ಔರಂಗಾಬಾದ್ನ ಗಾವುತಲ ವನ್ಯಜೀವಿ ಅಭಯಾರಣ್ಯದಲ್ಲಿ ಗೋವುಗಳು ಚಿರತೆಯೊಂದರ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯಿಂದ ಗಂಭೀರ ಗಾಯ ಗೊಂಡಿದ್ದ ಚಿರತೆ ಶುಕ್ರವಾರ ಕೊನೆಯುಸಿರೆಳೆದಿದೆ.
ಪುಣೆ: ಹುಲಿ, ಚಿರತೆಗಳು ಗೋವುಗಳನ್ನು ಬೇಟೆಯಾಡಿ ಕೊಲ್ಲುವುದನ್ನು ನೀವು ನೋಡಿರುತ್ತೀರಿ, ಕೇಳಿರುತ್ತೀರಿ. ಆದರೆ, ಇಲ್ಲೊಂದು ಘಟನೆಯಲ್ಲಿ ಗೋವುಗಳೇ ಚಿರತೆಯೊಂದನ್ನು ಗಂಭೀರ ಗಾಯಗೊಳಿಸಿ ಸಾಯಿಸಿವೆ. ಹೌದು, ಔರಂಗಾಬಾದ್ನ ಗಾವುತಲ ವನ್ಯಜೀವಿ ಅಭಯಾರಣ್ಯದಲ್ಲಿ ಗೋವುಗಳು ಚಿರತೆಯೊಂದರ ಮೇಲೆ ದಾಳಿ ನಡೆಸಿದ್ದವು.
Add Asianetnews Kannada as a Preferred Source

ಈ ದಾಳಿಯಿಂದ ಗಂಭೀರ ಗಾಯ ಗೊಂಡಿದ್ದ ಚಿರತೆ ಶುಕ್ರವಾರ ಕೊನೆಯುಸಿರೆಳೆದಿದೆ. ಗಾವುತಲದ ಭಂಬಾರ್ವಾಡಿಯಲ್ಲಿ ಚಿರತೆ ಕರುವೊಂದನ್ನು ಸಾಯಿಸಿತ್ತು. ಇದರಿಂದ ಆಕ್ರೋಶಗೊಂಡ ಗೋವುಗಳ ಗುಂಪು ಚಿರತೆಯ ಮೇಲೆ ದಾಳಿ ನಡೆಸಿತ್ತು. ಒಂದು ದನ ತನ್ನ ಕೊಂಬುಗಳಿಂದ ಚಿರತೆಯನ್ನು ಎತ್ತಿಎತ್ತಿ ಮೇಲಕ್ಕೆಸೆದಿತ್ತು.
ಇದರಿಂದಾಗಿ ಚಿರತೆಗೆ ಬೆನ್ನೆಲುಬು ಹಾಗೂ ದೇಹದ ಒಳಗಿನ ಭಾಗಗಳಲ್ಲಿ ಗಂಭೀರ ಗಾಯಗಳಾಗಿ ದ್ದವು. ಗಂಭೀರ ಗಾಯಗೊಂಡಿದ್ದ ಚಿರತೆಯನ್ನು ಪುಣೆಯ ಜುನ್ನಾರ್ನ ಮಾನಿಕ್ಡೊ ಚಿರತೆ ಸಂರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅದು ಮೃತಪಟ್ಟಿದೆ.
