* ರಾಜಧಾನಿಯ ವಿವಿಧ ಭಾಗಗಳಲ್ಲಿ 49.2 ಡಿ.ಸೆ ಉಷ್ಣ* ದಿಲ್ಲಿಯಲ್ಲಿ 50 ಡಿ.ಸೆ ಸಮೀಪಕ್ಕೆ ಉಷ್ಣಾಂಶ* ಉತ್ತರ ಭಾರತದಾದ್ಯಂತ ಭಾರೀ ಉಷ್ಣಗಾಳಿ ಹೊಡೆತ

ನವದೆಹಲಿ(ಮೇ.16): ಕಳೆದ 2 ತಿಂಗಳನಿಂದ ದೇಶದ ಉತ್ತರದ ಹಲವು ರಾಜ್ಯಗಳನ್ನು ಬಹುವಾಗಿ ಕಾಡುತ್ತಿರುವ ಉಷ್ಣಮಾರುತ ಭಾನುವಾರ ವಿಪರೀತಕ್ಕೆ ಹೋಗಿದೆ. ರಾಜಧಾನಿ ನವದೆಹಲಿಯ ಹಲವು ಭಾಗಗಳಲ್ಲಿ ಭಾನುವಾರ 49.2 ಡಿ.ಸೆ ಉಷ್ಣಾಂಶ ದಾಖಲಾಗಿದೆ. ಇದು ಇದುವರೆಗೆ ದೆಹಲಿಯಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ.

Add Asianetnews Kannada as a Preferred SourcegooglePreferred

ದೆಹಲಿ ಮಾತ್ರವಲ್ಲದೇ ಉತ್ತರಪ್ರದೇಶ, ಪಂಜಾಬ್‌, ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶದ ಹಲವು ನಗರಗಳಲ್ಲೂ 45-48 ಡಿ.ಸೆನಷ್ಟುಉಷ್ಣಾಂಶ ದಾಖಲಾಗಿದ್ದು ಸಾಮಾನ್ಯ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಭಾರೀ ಉಷ್ಣಾಂಶ ಮತ್ತು ಬಿಸಿಗಾಳಿಯ ಪರಿಣಾಮ ಹಲವು ನಗರಗಳಲ್ಲಿ ಜನರು ಮನೆಯಿಂದ ಹೊರಬರಲು ಹಿಂದೆ ಮುಂದೆ ನೋಡುವಂತಾಯಿತು. ಜನ ಸಂಚಾರ ಕೂಡಾ ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು.

ದಿಲ್ಲಿ ಗರಂ: ರಾಜಧಾನಿ ನವದೆಹಲಿಯ ಮುಂಗೇಶ್‌ಪುರದಲ್ಲಿ ಗರಿಷ್ಠ 49.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಉಳಿದಂತೆ ವಾಯುವ್ಯ ದೆಹಲಿಯಲ್ಲಿ 49.1 ಡಿ.ಸೆ., ಸ್ಪೋಟ್ಸ್‌ರ್‍ ಕಾಂಪ್ಲೆಕ್ಸ್‌ ಪ್ರದೇಶದಲ್ಲಿ 48.4 ಡಿ.ಸೆ., ಜಫರ್‌ಪುರದಲ್ಲಿ 47.5 ಡಿ.ಸೆ., ಪೀತಂಪುರದಲ್ಲಿ 47.2 ಡಿ.ಸೆ.ಉಷ್ಣಾಂಶ ದಾಖಲಾಗಿದೆ.

ಉಳಿದಂತೆ ಹರ್ಯಾಣದ ಗುರುಗ್ರಾಮದಲ್ಲಿ 48.1 ಡಿ.ಸೆ., ಪಂಜಾಬ್‌ನ ಮುಕ್ತಸರ್‌ದಲ್ಲಿ 47.4 ಡಿ.ಸೆ., ಸಿರ್ಸಾದಲ್ಲಿ 47.2 ಡಿ.ಸೆ., ರೋಹ್ಟಕ್‌ನಲ್ಲಿ 46.7 ಡಿ.ಸೆ.,ಭಠಿಂಡಾದಲ್ಲಿ 46.8 ಡಿ.ಸೆ.,ದಾಖಲಾಗಿದೆ.

ಇನ್ನು ರಾಜಸ್ತಾನದ ಚುರುವಿನಲ್ಲಿ 47.9 ಡಿ.ಸೆ., ಪಿಲಾನಿಯಲ್ಲಿ 47.7 ಡಿ.ಸೆ., ಶ್ರೀಗಂಗಾನಗರದಲ್ಲಿ 47.6 ಡಿ.ಸೆ. ದಾಖಲಾಗಿದೆ. ಮಧ್ಯಪ್ರದೇಶದ ನೌಗಾಂವ್‌, ಖುಜುರಾಹೋ ತಲಾ 47 ಡಿ.ಸೆ. ದಾಖಲಾಗಿದೆ.

ನಿರಾಳ: ಸೋಮವಾರದ ಬಳಿಕ ದೆಹಲಿ, ಹರ್ಯಾಣ, ಪಂಜಾಬ್‌ ಸೇರಿ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಇಳಿ ಮುಖವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವ ಹಿನ್ನೆಲೆಯಲ್ಲಿ ಜನರು ಸ್ವಲ್ಪ ಸಮಾಧಾನ ಪಡುವಂತಾಗಿದೆ.