ಕಣ್ಣಿಗೆ ಕಾಣದ ಸಣ್ಣ ಅಣುವೊಂದು ಜನ ಜೀವನನ್ನೇ ಅಲ್ಲೋಲಕಲ್ಲೋಲವಾಗಿಸಿದೆ. ಕೊರೋನಾ (Corona) ಒಂದನೇ ಅಲೆಯಾಯ್ತು, ಎರಡನೇ ಅಲೆಯಾಯ್ತು, ಈಗ ಮೂರನೇ ಅಲೆಯೂ ವಕ್ಕರಿಸಿಕೊಂಡಿದೆ. ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೇ (Children) ಹೆಚ್ಚು ಅಪಾಯ (Danger) ಅಂತಾರೆ ಅದೆಷ್ಟು ನಿಜ.

ಕೋವಿಡ್ ಸೋಂಕು ಆರಂಭವಾದಾಗಿನಂದಲೂ ಎಲ್ಲರೂ ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಕಣ್ಣಿಗೆ ಕಾಣದ ಮಹಾಮಾರಿ ಹರಡಲು ಆರಂಭವಾದ ವರ್ಷ ಸಂಖ್ಯೆಯಿಲ್ಲದಷ್ಟು ಮಂದಿ ಈ ಸೋಂಕಿನಿಂದ ಮೃತಪಟ್ಟರು. ಎರಡನೇ ಅಲೆಗೆ ಮತ್ತಷ್ಟು ಮಂದಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಹಲವಾರು ನಿರ್ಬಂಧಗಳು, ಲಾಕ್‌ಡೌನ್ ವಿಧಿಸಿದ ಮೇಲೂ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಲೇ ಹೋಯಿತು. ಕ್ರಮೇಣ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಾ ಬಂತು. ಇನ್ನೇನು ಎಲ್ಲಾ ಮುಗಿಯಿತು ಎಂದುಕೊಳ್ಳುತ್ತಿರುವಾಗಲೂ ಮೂರನೇ ಅಲೆಯು ಶುರುವಾಯಿತು. ಹಲವು ರಾಜ್ಯಗಳಲ್ಲಿ ಸೆಮಿ ಲಾಕ್‌ಡೌನ್, ಜನರು ಗುಂಪುಗೂಡದಂತೆ, ಸಭೆ, ಸಮಾರಂಭಗಳನ್ನು ನಡೆಸದಂತೆ ನಿರ್ಬಂಧವನ್ನೂ ಹೇರಲಾಗಿವೆ. ಓಪನ್ ಆದ ಶಾಲಾ, ಕಾಲೇಜು, ಮಾಲ್, ಬಾರ್, ಜಿಮ್‌ಗಳೆಲ್ಲಾ ಬಂದ್ ಆಗುತ್ತಿವೆ. ಜನರು ಮತ್ತೆ ಸೋಂಕಿನ ಭೀತಿಯಲ್ಲಿದ್ದಾರೆ.

Add Asianetnews Kannada as a Preferred SourcegooglePreferred

ಕೊರೋನಾ ಎರಡನೇ ಅಲೆ ಆರಂಭವಾದಗಿನಿಂದಲೂ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚು ಎಂಬ ಮಾತು ಕೇಳಿ ಬರುತ್ತಲೇ ಇತ್ತು. ಆದರೆ ಆ ಮಾತಿಗೆ ಯಾವುದೇ ಪುರಾವೆಗಳಿರಲ್ಲಿಲ್ಲ. ಹೀಗಾಗಿಯೇ ಮೂರನೇ ಅಲೆ ಈಗಾಗಲೇ ಬಂದು ಹೋಗಿದೆ, ಜನರನ್ನು ಅಷ್ಟಾಗಿ ಬಾಧಿಸಿಲ್ಲ, ಹೀಗಾಗಿ ಯಾರಿಗೂ ಗೊತ್ತಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇನ್ನೂ ಹಲವರು, ಕೊರೋನಾ ಮೂರನೇ ಅಲೆ ಇನ್ನಷ್ಟೇ ವಕ್ಕರಿಸಲಿದೆ, ಇದು ಕೋವಿಡ್ ಒಂದನೇ, ಎರಡನೇ ಅಲೆಗಿಂತ ಹೆಚ್ಚು ಅಪಾಯಕಾರಿ ಎಂದಿದ್ದರು. ಹಲವು ವಾದ-ವಿವಾದಗಳ ನಡುವೆಯೇ ಕೋವಿಡ್ ಮೂರನೇ ಅಲೆ ಬಂದಾಗಿದೆ. 

Coronavirus: ಕೋವಿಡ್‌ ಎಷ್ಟುಗಂಭೀರವಾಗಿದೆ ಎಂದು ತಿಳಿಸುವ ಜೀನ್‌ ಆವಿಷ್ಕಾರ, ನಮ್ಮ ದೇಶದಕತೆ ಏನು?

ಕೊರೋನಾ (Corona) ಮುಗೀತು, ಇನ್ನೇನಿದ್ರೂ ಮಸ್ತಿ ಅಂತ ಹಬ್ಬ,ಹರಿದಿನ, ಸಭೆ ಸಮಾರಂಭಗಳಲ್ಲಿ ಮೈ ಮರೆತ ಮಂದಿಯೆಲ್ಲಾ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಮಾಸ್ಕ್ (Mask), ಸ್ಯಾನಿಟೈಸರ್, ಸಾಮಾಜಿಕ ಅಂತರ ಮೊದಲಾದ ನಿಯಮಗಳನ್ನು ಫಾಲೋ ಮಾಡುತ್ತಿದ್ದಾರೆ. 3ನೇ ತರಂಗದಲ್ಲಿ ಮಕ್ಕಳು ಕೋವಿಡ್‌ನಿಂದ ಏಕೆ ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೋನಾ ಮೂರನೇ ಅಲೆ ಮಕ್ಕಳಲ್ಲಿ ಕಂಡುಬರುವ ಹೆಚ್ಚು ಸಾಂಕ್ರಾಮಿಕ ಕಾಯಿಲೆಯಾಗಿದೆ ಎಂದು ಏಮ್ಸ್‌ ವೈದ್ಯ ರಾಕೇಶ್ ಲೋಧಾ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಮೊದಲ ಎರಡು ಅಲೆಗಳಲ್ಲಿ ಮಕ್ಕಳು (Children) ಕಡಿಮೆ ಅಪಾಯಕ್ಕೆ ಒಳಗಾಗಿದ್ದರು. ಆದರೆ ಈಗ ಮೂರನೇ ಅಲೆಯಲ್ಲಿ ಕೊರೋನಾ ರೂಪಾಂತರಿ ಓಮಿಕ್ರಾನ್ (Omicron) ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದವರು ತಿಳಿಸಿದ್ದಾರೆ. ಭಾರತದಲ್ಲಿ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಭಾರತದಿಂದ ಹೆಚ್ಚಿನ ಡೇಟಾ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ಜನರು ಬೇಕಾಬಿಟ್ಟಿ ಗುಂಪು ಸೇರಿರುವುದು, ಸಭೆ ಸಮಾರಂಭ ಆಯೋಜಿಸಿರುವುದು, ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಪಾಡದೇ ವರ್ತಿಸಿರುವುದು ಕೊರೋನಾ ಮೂರನೇ ಅಲೆಗೆ ಕಾರಣವಾಗಿದೆ ಎಂದು ರಾಕೇಶ್ ಲೋಧಾ ತಿಳಿಸಿದ್ದಾರೆ.

Saffron Health Benefits: ಕೋವಿಡ್ ಕಾಲದಲ್ಲಿ ಆಹಾರದಲ್ಲಿರಲಿ ಕೇಸರಿ

‘ಮಕ್ಕಳಲ್ಲಿ ಕೋವಿಡ್-19 ಪರಿಣಾಮ’ ಕುರಿತು ಎಐಐಎಂಎಸ್ ಆಯೋಜಿಸಿದ್ದ ಸೆಮಿನಾರ್‌ನಲ್ಲಿ, ದೆಹಲಿಯ ಎಐಐಎಂಎಸ್‌ನ ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ಯುನಿಟ್‌ನ ಪ್ರಾಧ್ಯಾಪಕ, ಡಾ.ರಾಕೇಶ್ ಲೋಧಾ, ಮಕ್ಕಳ ಮೇಲೆ ಕೊರೋನಾ ಮೂರನೇ ಅಲೆ ಪ್ರಭಾವ ಬೀರಲು ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ. ಮಕ್ಕಳನ್ನು ಇಲ್ಲಿಯವರೆಗೆ ಕೋವಿಡ್‌ನಿಂದ ಸ್ವಲ್ಪಮಟ್ಟಿಗೆ ರಕ್ಷಿಸಲಾಗಿದೆ. ಅಲ್ಲದೆ, ಮಕ್ಕಳು ವೈರಸ್‌ (Virus)ಗೆ ವಿರುದ್ಧವಾಗಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಆದರೆ ಓಮಿಕ್ರಾನ್ ಈ ಹಿಂದಿನ ಸೋಂಕಿಗಿಂತ 10 ಪಟ್ಟು ಶಕ್ತಿ ಹೊಂದಿದೆ. ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ನವದೆಹಲಿಯ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಾತನಾಡಿ, ‘ಕೋವಿಡ್ ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚು ಪ್ರಭಾವ ಬೀರುತ್ತಿದೆ. ಯುಎಸ್ ಆಸ್ಪತ್ರೆಗಳ ಕೆಲವು ವರದಿಗಳು ಅವರು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ದಾಖಲಿಸುತ್ತಿದ್ದಾರೆ ಎಂಬುದನ್ನು ತಿಳಿಸಿದೆ’ ಎಂದು ಮಾಹಿತಿ ನೀಡಿದ್ದಾರೆ. ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಹೇಗಿರಬಹುದು ಎಂದು ತಿಳಿಸಲಾಗಿದೆ. ಜ್ವರ, ನೋಯುತ್ತಿರುವ ಗಂಟಲು, ಕೆಮ್ಮು ಕಾಣಿಸಿಕೊಳ್ಳಬಹುದಾಗಿದೆ. ಇದಕ್ಕೆ ಮನೆಯಲ್ಲಿಯೂ ಚಿಕಿತ್ಸೆ ನೀಡಬಹುದಾಗಿದೆ. ಹೋಮ್ ಐಸೋಲೇಶನ್ ಮಾಡಿ, ಪ್ಯಾರಸಿಟಮಾಲ್ 10-15mg, ಡೋಸ್, ಪ್ರತಿ 4-6 ಗಂಟೆಗಳಿಗೊಮ್ಮೆ ಪುನರಾವರ್ತಿಸಬಹುದು. ಆಗಾಗ ಬಿಸಿ ನೀರು ಕುಡಿಯುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ಸೇವಿಸುವಂತೆ ಸೂಚಿಸಲಾಗಿದೆ.