ಬೇಸರ ಬೇಡ: ಲಾಕ್ಡೌನ್ ದಿನಗಳನ್ನು ಹೀಗೆ ಹಸನಾಗಿಸಿಕೊಳ್ಳಿ..!
ಲಾಕ್ಡೌನ್ ದಿನಗಳು ನೋಡನೋಡುತ್ತಾ ಓಡಿಹೋಗುತ್ತವೆ. ಈ ದಿನಗಳನ್ನು ಸಣ್ಣಪುಟ್ಟ ಕೌಟುಂಬಿಕ ಖುಷಿಗಳ ಮೂಲಕ ನಿಮ್ಮ ಮಾನಸಿಕ ಆರೋಗ್ಯ ವೃದ್ಧಿಪಡಿಸಿಕೊಳ್ಳಲು ಬಳಸಿ.
ಹದಿನೈದು ದಿನಗಳ ಕಂಪ್ಲೀಟ್ ಲಾಕ್ಡೌನ್ ಹೇಗೆ ಕಳೆಯೋದಪ್ಪಾ, ಸಮಯವನ್ನು ಹೇಗೆ ಕೊಲ್ಲುವುದು ಎಂದೆಲ್ಲಾ ಯೋಚಿಸಬೇಡಿ. ಯಾಕೆಂದರೆ ಸಮಯವನ್ನು ನೀವು ಕೊಲ್ಲಲಾಗುವುದಿಲ್ಲ. ಸಮಯವೇ ನಮ್ಮನ್ನು ಕೊಲ್ಲುತ್ತಾ ಇರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಮನೆಯೊಳಗೆ ಕಂಪ್ಲೀಟ್ ಲಾಕ್ ಆಗಿ ಕೊಳೆತು ಹೋಗುವುದಕ್ಕಿಂತ, ಮಾನಸಿಕ ಆರೋಗ್ಯ ಹಾಗೂ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ ಎಂದು ಚಿಂತಿಸಿ. ನೀವು ಹೀಗೆ ಮಾಡಬಹುದು.
ರೋಗ ನಿರೋಧಕ ಶಕ್ತಿ ಬೇಕೆ? ಹಾಗಿದ್ದರೆ ಹೀಗೆ ಮಾಡಿ....! ...
ಹದಿನೈದು ದಿನದ ದಿನಸಿ, ತರಕಾರಿ, ಹಣ್ಣು ಒಂದೇ ದಿನ ತಂದುಬಿಡಬೇಕು ಎಂಬ ಧಾವಂತ ಬೇಡ. ಸಮಾಧಾನ ಇರಲಿ. ಅದೆಲ್ಲಾ ದಿನವೂ ಸಿಗುತ್ತವೆ. ಮುಂಜಾನೆ ಆರು ಗಂಟೆಗೆ ಎದ್ದು ಹೋದರೆ ಫ್ರೆಶ್ ಹಾಲು ಮೊಸರು ಸಿಗುತ್ತೆ. ಸೊಪ್ಪು ತರಕಾರಿ ಸಿಗುತ್ತೆ. ಖರೀದಿಸಿ ತನ್ನಿ. ಮಾಸ್ಕ್ ಧರಿಸಿ, ಅಂತರ ಕಾಪಾಡಿ, ಮನೆಗೆ ತಂದ ನಂತರ ಅವುಗಳನ್ನೆಲ್ಲ ಚೆನ್ನಾಗಿ ತೊಳೆಯಿರಿ.
- ಸೋಪು ಹಚ್ಚಿ ಸ್ನಾನ ಮಾಡಿ, ಧ್ಯಾನ ಮಾಡಿ. ಆಸ್ತಿಕರಾಗಿದ್ದರೆ ಜಪತಪ ಮಾಡಬಹುದು. ದೇವರನ್ನು ನಂಬದವರಾಗಿದ್ದರೂ ಧ್ಯಾನ ಓಕೆ. ಉಸಿರಾಟದ ಕೆಲವು ವ್ಯಾಯಾಮಗಳು ನಿಮ್ಮ ದೇಹಕ್ಕೂ ಮನಸ್ಸಿಗೂ ತುಂಬಾ ಒಳ್ಳೆಯದು. ಅವುಗಳನ್ನು ಕಲಿಯಿರಿ, ಪಾಲಿಸಿ.
- ಉಸಿರಾಟ ಯಾವಾಗಲೂ ನಿಧಾನವಾಗಿ ಇರಬೇಕು. ತುಂಬ ಗಡಿಬಿಡಿಯಲ್ಲಿ ಇರುವಂತೆ ಉಸಿರಾಡಬಾರದು. ಉಸಿರು ಒಳಗೆ ಹೋದಷ್ಟೇ ಹೊತ್ತು ನಿಶ್ವಾಸಕ್ಕೂ ಕೊಡಬೇಕು. ಉಸಿರು ಮೂಗಿನೊಳಗೆ ಹೋಗುವ ಸಮಯವನ್ನು ಫೀಲ್ ಮಾಡಿ. ಹಾಗೇ ಅದು ಶ್ವಾಸಕೋಶದ ವರೆಗೆ ಹೋಗುವುದನ್ನು ಧ್ಯಾನಿಸಿ. ನಿಮ್ಮ ದೇಹದ ಅಪರಿಚಿತ ಸಂಗತಿಗಳು ನಿಮಗೇ ಗೊತ್ತಾಗುತ್ತ ಹೋಗುತ್ತವೆ.
- ಆಹಾರ ಸೇವಿಸುವಾಗಲೂ ಇದೇ ಕ್ರಮ ಅನುಸರಿಸಿ. ಪ್ರತಿಯೊಂದು ತುತ್ತನ್ನೂ ಚೆನ್ನಾಗಿ ಅಗಿದು, ನುರಿಸಿ ತಿನ್ನಿ. ಅದು ನಿಮ್ಮ ಜಠರವನ್ನು ತಲುಪುವವರೆಗೂ ನಿಮ್ಮ ಪ್ರಜ್ಞೆ ಅದನ್ನು ಹಿಂಬಾಲಿಸಲಿ. ಅನ್ನವೇ ದೇವರು. ಆ ದೇವರ ಸಂಚಾರ ನಿಮಗೆ ಅರ್ಥವಾಗಲಿ.
ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳೋದು ಹೇಗೆ? ತಜ್ಞರ ಅಮೂಲ್ಯ ಮಾಹಿತಿ ...
ನೀರು ಕುಡಿಯುವಾಗಲೂ ಹೀಗೇ. ನೀರಿನ ಧಾರೆ ನಿಮ್ಮ ಗಂಟಲಲಲ್ಲಿ ಇಳಿದು, ಅನ್ನನಾಳದ ಮೂಲಕ ಜಠರ ಸೇರುವ ಪ್ರಕ್ರಿಯೆಯನ್ನು ಹಿಂಬಾಲಿಸಿ. ಅದು ಪಚನಗೊಂಡು ರಕ್ತದೊಂದಿಗೆ ವಿಲೀನವಾಗುವ ಕ್ರಿಯೆಯನ್ನು ನಾವು ಹಿಂಬಾಲಿಸಲಾರೆವಾದರೂ, ನಾವು ಏನನ್ನು ಸೇವಿಸುತ್ತೇವೆ- ಅದೇ ನಾವಾಗುವುದರಿಂದ ಈ ಕ್ರಮ ನಿಮ್ಮನ್ನು ಇನ್ನಷ್ಟು ಈ ಲೋಕವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.
- ಸಕ್ಕರೆ ಅಂಶ ಸೇವಿಸಬೇಡಿ. ಮೈದಾ ಬೇಡವೇ ಬೇಡ. ಬೇಕರಿ ಐಟಂಗಳನ್ನು ದೂರವಿಡಿ. ಸಕ್ಕರೆ- ಮೈದಾ ಮತ್ತು ಕೊರೊನಾ ವೈರಸ್ಗಳಿಗೆ ಅತ್ಯಂತ ಆಪ್ತತೆ. ಇವುಗಳನ್ನು ಸೇವಿಸಿ ಜಡವಾಗಿರುವ, ಸಕ್ಕರೆ ಅಂಶ ಹೆಚ್ಚಿರುವ ದೇಹಗಳನ್ನು ಕೊರೊನಾ ವೈರಸ್ ಲಬಕ್ಕನೆ ಹಿಡಿದುಕೊಳ್ಳುತ್ತದೆ. ಹಣ್ಣುಗಳಲ್ಲೂ ಸಕ್ಕರೆ ಅಂಶ ಅಧಿಕವಾಗಿ ಇರುವುದರಿಂದ ಅದೂ ಕಡಿಮೆಯಿರಲಿ. ಆದರೆ ತರಕಾರಿಯನ್ನು ಜಾಸ್ತಿ ಸೇವಿಸಿ. ತರಕಾರಿಗಳಲ್ಲಿ ನಿಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಸಕ್ಕರೆ, ಕಾರ್ಬೊಹೈಡ್ರೇಟ್ ಹಾಗೂ ಪ್ರೊಟೀನ್ ಸಿಗುತ್ತದೆ. ಬೇಳೆಕಾಳುಗಳಲ್ಲಿ ಪ್ರೊಟೀನ್ ಇರುತ್ತದೆ. ಅದನ್ನು ಸೇವಿಸಿ. ಮೀನು ಹಾಗೂ ಮೊಟ್ಟೆ ನಿಮ್ಮ ದೇಹದಲ್ಲಿರುವ ಪ್ರೊಟೀನ್ ಅಂಶ ಸಮತೋಲನದಲ್ಲಿಡಲು ಸಹಕಾರಿ.
- ಚೆನ್ನಾಗಿ ವ್ಯಾಯಾಮ ಮಾಡಿ. ವಾಕಿಂಗ್ ಮಾಡಿ. ಮುಂಜಾನೆ ಎಲ್ಲರೂ ಏಳುವ ಮೊದಲು ಎದ್ದು ಒಂದೆರಡು ಮೈಲು ವಾಕಿಂಗ್ ಮಾಡಿ ಬಂದರೆ ಜನರ ಓಡಾಟವೂ ಇರೋಲ್ಲ. ಪೊಲೀಸರ ಕಾಟವೂ ಇರೋಲ್ಲ. ಆದರೆ ಮಾಸ್ಕ್ ಹಾಕಿಕೊಂಡು ವಾಕಿಂಗ್, ಜಾಗಿಂಗ್ ಮಾಡಬೇಡಿ. ಉಸಿರಾಟ ಸರಾಗವಾಗಿರಲಿ.
ಕೋವಿಡ್-19 ಸೋಂಕಿತೆ ಕಂದಮ್ಮನಿಗೆ ಎದೆ ಹಾಲುಣಿಸಬಹುದಾ? ...
- ನೀವು ದುಡಿಮೆಗಾಗಿ ಹೊರಗೆ ಹೋಗಿ ಬರುವವರಾಗಿದ್ದರೆ ಮನೆಯಲ್ಲಿರುವ ವೃದ್ಧರನ್ನು ಪ್ರತ್ಯೇಕವಾದ ಕೋಣೆಯಲ್ಲಿಡಿ. ಅವರ ಜೊತೆ ಸಂವಾದ ಸೀಮಿತಗೊಳಿಸಿ. ಅವರಿಗೆ ಮನರಂಜನೆಗೆ ವ್ಯವಸ್ಥೆ ಕಲ್ಪಿಸಿ. ಮುಂಜಾನೆಯ ವಾಕಿಂಗ್ಗೆ ಅನುಕೂಲ ಮಾಡಿಕೊಡಿ. ಬೆಚ್ಚಗಿನ ಆಹಾರ ಮಾಡಿಕೊಡಿ. ಬಿಸಿನೀರು ಕುಡಿಯಿರಿ.
- ಒಳ್ಳೆಯ ಸಂಗೀತ ಆಲಿಸಿ. ವರ್ಕ್ ಫ್ರಮ್ ಹೋಮ್ ಮಾಡುವವರಾದರೆ ನಿಮ್ಮ ಆಫೀಸ್ ಜಾಗದಲ್ಲಿ ಒಂದು ಪುಟ್ಟ ನಳನಳಿಸುವ ಗಿಡ ಇರಲಿ. ಅದು ನಿಮಗೆ ಆಕ್ಸಿಜನ್ ಕೊಡುವ ಹಾಗೆಯೇ, ಅದರೊಂದಿಗೆ ನೀವು ನಡೆಸುವ ಮಾತುಕತೆ ನಿಮ್ಮನ್ನು ಆರೋಗ್ಯಯುತವಾಗಿ ಇಡುತ್ತದೆ.
- ಗಂಡ- ಹೆಂಡತಿ- ಮಕ್ಕಳ ಜೊತೆ ಸಣ್ಣಪುಟ್ಟ ಸಂತೋಷಗಳನ್ನು ಹಂಚಿಕೊಂಡು ಉಲ್ಲಾಸದಲ್ಲಿರಿ. ಕೊರೊನಾದ ಸುದ್ದಿಗಳನ್ನು ನೋಡುವುದನ್ನು ಮಿತಿಗೊಳಿಸಿ. ಪ್ಯಾನಿಕ್ ಆಗಲೇಬೇಡಿ. ನಿಮ್ಮ ಬಂಧುಗಳ ಜೊತೆ ಆಗಾಗ ಮಾತನಾಡಿ ಸಂಬಂಧ ವೃದ್ಧಿಸಿಕೊಳ್ಳಿ. ಸಂತಸ ಹಂಚಿಕೊಳ್ಳಿ, ವೃದ್ಧಿಯಾಗುತ್ತದೆ. ದುಗುಡ ಹಂಚಿಕೊಂಡರೆ ಕಡಿಮೆಯಾಗುತ್ತದೆ.