅಲ್ಲಿ ನೇರದವರಿಗೂ ಸೇರಿದಂತೆ ಮೊಬೈಲ್ ಮೂಲಕ ರಾಹುಲ್ ಗಾಂಧಿ ಭಾಷಣ ಕೇಳುತ್ತಿದ್ದ ಕಾಂಗ್ರೆಸ್ ಭಕ್ತನಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಾಯ್ತು ಅನ್ನಿ.
ಜಿ-24 ಉತ್ತರವೇ ? ಇನ್ನು ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ಸಿಡಿದೆದ್ದು ಬಹಿರಂಗವಾಗಿ ಪತ್ರ ಬರೆಯುವ ಮೂಲಕ ಜಿ-24 ಕಾಂಗ್ರೆಸ್ ನಾಯಕರು ತೀವ್ರ ಅಸಮಧಾನ ಹೊರಹಾಕಿದ್ದರು. ಗಾಂಧಿ ಕುಟುಂಬ ಹೊರತಾದವರು ಪಕ್ಷದ ನಾಯಕತ್ವ ವಹಿಸಬೇಕು ಅಂತ ಬಹಿರಂಗವಾಗಿಯೇ ಆಗ್ರಹಿಸಿದ್ದರು. ಇಂಥ ಪತ್ರಕ್ಕೆ ಸಹಿ ಹಾಕಿದ ಕಪಿಲ್ ಸಿಬಲ್ ಸೇರಿ ಹಲವು ನಾಯಕರನ್ನು ಪಕ್ಷ ನಾನಾ ಕಾರಣಗಳಿಗೆ ದೂರ ಇಟ್ಟಿದ್ದು ಬೇರೆಯ ಮಾತು. ಅದೇ ಪಟ್ಟಿಯಲ್ಲಿದ್ದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಶಶಿತರೂರ್ ಕೆಲವರಿಗೆ ಮಾತ್ರ ಉದಯಪುರ್ ಹೊಸ ಸಂಕಲ್ಪ ಸಮಾವೇಶಕ್ಕೆ ಆಹ್ವಾನ ನೀಡಲಾಗಿತ್ತು. ಇದೇ ವೇದಿಕೆಯ ಮೇಲೆ ಭಾಷಣ ಮಾಡಿದ ಯುವರಾಜ ರಾಹುಲ್ ಗಾಂಧಿ, ಹಿರಿಯರನ್ನು ಒಳಗೊಂಡ ಕಾಂಗ್ರೆಸ್ ಪಕ್ಷ ಯಾವಾಗಲು ಅಸ್ಥಿತ್ವದಲ್ಲಿರುತ್ತೆ ಅಂತ ಹೇಳುವ ಮೂಲಕ ಅಸಮಾಧಾನಿತರನ್ನು ಸಮಾಧಾನ ಮಾಡುವ ಕೆಲಸ ಮಾಡಿದರು ಎನ್ನಲಾಗುತ್ತಿದೆ.
ಯುವಕರಿಗೆ ಆದ್ಯತೆ : ಒನ್ ಫ್ಯಾಮಿಲಿ ಒನ್ ಟಿಕೆಟ್, ಒಂದೇ ಕುಟುಂಬದವರು ಇದ್ದರೂ ಐದು ವರ್ಷ ಪಕ್ಷದಲ್ಲಿ ಕೆಲಸ ಮಾಡಿರಬೇಕು. ಪಕ್ಷದ ಹುದ್ದೆಗಳಲ್ಲಿ ಐದು ವರ್ಷಕ್ಕಿಂತ ಒಬ್ಬ ವ್ಯಕ್ತಿ ಹೆಚ್ಚು ಇರಬಾರದು, ಚುನಾವಣೆಗೆ ಸ್ಪರ್ಧಿಸುವಾಗ ವಯಸ್ಸು, ಯುವಕರಿಗೆ ಆದ್ಯತೆ ಹೀಗೆ ಚರ್ಚೆಗೆ ಬಂದ ಇಂಥ ಹತ್ತಾರು ವಿಚಾರಗಳು ಯುವ ಕಾಂಗ್ರಸ್ಸಿಗರು ಖುಷಿಯಾದರು. ಅಲ್ಲದೇ ಇದು ಎರಡನೇ ತಲೆಮಾರಿನ ನಾಯಕತ್ವ, ಕಾಂಗ್ರೆಸ್ ಇಷ್ಟಪಡುವ ಯುವಮನಸ್ಸುಗಳನ್ನು ಕಾಂಗ್ರೆಸ್ ಪಕ್ಷ ತನ್ನತ್ತ ಸೆಳೆಯಲು ಹೊಸ ಪ್ರಯತ್ನಗಳು ಮಾಡುತ್ತಿದೆ ಎನ್ನುವ ಲಕ್ಷಣಗಳು ತೋರಿಸುತ್ತಿದೆ ಎಂಬ ಆಶಾವಾದ ಬಿತ್ತಿತ್ತು. ಆದರೆ ಇದರ ಬೆನ್ನಲೇ ಗುಜರಾತ್ ಯುವಕ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತವಾಗಿದೆ.
ಗುಜರಾತ್ ರಾಜ್ಯ ಮುಂದಿನ ಐದಾರು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಬಿಜೆಪಿಗೆ ಗುಜರಾತ್ನಲ್ಲಿ ಕಾಂಗ್ರೆಸ್ ದೊಡ್ಡಮಟ್ಟದಲ್ಲಿ ಠಕ್ಕರ್ ಕೊಡಲಿದೆ ಎನ್ನುತ್ತಿರುವಾಗಲೇ ಗುಜರಾತ್ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗು ಪಾಟೀದಾರ್ ಸಮುದಾಯದ ಯುವನಾಯಕ ಹಾರ್ದಿಕ್ ಪಟೇಲ್ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ನೀತಿ ಕುರಿತು ಬಹಿರಂಗ ಪತ್ರ ಬರೆದಿರುವ ಹಾರ್ದಿಕ್ ಪಟೇಲ್, ದೇಶ ಹಾಗು ರಾಜ್ಯಗಳಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹಾಗು ಸಮಸ್ಯೆಗಳು ಕುರಿತು ಚರ್ಚೆಸಲು ಹೋದರೇ ದೆಹಲಿಯ ಕಾಂಗ್ರೆಸ್ ನಾಯಕರು ಚಿಕನ್ ಸ್ಯಾಂಡ್ವಿಚ್ ಕಡೆ ನೋಡುತ್ತಿದ್ದರು ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಇದು ಕಾಂಗ್ರೆಸ್ಗೆ ಬಹುದೊಡ್ಡ ಹೊಡೆತವಾಗಲಿದೆ ಎಂದು ಹೇಳಲಾಗುತ್ತಿದೆ.