ಆಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ವಂದೇ ಮಾತರಂ ಹಾಡಿದ 35 ಸಾವಿರ ಭಾರತೀಯರು!
ಅಬುಧಾಬಿಯ ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 'ಆಹ್ಲಾನ್ ಮೋದಿ' ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಿದ್ದ 35 ಸಾವಿರಕ್ಕೂ ಅಧಿಕ ಭಾರತೀಯರು ಏಕಕಾಲದಲ್ಲಿ ವಂದೇ ಮಾತರಂ ಹಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವದೆಹಲಿ (ಫೆ.13): ಅಬುಧಾಬಿಯ ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ 'ಅಹ್ಲಾನ್ ಮೋದಿ' ಕಾರ್ಯಕ್ರಮದಲ್ಲಿ 35,000 ಕ್ಕೂ ಹೆಚ್ಚು ಭಾರತೀಯರು ಏಕಕಾಲದಲ್ಲಿ ವಂದೇ ಮಾತರಂ ಹಾಡಿದ ಕ್ಷಣ ಅದ್ಭುತ ದೇಶಭಕ್ತಿಯ ಪ್ರದರ್ಶನಕ್ಕೆ ಕಾರಣವಾಯಿತು. ಈ ಕ್ಷಣವನ್ನು ಸೆರೆ ಹಿಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಆಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಭಾರತ ಮತ್ತು ಯುಎಇ ನಡುವಿನ ಬಲವಾದ ಬಾಂಧವ್ಯವನ್ನು ಸಂಕೇತಿಸಿತ್ತು. ಪ್ರಧಾನಮಂತ್ರಿಯವರ ಪ್ರೇರಣೆ ಮತ್ತು ಮಾರ್ಗದರ್ಶನದ ಮಾತುಗಳಿಗಾಗಿ ಸಾಕಷ್ಟು ಜನರು ಕಾದಿದ್ದರು. ಮೋದಿ ಕೂಡ ತಮ್ಮ ಮಾತಿನಲ್ಲಿ ಭಾರತೀಯ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ಸಾಕಷ್ಟು ಅಂಶಗಳನ್ನು ಹೇಳಿದರು.
ಇದಕ್ಕೂ ಮುನ್ನ ಎರಡು ದಿನಗಳ ಭೇಟಿಗಾಗಿ ಯುಎಇಯ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಜಿನ್ ಜಯೇದ್ ಅಲ್ ನಹ್ಯಾನ್ ಸ್ವಾಗತಿಸಿದರು. ಪ್ರಧಾನಿ ಮೋದಿ ಯುಎಇಗೆ ಆಗಮಿಸಿದ ನಂತರ ಉಭಯ ನಾಯಕರು ವ್ಯಾಪಕ ಮಾತುಕತೆ ನಡೆಸಿದರು, ಈ ಸಂದರ್ಭದಲ್ಲಿ ಅವರು ಕಾರ್ಯತಂತ್ರದ ಪಾಲುದಾರಿಕೆಯನ್ನು ಪರಿಶೀಲಿಸಿದರು, ಹೊಸ ಸಹಕಾರ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು ಮತ್ತು ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದರು.
ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಬೆಂಬಲಕ್ಕಾಗಿ ಮತ್ತು ಹಿಂದೂ ದೇವಾಲಯದ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಇದು ಭಾರತದ ಬಗ್ಗೆ ಅವರ ಆಳವಾದ ಬಾಂಧವ್ಯವನ್ನು ಸಂಕೇತಿಸುತ್ತದೆ ಎಂದರು. ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವಾಗಿರುವ ಸಂಪೂರ್ಣ ಕಲ್ಲಿನಿಂದಲೇ ನಿರ್ಮಾಣ ಮಾಡಲಾಗಿರುವ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (BAPS) ಮಂದಿರವನ್ನು ಪ್ರಧಾನಿ ಮೋದಿ ಬುಧವಾರ ಉದ್ಘಾಟಿಸಲಿದ್ದಾರೆ.
ಅಬುಧಾಬಿಯಲ್ಲಿನ ಬಾಪ್ಸ್ ದೇವಾಲಯವು "ಭಾರತದ ಕಡೆಗೆ ಯುಎಇ ಅಧ್ಯಕ್ಷರ ಬಾಂಧವ್ಯ ಮತ್ತು ಯುಎಇಯ ಉಜ್ವಲ ಭವಿಷ್ಯಕ್ಕಾಗಿ ಅವರ ದೃಷ್ಟಿಕೋನ" ಕ್ಕೆ ಒಂದು ಉದಾಹರಣೆಯಾಗಿದೆ ಎಂದು ಮೋದಿ ತಮ್ಮ ಆರಂಭಿಕ ಭಾಷಣದಲ್ಲಿ ಹೇಳಿದರು. BAPS ಹಿಂದೂ ಮಂದಿರವು ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯಿಂದ ಅಲ್ ರಹ್ಬಾ ಬಳಿಯ ಅಬು ಮುರೇಖಾಹ್ನಲ್ಲಿ ನೆಲೆಗೊಂಡಿದೆ, ಅಬುಧಾಬಿಯಲ್ಲಿ ಸುಮಾರು 27 ಎಕರೆ ಭೂಮಿಯಲ್ಲಿ ಇದರ ನಿರ್ಮಾಣವಾಗಿದೆ. ದೇವಾಲಯದ ಭೂಮಿಯನ್ನು ಯುಎಇ ಸರ್ಕಾರವು ದಾನ ಮಾಡುವುದರೊಂದಿಗೆ 2019 ರಿಂದ ರಚನೆಯ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ನಿಮ್ಮ ಬೆಂಬಲವಿಲ್ಲದೇ ಬಿಎಪಿಎಸ್ ಮಂದಿರ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ ಎಂದು ಮೋದಿ ಹೇಳಿದ್ದಾರೆ.
ಜನವರಿ 22 ರಂದು ಅಯೋಧ್ಯೆ ದೇವಸ್ಥಾನದಲ್ಲಿ ಹೊಸ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ಮೂರು ವಾರಗಳ ನಂತರ ಬಾಪ್ಸ್ ದೇವಾಲಯದ ಉದ್ಘಾಟನೆಯು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯಲಿದೆ. ಬಾಪ್ದ್ ದೇವಾಲಯದ ಜೊತೆಗೆ, ಯುಎಇ ದುಬೈನಲ್ಲಿರುವ ಇತರ ಮೂರು ಹಿಂದೂ ದೇವಾಲಯಗಳನ್ನು ಹೊಂದಿದೆ. ಅದರ ವಿಸ್ತಾರವಾದ ಪ್ರದೇಶ ಮತ್ತು ಕಲ್ಲಿನ ವಾಸ್ತುಶೈಲಿಯಿಂದ ಭಿನ್ನವಾಗಿರುವ ಬಾಪ್ಸ್ ದೇವಾಲಯವು ಗಲ್ಫ್ ಪ್ರದೇಶದಲ್ಲಿನ ಅತಿದೊಡ್ಡ ಹಿಂದೂ ದೇವಾಲಯವಾಗಿ ಹೊರಹೊಮ್ಮಿದೆ.
'ಯುಎಇ ನನ್ನ ಮತ್ತೊಂದು ಮನೆಯ ರೀತಿ..' ದೇವಸ್ಥಾನ ಉದ್ಘಾಟನೆಗೂ ಮುನ್ನ ಮೋದಿ ಮಾತು!