ಪ್ಲಾಸ್ಟಿಕ್ ಕೊಟ್ಟು ಬೇಕಾದ್ದು ಪಡೆಯಿರಿ; ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ 5 ಮಾರ್ಗಗಳು!
ಪ್ಲಾಸ್ಟಿಕ್ ಎಂಬುದು ನಮ್ಮನ್ನು ಉಸಿರುಗಟ್ಟಿಸುವ ವಸ್ತು ಎಂಬುದು ಈಗ ಎಲ್ಲರಿಗೂ ಅರಿವಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಎಲ್ಲರೂ ಪಣತೊಡುತ್ತಿದ್ದಾರೆ. ಮಣ್ಣಿನ ಲೋಟ, ಕಾಗದದ ಸ್ಟ್ರಾ, ಬಟ್ಟೆಯ ಚೀಲ, ಬಿದಿರಿನ ಬುಟ್ಟಿ, ಗಾಜಿನ ಡಬ್ಬಗಳು ಪ್ಲಾಸ್ಟಿಕ್ ಬದಲಿಗೆ ಜನಪ್ರಿಯ ಆಗುತ್ತಿವೆ. ನೀವೇಕೆ ನಿಮ್ಮನೆಯ ಪ್ಲಾಸ್ಟಿಕ್ ವಸ್ತುಗಳನ್ನು ಬದಲಾಯಿಸಬಾರದು!
ಜೀವನ ಶೈಲಿಗೆ ಹಾಗೂ ವಾತಾವರಣಕ್ಕೆ ಮಾರಕವಾಗುತ್ತಿರುವುದು ಏನು ಗೊತ್ತಾ? ಪ್ಲಾಸ್ಟಿಕ್. ಮೊನ್ನೆಯಷ್ಟೇ ಆಕಸ್ಮಿಕವಾಗಿ ತರಕಾರಿ ಅಂಗಡಿಗೆ ಹೋಗಿದ್ದೆ, ತರಕಾರಿ ಎಲ್ಲಾ ತೆಗೆದುಕೊಂಡ ಮೇಲೆ ಬ್ಯಾಗ್ ತಂದಿದ್ದೀರಾ ಎಂದರು. ಕೈಯಲ್ಲಿ ಬ್ಯಾಗ್ ಇಲ್ಲದ ಕಾರಣ ಅಲ್ಲಿಯೇ ಬಟ್ಟೆಬ್ಯಾಗ್ ಪಡೆದು ತರಕಾರಿಯೊಂದಿಗೆ ಆ ಬ್ಯಾಗ್ಗೆ ರು.20 ತೆತ್ತು ಬಂದೆ. ಇದೆಲ್ಲಾ ಇತ್ತೀಚೆಗೆ ಬಂದ ಪ್ಲಾಸ್ಟಿಕ್ ನಿಷೇಧ ಎಂಬ ಹೊಸ ಕಾನೂನಿನ ಎಫೆಕ್ಟ್.
ಹಿಂದಿನವರಲ್ಲಿ ಕೊಡು ಕೊಳ್ಳುವಿಕೆ ಪದ್ಧತಿ ಜಾರಿಯಲ್ಲಿತ್ತು. ನಮಗೆ ಬೇಡವಾದದ್ದನ್ನು ಕೊಟ್ಟು ಬೇಕಾದ್ದು ಪಡೆಯುವುದು. ಇದೇ ಯೋಚನೆ ನಮ್ಮಲ್ಲಿ ಮತ್ತೆ ಮರುಕಳಿಸುತ್ತಿದೆ. ಪ್ಲಾಸ್ಟಿಕ್ ಕೊಟ್ಟು ನಮಗೆ ಬೇಕಾದ್ದನ್ನು ಪಡೆಯುವುದು. ಮಣ್ಣಿನಲ್ಲಿ ಕರಗದ ವಸ್ತುವೆಂದರೆ ಅದು ಪ್ಲಾಸ್ಟಿಕ್. ಅದು ಪರಿಸರಕ್ಕೂ ಹಾನಿ. ಈಗಷ್ಟೇ ಜಾರಿಯಾಗಿರುವ ಪ್ಲಾಸ್ಟಿಕ್ ನಿಷೇಧದ ನೀತಿ ನಮ್ಮಲ್ಲಿ ಇನ್ನಷ್ಟುಪರಿಣಾಮಕಾರಿಯಾಗಿ ಜಾರಿಯಾಗಲು ನಾವು ನೀವು ಸಹಕರಿಸಬೇಕಿದೆ. ಅದು ಹೇಗೆ ಯಾವ ರೀತಿಯ ಕೆಲಸಗಳು ಎಂಬುದಕ್ಕೆ ಕೆಲ ಉದಾಹರಣೆಗಳು ಇಲ್ಲಿ ಹೇಳಲಾಗಿದೆ.
1. ಬಾಳೆ ಎಲೆಗೆ ಜೈ
ಈ ಮೆಟ್ರೋ ಸಿಟಿಗಳಲ್ಲಿ ಮಾಲ್, ಹಾಪ್ಕಾಮ್ಸ್ಗಳಲ್ಲಿ ತರಕಾರಿಗಳು ಫ್ರೆಶ್ ಆಗಿರುತ್ತೆ ಎಂದು ಹೋಗ್ತೀವಿ. ಅಲ್ಲಿ ಕೆಲ ತರಕಾರಿಗಳನ್ನು ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಮಾಡಿ ಇಟ್ಟಿರುತ್ತಾರೆ. ಈ ಪ್ಲಾಸ್ಟಿಕ್ ತಡೆಯಲಿಕ್ಕೆಂದೇ ನಮ್ಮ ಮಂಗಳೂರಿನ ಜನತೆ ಮಾಲ್ ಒಂದಕ್ಕೆ ಪ್ಲಾಸ್ಟಿಕ್ ಬದಲು ಬಾಳೆ ಎಲೆಗಳನ್ನು ಬಳಸಲು ಸಲಹೆ ನೀಡಿದ್ದಾರೆ. ಜನರ ಈ ಬೇಡಿಕೆ ಹೆಚ್ಚುತ್ತಿದ್ದಂತೆ ಅಲ್ಲಿನ ಮಾಲ್ ಹಾಪ್ಕಾಮ್ಸ್, ತರಕಾರಿ ಅಂಗಡಿಗಳು, ಎಲ್ಲರೂ ಬಾಳೆ ಎಲೆಯಲ್ಲಿ ತರಕಾರಿ ಕಟ್ಟುತ್ತಿದ್ದಾರೆ.
ಅಲ್ಲಿ ಈಗ ‘ಬಾಳೆ ಎಲೆ ಬೆಂಬಲಿಸಿ’ ಎನ್ನುವ ಅಭಿಯಾನವೂ ಶುರುವಾಗಿದೆ. ಇದೇ ರೀತಿ ಅಸ್ಸಾಂನ ಒಂದು ಹಳ್ಳಿಯ ಶಾಲೆಯೊಂದು ಪ್ಲಾಸ್ಟಿಕ್ ಅನ್ನೇ ಸ್ಕೂಲ್ ಫೀಸ್ ಆಗಿಸಲು ಮುಂದಾಗಿದೆ. ಪ್ಲಾಸ್ಟಿಕ್ನ ಲೋಟ, ಬ್ಯಾಗ್, ಬಾಟೆಲ್, ಕವರ್ಗಳು ಹೀಗೆ ಒಟ್ಟು 25 ಪ್ಲಾಸ್ಟಿಕ್ ವಸ್ತುಗಳನ್ನು ತಂದುಕೊಟ್ಟರೆ ಸಾಕು ಮಕ್ಕಳಿಗೆ ವಿದ್ಯಾಭ್ಯಾಸ ಸಿಗುತ್ತಿದೆ. ಆ ಶಾಲೆ 2016ರಲ್ಲಿಯೇ ಈ ಯೋಜನೆಯನ್ನು ಆರಂಭಿಸಿದೆ. ಇದರಿಂದಾಗಿ ಅಲ್ಲಿ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
2. ಬಟ್ಟೆಕೈಚೀಲ
ಒಮ್ಮೆ ಮನೆಯಿಂದ ಹೊರಗೆ ಹೋಗುತ್ತಿದ್ದೀವಿ ಎಂದರೆ ಕೈನಲ್ಲಿ ಬಟ್ಟೆಬ್ಯಾಗನ್ನೇ ಹಿಡಿದುಕೊಂಡು ಹೋಗೋದು. ಇದರಿಂದ ಬಹುಪಾಲು ಪ್ಲಾಸ್ಟಿಕ್ ತೊರೆಯಬಹುದು. ಮನೆಯಲ್ಲಿನ ಹಳೇ ಬಟ್ಟೆಗಳಲ್ಲೇ ಬ್ಯಾಗ್ ಮಾಡಿಕೊಳ್ಳಬಹುದು. ಫ್ರಿಡ್ಜನಲ್ಲಿ ಇಡುವ ತರಕಾರಿಗಳನ್ನು ಸಣ್ಣ ಸಣ್ಣ ಪಾಕೆಟ್ ಬಟ್ಟೆಬ್ಯಾಗ್ನಲ್ಲಿ ಇಟ್ಟರೆ ಇನ್ನೂ ಒಳ್ಳೆಯದೇ. ಇದರಿಂದ ಆರೋಗ್ಯವೂ ಚೆನ್ನಗಿರುತ್ತೆ.
ಬಾಟಲ್ ಕ್ರಷರ್ನಲ್ಲಿ ಪ್ಲಾಸ್ಟಿಕ್ ಹಾಕಿ, ಹಣ ಪಡೆಯಿರಿ
3. ಪ್ಲಾಸ್ಟಿಕ್ ಲೋಟ ಬೇಡ
ರೋಡ್ ಸೈಡ್ನಲ್ಲಿ ಸಣ್ಣದಾದ ತಳ್ಳು ಗಾಡಿಗಳಲ್ಲಿನ ಟೀ ಕಾಫೀ ಸ್ಟಾಲ್ನಲ್ಲಿ ಪೇಪರ್ ಲೋಟವನ್ನು ಬಳಸಲಾಗುತ್ತೆ. ಅದಕ್ಕಾಗಿ ಮಣ್ಣಿನ ಲೋಟ, ಸ್ಟೀಲ್ ಲೋಟಗಳನ್ನು ಬಳಸಿದರೆ ಬಹಳ ಉತ್ತಮ. ಮಣ್ಣಿನಲ್ಲಿ ಖನಿಜಾಂಶಗಳು ದೇಹಕ್ಕೆ ಹೋದರೂ ಒಳ್ಳೆಯದೆ. ಮದುವೆ ಸಮಾರಂಭಗಳಲ್ಲೂ ಪ್ಲಾಸ್ಟಿಕ್ ಲೋಟ ಬಳಸುವುದನ್ನು ನಿಲ್ಲಿಸಿದರೆ ಪರಿಸರ ಮಾಲಿನ್ಯ ತಡೆಯಬಹುದು. ಪ್ರತೀ ವರ್ಷ ಪ್ರಯಾಗ್ನಲ್ಲಿ ನಡೆಯುವ ಕುಂಭಮೇಳದಲ್ಲಿ ಅಲ್ಲಿನ ಟೀ ಸ್ಟಾಲ್ಗಳಲ್ಲಿ ಮಣ್ಣಿನ ಲೋಟದಲ್ಲೇ ಟೀ ನೀಡುತ್ತಾರೆ. ಇಂತಹ ದೊಡ್ಡ ಸಮಾರಂಭದಲ್ಲಿ ಗುಡ್ಡೆಯಾಗಿ ನಿಲ್ಲುವ ಪ್ಲಾಸ್ಟಿಕ್ನ್ನು ತಡೆಯುವಂತಾಗಿದೆ.
4. ಪ್ಲಾಸ್ಟಿಕ್ ಕೊಟ್ಟು ಉಚಿತ ಆಹಾರ
ಹೋಟೆಲ್ಗಳಿಗೆಲ್ಲಾ ಹೋದರೆ ಪ್ಲಾಸ್ಟಿಕ್ನಲ್ಲಿ ಫುಡ್ ಪಾರ್ಸಲ್ ನೀಡತ್ತಾರೆ. ಆದರೆ ಪ್ಲಾಸ್ಟಿಕ್ ಕೊಟ್ಟು ಚಿತ ಆಹಾರ ಸೇವಿಸುವ ಉತ್ತಮ ಯೋಜನೆ ನಮ್ಮವರಲ್ಲಿ ಮೂಡುತ್ತಿದೆ.
ಪಶ್ಚಿಮ ಬಂಗಾಳದ ಸಿರಿಗುರಿ ಜಿಲ್ಲೆಯ ಶಾಲೆಯೊಂದರಲ್ಲಿ 500 ಗ್ರಾಂನ ಪ್ಲಾಸ್ಟಿಕ್ ವಸ್ತುವನ್ನು ತಂದುಕೊಟ್ಟರೆ ಉಚಿತ ಊಟವನ್ನು ಕೊಡುತ್ತಾರೆ. ಜೊತೆಗೆ ಚತ್ತೀಸ್ಗಡದ ಒಂದು ಮೆಸ್ನಲ್ಲಿ ಪ್ಲಾಸ್ಟಿಕ್ ಕವರ್, ಬಾಟೆಲ್ ಹೀಗೇ ಯಾವುದೇ ರೀತಿಯ 500 ಗ್ರಾಂನ ಪ್ಲಾಸ್ಟಿಕ್ ವಸ್ತುಗಳನ್ನು ನೀಡಿದರೆ ಉಚಿತ ಊಟ ಹಾಗೂ ತಿಂಡಿಯನ್ನು ನೀಡುತ್ತಾರೆ. ಇದಕ್ಕೆ ಕಾರಣ ಪ್ರತೀ ದಿನವೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ನಿಂದಾಗಿ ಪರಿಸರದಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಜೊತೆಗೆ ಚಿಂದಿ ಹಾಯುವ, ಮನೆ ಇಲ್ಲದೆ ಊಟ ತಿಂಡಿಗಾಗಿ ಭಿಕ್ಷೆ ಬೇಡುವವರಿಗಾಗಿ ಈ ಯೋಜನೆ ಮಾಡಲಾಗಿದೆ. ಪ್ಲಾಸ್ಟಿಕ್ ಕೊಟ್ಟರೆ ಸಾಕು ಉಚಿತ ಆಹಾರಗಳನ್ನು ನೀಡಲಾಗುತ್ತಿದೆ. ಈ ರೀತಿ ಸಂಗ್ರಹವಾದ ಪ್ಲಾಸ್ಟಿಕ್ಗಳನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತೆ.
1 ಕೆಜಿ ಪ್ಲ್ಯಾಸ್ಟಿಕ್ ಹಾಕಿದ್ರೆ 1 ಲೀ. ಪೆಟ್ರೋಲ್ ಬರುತ್ತೆ: ಈತನ ಆವಿಷ್ಕಾರ ಕಂಡ್ರೆ ತಲೆ ತಿರುಗುತ್ತೆ!
5. ಬಾಟಲ್ ಕೊಟ್ಟರೆ ಮೊಬೈಲ್ಗೆ ರೀಚಾರ್ಚ್
ಭಾರತೀಯ ರೈಲ್ವೇ ಇಲಾಖೆ ಉತ್ತಮ ಯೋಜನೆಯೊಂದು ಹೊರತಂದಿದೆ. ಅದೇನೆಂದರೆ ಸುಮಾರು 160 ಪ್ಲಾಸ್ಟಿಕ್ ಬಾಟಲ್ ಕ್ರಷ್ ಮಾಡುವ ಮಷೀನ್ ಅನ್ನು ದೇಶದ 128 ರೈಲ್ವೇ ಸ್ಟೇಷನ್ಗಳಲ್ಲಿ ಅಳವಡಿಸಿದ್ದಾರೆ. ಹೀಗೆ ಅಳವಡಿಸಿರುವ ಮಷೀನ್ಗೆ ವ್ಯಕ್ತಿಯು ತನ್ನ ಫೋನ್ ನಂಬರ್ ನೀಡಿ, ಪ್ಲಾಸ್ಟಿಕ್ ಬಾಟಲ್ಗಳನ್ನು ಹಾಕಿದರೆ ಪರ್ಯಾಯವಾಗಿ ಆತನ ಫೋನ್ ನಂಬರ್ಗೆ ರೀಚಾಜ್ರ್ ಮಾಡುತ್ತೆ. ಇದರಿಂದ ರೈಲ್ವೇ ಸ್ಟೇಷನ್ ಪರಿಸರವೂ ಸುಂದರವಾಗಿ ಶುದ್ಧವಾಗಿರುತ್ತೆ. ಈ ರೀತಿಯ ಮಷೀನ್ ಅನ್ನು ಮುಂದಿನ ದಿನಗಳಲ್ಲಿ ಇತರೆ 400 ರೈಲ್ವೇ ಸ್ಟೇಷನ್ಗಳಲ್ಲಿ ಅಳವಡಿಸಲು ಇಲಾಖೆಯು ಚಿಂತನೆ ನಡೆಸಿದೆ.