ಲಖೀಂಪುರ ಗಲಭೆ : ಸುಪ್ರೀಂ ಚಾಟಿ - ಇಬ್ಬರು ಅರೆಸ್ಟ್
- ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಬಲಿ ಪಡೆದ ಘಟನೆ
- ಸಚಿವರ ಬೆಂಗಾವಲು ವಾಹನಗಳಲ್ಲಿ ಇದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು
ನವದೆಹಲಿ/ಲಖೀಂಪುರ (ಅ.08): ಉತ್ತರ ಪ್ರದೇಶದ (Uttara Pradesh) ಲಖೀಂಪುರ ಖೇರಿಯಲ್ಲಿ ನಾಲ್ವರು ರೈತರು (Farmers) ಸೇರಿದಂತೆ 8 ಮಂದಿ ಬಲಿ ಪಡೆದ ಘಟನೆಯನ್ನು ದುರದೃಷ್ಟಕರ ಎಂದಿರುವ ಸುಪ್ರೀಂ ಕೋರ್ಟ್ (Supreme Court), ‘ಎಷ್ಟುಜನರನ್ನು ಈವರೆಗೆ ಬಂಧಿಸಿದ್ದೀರಿ? ಏನು ಕ್ರಮ ಕೈಗೊಂಡಿದ್ದೀರಿ?’ ಎಂದು ಪ್ರಶ್ನಿಸಿದೆ. ಈ ಘಟನೆ ಕುರಿತು ಶುಕ್ರವಾರದ ಒಳಗಾಗಿ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದರ ಬೆನ್ನಲ್ಲೇ, ಈ ಹಿಂಸಾಚಾರ ಘಟನೆ ಪ್ರಕರಣದ ವೇಳೆ ರೈತರ ಮೇಲೆ ಹತ್ತಿಸಿದ ಸಚಿವರ ಬೆಂಗಾವಲು ವಾಹನಗಳಲ್ಲಿ ಇದ್ದರು ಎನ್ನಲಾದ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾನ (Ashish MIshra) ಆಪ್ತರಾದ ಲವಕುಶ ಹಾಗೂ ಆಶಿಷ್ ಪಾಂಡೆ ಎಂದು ಗುರುತಿಸಲಾಗಿದೆ.
ನಿರಾಯುಧ ರೈತರ ಮೇಲೆ ಹರಿದ ಕಾರು: ಮತ್ತೊಂದು ವಿಡಿಯೋ ವೈರಲ್!
ಈ ನಡುವೆ, ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ ಸಮನ್ಸ್ ನೀಡಲಾಗಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಬರಲು ಸೂಚಿಸಲಾಗಿದೆ. ಅಲ್ಲದೆ ಈ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ತರಾತುರಿಯಲ್ಲಿ ಏಕ ವ್ಯಕ್ತಿ ನ್ಯಾಯಾಂಗ ಆಯೋಗವನ್ನು ರಚನೆ ಮಾಡಿದ್ದು, ಅದರ ಹೊಣೆಯನ್ನು ಅಲಹಾಬಾದ್ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಪ್ರದೀಪ್ ಕುಮಾರ್ ಶ್ರೀವಸ್ತವ ಅವರಿಗೆ ವಹಿಸಿದೆ. ಆದರೆ ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi), ‘ಸುಪ್ರೀಂ ಕೋರ್ಟ್ ಅಥವಾ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
ಕೊಲೆ ಮಾಡಿ, ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ರೈತರ ಪರ ಬಿಜೆಪಿ ಸಂಸದನ ಧ್ವನಿ!
ಏತನ್ಮಧ್ಯೆ, ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ ಲಖನೌ ಇನ್ಸ್ಪೆಕ್ಟರ್ ಜನರಲ್ ಲಕ್ಷ್ಮೇ ಸಿಂಗ್, ‘ಆಶಿಷ್ ಮಿಶ್ರಾ ಅವರು ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಲಖೀಂಪುರ ಹಿಂಸಾಚಾರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಮಾಹಿತಿಗಳ ಕುರಿತೂ ತನಿಖೆ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
ನ್ಯಾಯಾಲಯ ಹೇಳಿದ್ದೇನು?:
ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ, 8 ಮಂದಿಯ ಕೊಲೆಗೆ ಕಾರಣವಾದ ಈ ಘಟನೆ ದುರದೃಷ್ಟಕರ. ಆದರೆ ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳ್ಯಾರು? ಅವರನ್ನು ಬಂಧಿಸಲಾಗಿದೆಯೇ?. ಈ ಪ್ರಕರಣವನ್ನು ನೀವು ಸರಿಯಾಗಿ ನಿರ್ವಹಿಸಿಲ್ಲ. ಸರಿಯಾದ ಕ್ರಮದಲ್ಲಿ ಎಫ್ಐಆರ್ ಅನ್ನೂ ದಾಖಲಿಸಿಲ್ಲ. ಜೊತೆಗೆ ಈ ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ತಾಯಿ ಆಘಾತದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಆಸ್ಪತ್ರೆ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರವೇ ಭರಿಸಬೇಕು ಎಂದು ಸೂಚಿಸಿದೆ.