ನನ್ನ ತಾಯಿ ಎರಡನೇ ಪತ್ನಿ, ಹರಕೆ ಹೊತ್ತ ಕಾರಣ ಹುಟ್ಟಿದವ ನಾನು : ದೇವೇಗೌಡ
ನನ್ನ ತಾಯಿ ಹರಕೆ ಹೊತ್ತ ಕಾರಣ ಹುಟ್ಟಿದ ಮಗ ನಾನು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಭಾವುಕರಾದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ[ನ.15] : ನನ್ನ ತಂದೆಯ ಮೊದಲ ಪತ್ನಿ ಮತ್ತು ಅವರ 3 ಗಂಡು ಮಕ್ಕಳು ತೀರಿಕೊಂಡರು. ನಂತರ ನನ್ನ ತಾಯಿಯನ್ನು ವಿವಾಹವಾದರು. ನಂತರ ನಮ್ಮ ತಾಯಿ ಹರದಹಳ್ಳಿಯಲ್ಲಿ ಇರುವ ಶ್ರೀಈಶ್ವರನ ದೇವಾಲಯಕ್ಕೆ ಪ್ರತಿದಿನ ಮುಂಜಾನೆದ್ದು ಹೋಗಿ, ದೇವಾಲಯದ ಆವರಣದ ಕಸ ಗುಡಿಸಿ, ರಂಗೋಲಿ ಇಟ್ಟು, ಸೂರ್ಯ ನಮಸ್ಕಾರ ಮಾಡಿ ಬರುತ್ತಿದ್ದರು. ಈ ವೇಳೆ ನನ್ನ ತಾಯಿ ನನಗೆ ಗಂಡು ಮಗು ಕೊಡು. ನಿನಗೆ ಕಾರ್ತೀಕ ಮಾಸದಲ್ಲಿ ನೈವೈದ್ಯ ಮಾಡುತ್ತೇನೆ ಎಂದು ಹರಕೆ ಹೊತ್ತರು. ಹರಕೆಯಿಂದ ಹುಟ್ಟಿದವ ನಾನು ಎಂದು ದೇವೇಗೌಡರು ಹೇಳಿದರು.
ಹಾಸನದ ದೆವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಈ ಹರಕೆ ಹೊತ್ತ ನಂತರದಲ್ಲಿ ನಾನು ಹುಟ್ಟಿದೆ. ನನ್ನ ತಂದೆ ತಾಯಿ ಪಟ್ಟಕಷ್ಟಅಷ್ಟಿಟ್ಟಲ್ಲ. ಇದ್ದ ಅಲ್ಪ ಜಮೀನಿನಲ್ಲೇ ಕೃಷಿ ಮಾಡಿಕೊಂಡು ನನ್ನನ್ನು ಡಿಪ್ಲೋಮಾ ವರೆಗೆ ಓದಿಸಿದರು. ಸ್ಕೂಲ್ ಹೋಗುವ ಮೊದಲು ಜಮೀನು ಕೆಲಸ ಮಾಡುತ್ತಿದ್ದೆ. ರಜೆ ದಿನಗಳಲ್ಲಿ ಕುರಿ ಮೇಯುಸುತ್ತಿದ್ದೆ. ಪ್ರತಿದಿನದ ಬದುಕಿಗೂ ನನ್ನ ಹೆತ್ತವರು ಹೋರಾಟ ಮಾಡುತ್ತಿದ್ದರು ಎಂದು ಹೇಳುವಾಗ ಗದ್ಗದಿತರಾಗಿ ಕೆಲ ನಿಮಿಷಕ್ಕೆ ಮೌನಕ್ಕೆ ಜಾರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಾನು ಯಾವುದೇ ಕಾರ್ಯ ಆರಂಭಿಸುವ ಮೊದಲು ಶೃಂಗೇರಿ ಶ್ರೀಗಳ ಆಶೀರ್ವಾದ ಪಡೆದು ಆರಂಭಿಸುತ್ತೇವೆ. 1962ರಲ್ಲಿ ನನ್ನ ರಾಜಕೀಯ ಗುರು ದಿವಂಗತ ಎ.ಜಿ. ರಾಮಚಂದ್ರರಾಯರು ಶೃಂಗೇರಿ ಮಠದ ಶ್ರೀಗಳನ್ನು ಪರಿಚಯಿಸಿದರು. ಅಂದಿನಿಂದ ಇಂದಿನವರೆಗೆ ನನ್ನ ಮತ್ತು ಮಠದ ಸಂಬಂಧ ಅವಿರತರಾಗಿ ಮುಂದುವರಿದುಕೊಂಡು ಬಂದಿದೆ ಎಂದರು.