ಕೇಂದ್ರ ಸಂಪುಟಕ್ಕೆ 3 ಸಚಿವರ ರಾಜೀನಾಮೆ: 4 ಸಚಿವರಿಗೆ ಹೆಚ್ಚುವರಿ ಖಾತೆ; ಶೋಭಾಗೆ ಆಹಾರ, ಆರ್ಸಿಗೆ ಜಲಶಕ್ತಿ ಖಾತೆ
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಜಲಶಕ್ತಿ ಸಚಿವಾಲಯ ರಾಜ್ಯ ಖಾತೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಆಹಾರ ಸಂಸ್ಕರಣಾ ಸಚಿವಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿದೆ.
ನವದೆಹಲಿ (ಡಿಸೆಂಬರ್ 8, 2023): ಪಂಚರಾಜ್ಯ ಚುನಾವಣೆಯಲ್ಲಿ ಜಯಗಳಿಸಿದ ಮೂವರು ಕೇಂದ್ರ ಸಚಿವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಹೊಂದಿದ್ದ ಖಾತೆಗಳ ಹೆಚ್ಚುವರಿ ಹೊಣೆಯನ್ನು ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಅರ್ಜುನ್ ಮುಂಡಾ ಮತ್ತು ಭಾರತಿ ಪವಾರ್ ಅವರಿಗೆ ನೀಡಲಾಗಿದೆ.
ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಕೇಂದ್ರ ಕೃಷಿ ಹಾಗೂ ಆಹಾರ ಸಂಸ್ಕರಣೆ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್, ಪ್ರವಾಸೋದ್ಯಮ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಬುಡಕಟ್ಟು ಖಾತೆ ರಾಜ್ಯ ಸಚಿವೆ ರೇಣುಕಾ ಸಿಂಗ್ ಸರೂಟಾ ತಮ್ಮ ಸ್ಥಾನಗಳಿಗೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವೀಕರಿಸಿದ್ದಾರೆ.
ಇದನ್ನು ಓದಿ: ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ, ಚರ್ಚಿಸಿ ತೀರ್ಮಾನ: ಸಚಿವ ಸತೀಶ ಜಾರಕಿಹೊಳಿ
ಇದಾದ ಬಳಿಕ ಈ ಮೂವರು ಹೊಂದಿದ್ದ ಖಾತೆಗಳನ್ನು ನಾಲ್ವರಿಗೆ ಹಂಚಿಕೆ ಮಾಡಲಾಗಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಜಲಶಕ್ತಿ ಸಚಿವಾಲಯ ರಾಜ್ಯ ಖಾತೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಆಹಾರ ಸಂಸ್ಕರಣಾ ಸಚಿವಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿದೆ.
ಕೇಂದ್ರ ಬುಡಕಟ್ಟು ಸಚಿವರಾಗಿದ್ದ ಅರ್ಜುನ್ ಮುಂಡಾ ಅವರಿಗೆ ಹೆಚ್ಚುವರಿಯಾಗಿ ಕೃಷಿ ಖಾತೆಯ ಹೊಣೆಗಾರಿಕೆ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರನ್ನು ಹೆಚ್ಚುವರಿಯಾಗಿ ಬುಡಕಟ್ಟು ಸಚಿವಾಲಯದ ರಾಜ್ಯ ಖಾತೆ ಸಚಿವೆಯಾಗಿ ನೇಮಕ ಮಾಡಲಾಗಿದೆ.
ಇದನ್ನು ಓದಿ: ಡಿ.ಕೆ. ಶಿವಕುಮಾರ್ ಮೇಲೆ ತೂಗುಗತ್ತಿ: ಅಕ್ರಮ ಆಸ್ತಿ ಗಳಿಕೆ ಕೇಸ್ ಮುಂದುವರಿಕೆ ಸಾಧ್ಯತೆ!