ಜಾರ್ಖಂಡ್‌ನಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಯು, ವಿವಿಧ ತನಿಖಾ ಸಂಸ್ಥೆಗಳಿಂದ 2.35 ಕೋಟಿ ರು. ಇನಾಮು ಹೊಂದಿದ್ದ ಹಾಗೂ 149 ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ನಕ್ಸಲ್‌ ಅನಲ್ ದಾ ಸೇರಿ 15 ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ.

ಚೈಬಾಸಾ: ಜಾರ್ಖಂಡ್‌ನಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಯು, ವಿವಿಧ ತನಿಖಾ ಸಂಸ್ಥೆಗಳಿಂದ 2.35 ಕೋಟಿ ರು. ಇನಾಮು ಹೊಂದಿದ್ದ ಹಾಗೂ 149 ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ನಕ್ಸಲ್‌ ಅನಲ್ ದಾ ಸೇರಿ 15 ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ.

ಸಾರಂದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಳಗ

ಜಾರ್ಖಂಡ್‌ನ ಪಶ್ಚಿಮ ಸಿಂಗಭೂಮ್‌ ಜಿಲ್ಲೆಯ ಸಾರಂದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಕಮಾಂಡೋಗಳು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ. ನಕ್ಸಲರನ್ನು ಹೆಡೆಮುರಿ ಕಟ್ಟಲು ನಡೆದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ 1500 ಮಂದಿ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಸರ್ಕಾರ ಹೇಳಿದೆ.

ಕೋಟಿ ಇನಾಮು ಹೊಂದಿದ್ದ ಅನಲ್‌:

ಭದ್ರತಾ ಪಡೆ ಗುಂಡಿಗೆ ಕುಖ್ಯಾತ ನಕ್ಸಲ್‌, 2.35 ಕೋಟಿ ರು. ಇನಾಮು ಹೊಂದಿದ್ದ ಪತಿರಾಮ್‌ ಮಾಂಝಿ ಅಲಿಯಾಸ್‌ ಅನಲ್‌ ದಾ ಬಲಿಯಾಗಿದ್ದಾನೆ. ಈತ 1987ರಿಂದ ಮಾವೋವಾದಿಗಳ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದ. 2 ದಶಕಗಳಿಗೂ ಹೆಚ್ಚು ಕಾಲದಿಂದ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿದ್ದ. ಭದ್ರತಾ ಪಡೆ ಮೇಲಿನ ದಾಳಿ, ಐಇಡಿ ಸ್ಫೋಟ, ಸುಲಿಗೆ, ಬೆದರಿಕೆ ಸೇರಿ ಹಲವಾರು ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.