ಗಿಣಿರಾಮದ ಮಹತಿ ಸೀರಿಯಲ್ನಿಂದ ಕಾಣೆಯಾಗಿ ಪ್ಲಾಸ್ಮಾ ದಾನ ಮಾಡ್ತಿದ್ದಾರೆ..!
ನಟಿ ನಯನಾ ನಾಗರಾಜ್ ಕೋವಿಡ್ನಿಂದ ಈಗಷ್ಟೇ ಚೇತರಿಸಿಕೊಂಡು ಪ್ಲಾಸ್ಮಾ ದಾನ ಮಾಡಿ ಒಬ್ಬ ವ್ಯಕ್ತಿಗೆ ಜೀವದಾನ ಮಾಡಿ ಮಾದರಿಯಾಗಿದ್ದಾರೆ. ಪ್ರಾಜೆಕ್ಟ್ ಸಂಜೀವಿನಿ ಎಂಬ ಗುಂಪಿನ ಮೂಲಕ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವ ಅವರ ಮಾತುಗಳು ಇಲ್ಲಿವೆ.
ಗಿಣಿರಾಮ ಸೀರಿಯಲ್ನಿಂದ ಮಹತಿ ಕಾಣೆ: ನನಗೆ ಕೋವಿಡ್ ಬಂದ ಕಾರಣ ಗಿಣಿರಾಮ ಕಥೆ ಒಂಚೂರು ಬೇರೆ ಟ್ರ್ಯಾಕ್ನಲ್ಲಿ ಸಾಗಿದೆ. ನನ್ನ ಮಹತಿ ಪಾತ್ರ ಕಾಣೆಯಾಗಿ, ಎಲ್ಲರೂ ಹುಡುಕಾಟದಲ್ಲಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬರೋ ಕಮೆಂಟ್ಗಳು ಹಿಲೇರಿಯಸ್ ಆಗಿರುತ್ತವೆ ಎಂದಿದ್ದಾರೆ.
ವೀಕ್ಷಕರಲ್ಲಿ ಹೆಚ್ಚಿನವರಿಗೆ ನನಗೆ ಕೋವಿಡ್ ಬಂದು ಕತೆ ಹೀಗೆ ಬದಲಾಗಿದೆ ಅಂತ ಗೊತ್ತು. ಅದಕ್ಕೆ ನನ್ನ ಪತಿ ಶಿವರಾಮ ನನ್ನನ್ನು ಹುಡುಕೋ ಸೀನ್ನ ಪೊ್ರೀಮೊ ಸೋಷಿಯಲ್ ಮೀಡಿಯಾದಲ್ಲಿ ಬಂದರೆ ‘ಮಹತಿಯನ್ನ ಕೊರೋನಾ ಕಿಡ್ನಾಪ್ ಮಾಡಿದೆ’,‘ಅಲ್ಲೆಲ್ಲ ಹುಡುಕಿ ಪ್ರಯೋಜನ ಇಲ್ಲ, ಆಕೆಗೆ ಕೋವಿಡ್ ಬಂದಿದೆ’ ಅಂತೆಲ್ಲ ಕಮೆಂಟ್ ಗಳು ಬರುತ್ತಿರುವೆ. ಪರಿಸ್ಥಿತಿ ಸರಿ ಹೋದ ಮೇಲೆ ಖಂಡಿತಾ ನಿಮ್ಮ ಮಹತಿ ವಾಪಾಸ್ ಬರ್ತಾಳೆ ಅಂತ ಈ ಮೂಲಕ ಹೇಳೋಕೆ ಇಷ್ಟ ಪಡ್ತೀನಿ.
ನನಗೆ ಕೋವಿಡ್ ಅಟ್ಯಾಕ್ ಆದಾಗ ಪ್ರಾಜೆಕ್ಟ್ ಸಂಜೀವಿನಿ ಎಂಬ ಗ್ರೂಪ್ ಮೂಲಕ ಕೊರೋನಾ ರೋಗಿಗಳಿಗೆ ಸಹಾಯ ಮಾಡುತ್ತಿದ್ದೆ. ಈ ಗ್ರೂಪ್ ನಲ್ಲಿ ನಾವೊಂದಿಷ್ಟು ನಟ, ನಟಿಯರು ಹಾಗೂ ಸ್ನೇಹಿತರು ಬೆಡ್, ಪ್ಲಾಸ್ಮಾ, ಔಷಧಿ ಇತ್ಯಾದಿಗಳ ಪೂರೈಕೆಯಲ್ಲಿ ನಮ್ಮಿಂದಾದ ಸಹಾಯ ಮಾಡುತ್ತಿದ್ದೆವು.
ಆಗ ಪ್ಲಾಸ್ಮಾಗೆ ಬೇಡಿಕೆ ಹೆಚ್ಚುತ್ತಿರುವುದು ಮತ್ತು ಪ್ಲಾಸ್ಮಾ ನೀಡೋರು ಬಹಳ ಕಡಿಮೆ ಸಂಖ್ಯೆಯಲ್ಲಿರುವುದು ನನ್ನ ಗಮನಕ್ಕೆ ಬಂದಿತ್ತು. ನಾನು ಚೇತರಿಸಿಕೊಂಡ ಮೇಲೆ ಪ್ಲಾಸ್ಮಾ ನೀಡಲೇ ಬೇಕು ಅಂತ ಆಗಲೇ ನಿರ್ಧರಿಸಿದ್ದೆ. ಅದರಂತೆ ಕೋವಿಡ್ನಿಂದ ಚೇತರಿಸಿಕೊಂಡ ತಕ್ಷಣ ಪ್ಲಾಸ್ಮಾಗೆ ಬೇಡಿಕೆ ಬಂತು.
ಆ ವ್ಯಕ್ತಿ ಕ್ರಿಟಿಕಲ್ ಸ್ಟೇಜ್ ನಲ್ಲಿದ್ದರು. ಅವರಿಗೆ ಪ್ಲಾಸ್ಮಾದೊಂದಿಗೆ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡ ಸುದ್ದಿ ಸಿಕ್ಕಿತು. ಮನಸ್ಸಿಗೆ ಸಮಾಧಾನವಾಯ್ತು.
ನಮ್ಮ ಪ್ರಾಜೆಕ್ಟ್ ಸಂಜೀವಿನಿ ಮೂಲಕ ಬೇಡಿಕೆ ಬಂದಾಗಲೆಲ್ಲ ಬಿಬಿಎಂಪಿಗೆ ಫೋನ್ ಮಾಡಿ ರಿಜಿಸ್ಟ್ರೇಶನ್ ಮಾಡಿಸಿ ಬೆಡ್ ಹುಡುಕಿ ರೋಗಿಗೆ ತಿಳಿಸುತ್ತಿದ್ದೆವು. ಹೈದರಾಬಾದ್ನಿಂದೆಲ್ಲ ನನ್ನ ನಂಬರ್ಗೆ ಕಾಲ್ ಬರುತ್ತಿತ್ತು.
ಎಷ್ಟೋ ಸಲ ನಾವೆಷ್ಟು ಪ್ರಯತ್ನ ಪಟ್ಟರೂ ಜೀವ ಉಳಿಸಲಾಗುತ್ತಿರಲಿಲ್ಲ, ಕೆಲವೊಮ್ಮೆ ಬೆಡ್ ಸಿಕ್ಕರೂ ರೋಗಿ ಉಳಿಯುತ್ತಿರಲಿಲ್ಲ. ಆಗ ಬಹಳ ನೋವಾಗುತ್ತಿತ್ತು.
ಎರಡನೇ ಅಲೆ ಕೊರೋನಾದಿಂದ ಸಾಕಷ್ಟು ಹೊಡೆತ ತಿಂದೆ. ವಾಂತಿ, ಜ್ವರ, ರ್ಯಾಶಸ್, ಲಂಗ್ ಇನ್ಫೆಕ್ಷನ್, ಉಸಿರಾಟ ಸಮಸ್ಯೆ ಎಲ್ಲ ಆಗಿತ್ತು. ಮನೆ ಯಲ್ಲೇ ನೆಬ್ಯುಲೈಸೇಶನ್ ತೆಗೆದುಕೊಳ್ಳುತ್ತಿದ್ದೆ. 21 ದಿನ ರೂಮ್ ಬಿಟ್ಟು ಆಚೆ ಬರಲಿಲ್ಲ. ಆಮೇಲೂ ಮುಂಜಾಗ್ರತಾ ಕ್ರಮವಾಗಿ ನಾಲ್ಕೈದು ದಿನ ತೀರಾ ಅನಿ ವಾರ್ಯವಾದರೆ ಮಾತ್ರ ರೂಮ್ನ ಆಚೆ ಬರುತ್ತಿದ್ದೆ.
ಕೋವಿಡ್ ಎರಡನೇ ಅಲೆ ಕೇವಲ ದೇಹಕ್ಕೆ ಮಾತ್ರ ಬರೋದಲ್ಲ, ಮಿದುಳಿಗೂ ಬರುತ್ತೆ. ಹ್ಯಾಪಿ ಹೈಪಾಕ್ಸಿ ಅನ್ನೋದು ಇದರ ಮುಖ್ಯ ಲಕ್ಷಣ. ಕೋವಿಡ್ ಬಂದ ಮೊದಲನೇ ವಾರ ಏನೂ ಲಕ್ಷಣಗಳೇ ಇರಲ್ಲ. ನನ್ನ ಇಮ್ಯುನಿಟಿಗೆ ಕೊರೋನಾ ಓಡೋಗಿದೆ ಅಂತ ಜನ ಯಾವ ಔಷಧವೂ ತೆಗೆದುಕೊಳ್ಳದೇ ಆರಾಮವಾಗಿರುತ್ತಾರೆ.
ಆದರೆ ನಮ್ಮ ಇಮ್ಯೂನ್ ಸಿಸ್ಟಂ ಅನ್ನು ನಾಶ ಪಡಿಸುವ ವೈರಾಣುಗಳು ಮುಂದಿನ ವಾರದಿಂದ ಅಟ್ಯಾಕ್ ಮಾಡಿ ವ್ಯಕ್ತಿಯನ್ನು ಬಲಿ ಪಡೆಯುತ್ತವೆ. ಲಕ್ಷಣಗಳೇ ಇಲ್ಲದವರೂ ದಯಮಾಡಿ ಎಚ್ಚರದಿಂದಿರಿ. ನಿಮಗೆ ಕೋವಿಡ್ ನೆರವಿನ ಅಗತ್ಯವಿದ್ದರೆ ನಮ್ಮ ಇನ್ ಸ್ಟಾಗ್ರಾಂ ಅಕೌಂಟ್ಗೆ ಟ್ಯಾಗ್ ಮಾಡಿ ಎಂದಿದ್ದಾರೆ ನಯನಾ