ಈಗಾಗಲೇ ಕೆಲ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ತಮ್ಮ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ 15 ಶಾಸಕರು ಶೀಘ್ರ ಬಿಜೆಪಿ ಸೇರುವ ಬಗ್ಗೆ ಹೇಳಿಕೆ ನೀಡಿ ಬಾಂಬ್ ಸಿಡಿಸಲಾಗಿದೆ. 

ಹಾಸನ [ಅ.23]: ಜೆಡಿಎಸ್‌ನಿಂದ 15 ಜನ ಶಾಸಕರು ಸದ್ಯದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ.ಮಂಜು ಹೊಸ ಬಾಂಬ್‌ ಸಿಡಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ಅಧಿ ದೇವತೆ ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನ 15 ಶಾಸಕರು ಬಿಜೆಪಿ ಸೇರಲಿರುವುದರಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಿವೃತ್ತಿಯಾಗಲು ಇದು ಸಕಾಲವಾಗಿದೆ ಎಂದು ವ್ಯಂಗ್ಯವಾಡಿದರು.

ನನ್ನ ಮೇಲೆ ಐಟಿ ರೇಡ್‌ ಆದರೆ ಬಿಎಸ್‌ವೈ ಆಸ್ತಿ ದಾಖಲೆ ಸಿಗುತ್ತೆ!...

ಮುಂದಿನ ಕೆಲ ದಿನಗಳಲ್ಲಿ ಜೆಡಿಎಸ್‌ ಶಾಸಕರು ಬಿಜೆಪಿ ಸೇರುವುದು ನಿಶ್ಚಿತವಾಗಿದ್ದು, ಈ ಮುನ್ಸೂಚನೆ ಇರುವ ಕಾರಣ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಮಾಡಲು ಹೊರಟಿದ್ದಾರೆ ಎಂದರು.

ಇದಕ್ಕೆ ಪುಷ್ಟಿನೀಡುವಂತೆ ಒಂದು ತಿಂಗಳ ಹಿಂದೆ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಪುತ್ಥಳಿ ಎದುರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಫೋಟೋಗೆ ಪೋಸ್‌ ನೀಡಿದ್ದಾರೆ. ಹಾಗಾಗಿ ಬಿಜೆಪಿ ನಾಯಕರು ಎಚ್ಚರಿಕೆಯಿಂದ ಇರಬೇಕೆಂದು ಮುನ್ನೆಚ್ಚರಿಕೆ ನೀಡಿದರು.

ಅಧಿಕಾರಕ್ಕಾಗಿ ಜೆಡಿಎಸ್‌ ನಾಯಕರು ಯಾರ ಜೊತೆಯಲ್ಲಿ ಬೇಕಾದರೂ ಸಖ್ಯ ಬೆಳೆಸಲು ಹಿಂದೆ ಸರಿಯುವುದಿಲ್ಲ ಎಂದು ಟೀಕಿಸಿದರು.