ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ತಡೆಯಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಮಕ್ಕಳು ಹೆಚ್ಚು ನೀರು ಕುಡಿಯುವಂತೆ ಮಾಡಲು ಈ ಹಿಂದೆ ಕೆಲವು ಪ್ರದೇಶಗಳಲ್ಲಿ ‘ವಾಟರ್‌ ಬೆಲ್‌’ ವ್ಯವಸ್ಥೆ ಜಾರಿ ಮಾಡಿದ್ದ ಕೇರಳ ಸರ್ಕಾರ ಇದೀಗ ಈ ಯೋಜನೆಯನ್ನು ರಾಜ್ಯದ ಎಲ್ಲ ಶಾಲೆಗಳಲ್ಲೂ ಜಾರಿ ಮಾಡಲು ಮುಂದಾಗಿದೆ.

ತಿರುವನಂತಪುರಂ: ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ತಡೆಯಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಮಕ್ಕಳು ಹೆಚ್ಚು ನೀರು ಕುಡಿಯುವಂತೆ ಮಾಡಲು ಈ ಹಿಂದೆ ಕೆಲವು ಪ್ರದೇಶಗಳಲ್ಲಿ ‘ವಾಟರ್‌ ಬೆಲ್‌’ ವ್ಯವಸ್ಥೆ ಜಾರಿ ಮಾಡಿದ್ದ ಕೇರಳ ಸರ್ಕಾರ ಇದೀಗ ಈ ಯೋಜನೆಯನ್ನು ರಾಜ್ಯದ ಎಲ್ಲ ಶಾಲೆಗಳಲ್ಲೂ ಜಾರಿ ಮಾಡಲು ಮುಂದಾಗಿದೆ. ಫೆ.20ರಿಂದ ರಾಜ್ಯದ ಎಲ್ಲ ಶಾಲೆಗಳಲ್ಲೂ ಈ ಯೋಜನೆ ಜಾರಿಯಾಗಲಿದೆ. ಈ ಪ್ರಕಾರ ಎಲ್ಲಾ ಶಾಲೆಗಳಲ್ಲಿ ಬೆಳಿಗ್ಗೆ 10.30 ಮತ್ತು ಮಧ್ಯಾಹ್ನ 2.30 ಕ್ಕೆ ಎರಡು ಬಾರಿ ಬೆಲ್ ಬಾರಿಸಲಾಗುತ್ತದೆ. ಆಗ ತಲಾ 5 ನಿಮಿಷಗಳ ಕಾಲ ನೀರು ಕುಡಿಯಲು ಮಕ್ಕಳಿಗೆ ಸಮಯಾವಕಾಶ ನೀಡಲಾಗುತ್ತದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೇರಳ ಶಿಕ್ಷಣ ಇಲಾಖೆ ‘ಹೆಚ್ಚಿನ ತಾಪಮಾನದ ಹಿನ್ನೆಲೆಯಲ್ಲಿ ನಾವು 2019 ರಲ್ಲಿ ಮೊದಲ ಬಾರಿಗೆ ಕೆಲವು ಪ್ರದೇಶಗಳಲ್ಲಿನ ಶಾಲೆಗಳಲ್ಲಿ ವಾಟರ್‌ ಬೆಲ್‌ ವ್ಯವಸ್ಥೆ ಜಾರಿಗೆ ತಂದೆವು. ಇದನ್ನು ನೋಡಿ ಕರ್ನಾಟಕ, ತೆಲಂಗಾಣದಂತಹ ರಾಜ್ಯಗಳು ಅದನ್ನು ಜಾರಿಗೆ ತಂದವು. ಇದೀಗ ತಾಪಮಾನ ಹೆಚ್ಚುತ್ತಿರುವುದರಿಂದ ರಾಜ್ಯದಾದ್ಯಂತ ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸುತ್ತಿದ್ದೇವೆ’ ಎಂದಿದೆ. ಶಾಲೆಗಳಲ್ಲಿ ವಾಟರ್‌ ಬೆಲ್‌ ಕಲ್ಪನೆ ಪರಿಚಯಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.

ಉಪ್ಪಿನಂಗಡಿ ಶಾಲೆಯಂತೆ, ತಮಿಳುನಾಡಲ್ಲೂ ವಿದ್ಯಾರ್ಥಿಗಳಿಗೆ 'ವಾಟರ್ ಬ್ರೇಕ್'!

ಏನಿದು ವಾಟರ್‌ ಬೆಲ್‌

ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದ ನಿರ್ಜಲೀಕರಣ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಯಲು ಹೆಚ್ಚು ನೀರು ಕುಡಿಯುವುದು ಒಳ್ಳೆಯದು. ದಿನದಲ್ಲಿ ಕಾಲ ಕಾಲಕ್ಕೆ ನೀರು ಕುಡಿದರೆ ದೇಹವು ಹೈಡ್ರೆಟೆಡ್ ಆಗಿರುತ್ತದೆ. ಶಾಲಾ ಸಮಯದಲ್ಲಿ ಮಕ್ಕಳು ಸಾಕಷ್ಟು ನೀರು ಸೇವಿಸುವಂತೆ ನೋಡಿಕೊಳ್ಳುವುದು ಅಗತ್ಯ. ಹೀಗಾಗಿ ಮಕ್ಕಳು ಶಾಲೆಯಲ್ಲಿದ್ದ ವೇಳೆ ಆಗಾಗ ಬೆಲ್‌ ಮಾಡಲಾಗುತ್ತದೆ. ಈ ಬೆಲ್‌ ಮಾಡಿದ ಕೂಡಲೇ ಮಕ್ಕಳೆಲ್ಲ ನೀರು ಕುಡಿಯಬೇಕು. ಮಕ್ಕಳಿಗೆ ಹೆಚ್ಚು ನೀರು ಕುಡಿಯುವುದನ್ನು ನೆನಪಿಸಲೆಂದೇ ಈ ಯೋಜನೆ ಜಾರಿ ಮಾಡಲಾಗಿದೆ.

ಕೇರಳ ಆನೆ ದಾಳಿಗೆ ಕರ್ನಾಟಕದ ನಕ್ಸಲ್‌ ಸುರೇಶ್‌ಗೆ ಗಾಯ

ಕಣ್ಣೂರು: ನಕ್ಸಲ್‌ ಎಂದು ಶಂಕಿಸಲಾದ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸುರೇಶ್‌, ಕೇರಳದ ಕಣ್ಣೂರಿನಲ್ಲಿ ಕಾಡಾನೆ ದಾಳಿಗೆ ತುತ್ತಾಗಿದ್ದಾರೆ. ಸ್ನೇಹಿತರಿಂದ ಡ್ರಾಪ್‌ ತೆಗೆದುಕೊಂಡು ಊರಿಗೆ ಹೋಗುವ ಸಮಯದಲ್ಲಿ ಆನೆ ದಾಳಿ ನಡೆಸಿದೆ ಎನ್ನಲಾಗಿದೆ. ಕೇರಳ ಕರ್ನಾಟಕ ಗಡಿಯಲ್ಲಿರುವ ಕಂಜಿರಕೋಲಿ ಎಂಬ ಗ್ರಾಮದ ಬಳಿ 6 ಮಂದಿಯ ನಕ್ಸಲರ ಗುಂಪು ಸುರೇಶ್‌ನನ್ನು ಇಳಿಸಿ ಹೋಗಿದ್ದಾರೆ. ಇದಾದ ಬಳಿಕ ಆತ ಆನೆ ದಾಳಿಗೆ ತುತ್ತಾಗಿದ್ದಾನೆ. ಈತ ನಿಷೇಧಕ್ಕೊಳಪಟ್ಟಿರುವ ನಕ್ಸಲ್‌ ಗುಂಪಿಗೆ ಸೇರಿದ್ದು, ಪರಿಯಾಮ್‌ ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸುವಾಗ ಈತನ ಬಳಿ ಆಯುಧ ಇದ್ದುದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.