Mahira Khan : ಪಾಕ್ ನಟಿಗೆ ಕಾಡ್ತಿದೆ ಈ ಖಾಯಿಲೆ… ಕೊನೆಗೂ ನೋವು ಹಂಚಿಕೊಂಡ ನಟಿ
ಮಾನಸಿಕ ಖಾಯಿಲೆ ಜನರನ್ನು ಸದ್ದಿಲ್ಲದೆ ಆಕ್ರಮಿಸುವ ಜೊತೆಗೆ ಇಂಚು ಇಂಚಾಗಿ ಅವರ ಜೀವ ತಿನ್ನುತ್ತದೆ. ಅನೇಕ ಕಲಾವಿದರು ಇದಕ್ಕೆ ಬಲಿಯಾಗ್ತಿದ್ದಾರೆ. ಪಾಕಿಸ್ತಾನದ ನಟಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಮಹಿರಾ ಖಾನ್ ಕೂಡ ಇದ್ರಿಂದ ಹೊರತಾಗಿಲ್ಲ.
ಪಾಕಿಸ್ತಾನದ ಖ್ಯಾತ ನಟಿ ಮಹಿರಾ ಖಾನ್.. ತಮ್ಮ ನಟನೆಗೆ ಹೆಸರುವಾಸಿಯಾಗಿರುವ ಮಹಿರಾ ಖಾನ್ ರನ್ನು ಭಾರತೀಯರೂ ಇಷ್ಟಪಡ್ತಾರೆ. ಪಾಕಿಸ್ತಾನ ಟಿವಿ ಶೋಗಳಲ್ಲಿ ತುಂಬಾ ಸಕ್ರಿಯರಾಗಿರುವ ನಟಿ ಮಹಿರಾ ಖಾನ್, ಸಾಮಾಜಿಕ ಜಾಲತಾಣಗಳಲ್ಲೂ ಆಕ್ಟಿವ್ ಆಗಿದ್ದಾರೆ. 2017ರಲ್ಲಿ ಶಾರುಕ್ ಖಾನ್ ಅಭಿನಯದ ರಾಯಿಸ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಹಿರಾ ಖಾನ್ ರನ್ನು ಜನರು ಅಷ್ಟಾಗಿ ಮೆಚ್ಚಿಕೊಂಡಿರಲಿಲ್ಲ. ಸಿನಿಮಾ ನಿರೀಕ್ಷೆ ಮಟ್ಟಕ್ಕೆ ಹಿಟ್ ಆಗಿರಲಿಲ್ಲ. ಅದ್ರ ಬೆನ್ನಲ್ಲೆ ಮಹಿರಾ ಖಾನ್, ಫೋಟೋ ಒಂದು ವೈರಲ್ ಆಗಿತ್ತು. ಮಹಿರಾ, ರಣಬೀರ್ ಕಪೂರ್ ಜೊತೆ ಧೂಮಪಾನ ಮಾಡ್ತಿದ್ದ ಫೋಟೋ ವೈರಲ್ ಆಗ್ತಿದ್ದಂತೆ ಮಹಿರಾ ಟ್ರೋಲ್ ಆಗಿದ್ದರು. ಇದಾದ್ಮೇಲೆ ಪಾಕಿಸ್ತಾನಕ್ಕೆ ವಾಪಸ್ ಆಗಿದ್ದ ಮಹಿರಾ, ಈಗ ಭಿಮಾನಿಗಳು ಅಚ್ಚರಿಗೊಳ್ಳುವಂತಹ ವಿಷ್ಯವೊಂದನ್ನು ಹೇಳಿದ್ದಾರೆ.
ಮಹಿರಾ ಖಾನ್ (Mahira Khan) ತಾವು ಬೈಪೋಲಾರ್ ಡಿಸಾರ್ಡರ್ (Bipolar Disorder) ನಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದೇ ಮೊದಲ ಬಾರಿ ಅವರು ಅಭಿಮಾನಿಗಳ ಮುಂದೆ ತನ್ನ ಖಾಯಿಲೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸುಮಾರು 6-7 ವರ್ಷಗಳಿಂದ ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿರುವ ಮಹಿರಾ ಇದಕ್ಕೆ ಔಷಧಿ (Medicine) ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಮಹಿರಾ, ಉರಿ ದಾಳಿಯ ನಂತರ ಪಾಕಿಸ್ತಾನಿ ನಟರು ಭಾರತದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದಾಗ ನನಗೆ ಈ ಅನಾರೋಗ್ಯ ಇರುವುದು ಗೊತ್ತಾಯ್ತು. ಖಿನ್ನತೆ ಮತ್ತು ಆತಂಕದ ಔಷಧಿಯಲ್ಲೇ ನನ್ನ ಜೀವನ ಸಾಗಿದೆ. ಈವರೆಗೂ ನಾನು ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖಳಾಗಿಲ್ಲವೆಂದು ಮಹಿರಾ ಹೇಳಿದ್ದಾರೆ. ಜನರ ಪ್ರತಿಕ್ರಿಯೆ ಮತ್ತು ಸಾಮಾಜಿಕ ಮಾಧ್ಯಮ ಟ್ರೋಲಿಂಗ್ನಿಂದಾಗಿ ತನ್ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ನಟಿ ಹೇಳಿದ್ದಾರೆ.
ಗರ್ಭಿಣಿಯ ಕಾಡೋ ಸಮಸ್ಯೆ ಒಂದೆರಡಲ್ಲ, ಹೊಟ್ಟೆ ತುರಿಕೆಗೇನು ಕಾರಣ?
ಎಲ್ಲವೂ ಇದ್ದಕ್ಕಿದ್ದಂತೆ ಸಂಭವಿಸಿತು. ನಾನು ಚಿತ್ರದ ಶೂಟಿಂಗ್ ಮಾಡುತ್ತಿದ್ದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಉರಿ ದಾಳಿ ನಡೆದಾಗ ಎಲ್ಲವೂ ಚೆನ್ನಾಗಿಯೇ ಇತ್ತು. ದಾಳಿಯ ನಂತರ ರಾಜಕೀಯ ಮಟ್ಟದಲ್ಲಿ ಎಲ್ಲವೂ ಬದಲಾಯಿತು. ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ನಿಷೇಧಿಸಲಾಯಿತು. ನಾನು ಏನನ್ನಾದರೂ ಯೋಚಿಸುವ ಅಥವಾ ಅರ್ಥಮಾಡಿಕೊಳ್ಳುವ ಮೊದಲು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ದ್ವೇಷಿಸಲು ಶುರು ಮಾಡಿದ್ದರು. ಆ ಸಮಯದಲ್ಲಿ ತುಂಬಾ ಖಿನ್ನತೆ ನಾನು ಒಳಗಾಗಿದ್ದೆ. ಜನರು ನನ್ನ ವಿರುದ್ಧ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದರು. ನನಗೆ ದೂರವಾಣಿ ಕರೆಗಳಲ್ಲಿ ಬೆದರಿಕೆಗಳು ಬರುತ್ತಿದ್ದವು. ನಾನು ಏನು ಮಾಡಬೇಕು ಮತ್ತು ನನ್ನ ವೃತ್ತಿಜೀವನಕ್ಕೆ ಏನಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಕಳೆದ ವರ್ಷ, ನನ್ನ ಸ್ಥಿತಿ ಕೆಟ್ಟದಾಗಿತ್ತು. ನಾನು ಹಾಸಿಗೆ ಹಿಡಿದಿದ್ದೆ. ಹಾಸಿಗೆಯಿಂದ ಏಳಲು ನನಗೆ ಸಾಧ್ಯವಾಗ್ತಿರಲಿಲ್ಲ. ಔಷಧಿ ತೆಗೆದುಕೊಂಡ ನಂತ್ರ ಸ್ವಲ್ಪ ಸುಧಾರಿಸಿಕೊಂಡಿದ್ದೇನೆ ಎಂದು ಮಹಿರಾ ಹೇಳಿದ್ದಾರೆ.
ಮಾನಸಿಕ ಖಾಯಿಲೆ ಬಗ್ಗೆ ಮಹಿರಾ ಜಾಗೃತಿ : ಮಹಿರಾ, ಮಾನಸಿಕ ಖಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಜನರ ಮುಂದೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳು, ಕೆಟ್ಟ ಸಮಯಗಳು ಮತ್ತು ಸಂತೋಷದ ಸಮಯಗಳು ಬರುತ್ತವೆ. ಜನರು ತಮ್ಮ ಮಾನಸಿಕ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು. ಕ್ಲಿನಿಕಲ್ ಖಿನ್ನತೆಯನ್ನು ಸಾಮಾನ್ಯವೆಂದು ಪರಿಗಣಿಸಿ ಔಷಧಿ ತೆಗೆದುಕೊಳ್ಳಬೇಕು. ನಾನು ಹಿಂದಿನ ವರ್ಷ ಅದನ್ನು ನಿರ್ಲಕ್ಷ್ಯ ಮಾಡಿದ ಕಾರಣ, ಮಾತ್ರೆ ಬಿಟ್ಟ ಕಾರಣ ಮತ್ತೆ ಹಾಸಿಗೆ ಹಿಡಿಯಬೇಕಾಯ್ತು ಎನ್ನುತ್ತಾರೆ ಮಹಿರಾ.
Healthy Food : ಜಪಾನೀಯರು 100 ವರ್ಷಕ್ಕೂ ಹೆಚ್ಚು ಕಾಲ ಬದುಕಲು ಇದೇ ಕಾರಣ
ಬೈಪೋಲಾರ್ ಡಿಸಾರ್ಡರ್ ಎಂದರೇನು? : ಬೈಪೋಲಾರ್ ಡಿಸಾರ್ಡರ್ನಲ್ಲಿ, ವ್ಯಕ್ತಿಯ ಮನಸ್ಥಿತಿಯಲ್ಲಿ ತ್ವರಿತ ಬದಲಾವಣೆ ಕಂಡುಬರುತ್ತದೆ. ಈ ಮಾನಸಿಕ ಸ್ಥಿತಿಯಲ್ಲಿ ಎರಡು ಬದಲಾವಣೆಯನ್ನು ನೀವು ಕಾಣಬಹುದು. ಒಂದರಲ್ಲಿ ವ್ಯಕ್ತಿ ಅತೀ ಸಕ್ರಿಯವಾಗಿರುತ್ತಾನೆ, ಹೆಚ್ಚು ಮಾತನಾಡುತ್ತಾನೆ. ಇನ್ನೊಂದರಲ್ಲಿ ಶಾಂತವಾಗಿರುತ್ತಾನೆ ಮತ್ತು ದುಃಖಿತನಾಗಿರುತ್ತಾನೆ. ಎರಡನೇ ಸ್ಥಿತಿಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯೋಚಿಸುವ ಅಪಾಯವಿರುತ್ತದೆ.