ಸೇಲ್ಸ್ ಮ್ಯಾನ್, ಪೋಸ್ಟರ್ ಬಾಯ್ ಆಗಿ ಕೆಲಸ ಮಾಡಿ ಈಗ ಕನ್ನಡ, ತೆಲುಗು ಕಿರುತೆರೆಯಲ್ಲಿ ಮಿಂಚ್ತಿದ್ದಾರೆ ಈ ನಟ
ಕೆಲವರಿಗೆ ಅದೃಷ್ಟ ಕೈ ಹಿಡಿದ್ರೆ, ಇನ್ನು ಕೆಲವರಿಗೆ ಕಠಿಣ ಪರಿಶ್ರಮ ಕೈ ಹಿಡಿಯುತ್ತಂತೆ, ಅಂತದ್ದರಲ್ಲಿ ಎರಡನೇ ಕೆಟಗರಿಗೆ ಸೇರಿದ ಕನ್ಯಾಕುಮಾರಿ ಸೀರಿಯಲ್ ಖ್ಯಾತಿಯ ಯಶವಂತ್ ಗೌಡ ಲೈಫ್ ಸ್ಟೋರಿ ಇಲ್ಲಿದೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಸೀರಿಯಲ್ ತಮ್ಮ ವಿಭಿನ್ನ ಕಥೆಯಿಂದಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಟಿಆರ್ ಪಿ ಕೊರತೆಯಿಂದ ಬೇಗನೆ ಮುಕ್ತಾಯಗೊಂಡ ಈ ಸೀರಿಯಲ್ ನ ಕನ್ನಿಕಾ ಚರಣ್ ಜೋಡಿ ಮಾತ್ರ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
ಅದರಲ್ಲೂ ಚರಣ್ ಯುವಜನರ ಹಾಟ್ ಫೆವರೀಟ್ ಆಗಿದ್ದರು. ಅವರ ಚಾಕಲೇಟ್ ಬಾಯ್ ಲುಕ್, ಅದ್ಭುತ ನಟನೆ, ಮಾತು, ನಗು, ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಚರಣ್ ಪಾತ್ರದಲ್ಲಿ ಜನಪ್ರಿಯತೆ ಪಡೆದ ನಟ ಯಶವಂತ್ ಗೌಡ (Yashawanth Gowda).
ನಟಿಸಿದ ಮೊದಲ ಧಾರವಾಹಿಯಲ್ಲಿಯೇ ಜನಪ್ರಿಯತೆ ಪಡೆದ ಯಶವಂತ್ ಸದ್ಯ ತೆಲುಗು ಸೀರಿಯಲ್ ನಲ್ಲಿ (Telugu serial) ತುಂಬಾ ಬ್ಯುಸಿ, ಜೊತೆಗೆ ಕಿರುತೆರೆಯ ನೆಚ್ಚಿನ ಕಪಲ್ ಅವಾರ್ಡ್ ಕೂಡ ಪಡೆದಿದ್ದಾರೆ. ಕನ್ನಡದಲ್ಲಿ ಚಾನ್ಸ್ ಸಿಕ್ಕರೆ ಮತ್ತೆ ಬರಲು ತಯಾರಿ ನಡೆಸಿರುವ ಯಶವಂತ್ ಬೆಳೆದು ಬಂದ ಹಾದಿ ಮಾತ್ರ ಸುಲಭವಾಗಿರಲಿಲ್ಲ.
ಗಾಯಕನಾಗುವ ಆಸೆ ಹೊತ್ತಿದ್ದ ಯಶವಂತ್ ಆರ್ಥಿಕ ಪರಿಸ್ಥಿತಿಯಿಂದಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದರಂತೆ. ಎಲ್ಲಾದರೂ ಶೂಟಿಂಗ್ ನಡೆಯುತ್ತಿದ್ದರೆ, ಅಲ್ಲಿಗೆ ಹೋಗಿ ಗಂಟೆಗಟ್ಟಲೆ ನಿಂತು ಶೂಟಿಂಗ್ ನೋಡುತ್ತ, ನೆಚ್ಚಿನ ನಟರ ಜೊತೆ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಿದ್ದರು. ಜೊತೆಯಲ್ಲಿಯೇ ನಾನೂ ಒಂದಿನ ಇಂಥ ಹೀರೋ ಆಗಬೇಕು ಅಂತ ಕನಸನ್ನೂ ಕಂಡವರು.
ಇತ್ತೀಚೆಗೆ ಝೀ ಕುಟುಂಬ ಅವಾರ್ಡ್ಸ್ (Zee Kutumba Awards) ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಯಶವಂತ್ ಅವರು ನಡೆದು ಬಂದ ಹಾದಿಯನ್ನು ವೇದಿಕೆ ಮೇಲೆ ತೋರಿಸಿದ್ದರು. ತಾನು ನಡೆದ ಬಂದ ಹಾದಿಯನ್ನು ನೆನೆದು ಕಣ್ತುಂಬಿಕೊಂಡ ಯಶವಂತ್, ಎಲ್ಲರೂ ನಾನು ಲಕ್ಕಿ, ಅದಕ್ಕಾಗಿ ನಟನಾ ಜಗತ್ತಿಗೆ ಬಂದಿದ್ದೇನೆ ಎನ್ನುತ್ತಾರೆ. ಆದರೆ ಇದಲ್ಲದರ ಹಿಂದೆ ಹಾರ್ಡ್ ವರ್ಕ್ ಇದೆ ಎಂದಿದ್ದಾರೆ.
ಕಾಲೇಜು ಮುಗಿಸಿದ ಸಮಯದಲ್ಲಿ ಯಶವಂತ್ ಸೆಲ್ಸ್ ಮ್ಯಾನ್ (Sales Man), ಬೆಸ್ಕಾಂ, ಹೆಲ್ಪ್ ಲೈನ್ ಟೆಲಿಫೋನ್ ಆಪರೇಟರ್, ಇಲೆಕ್ಟ್ರೀಶಿಯನ್ (Electrician), ಮನೆ ಮನೆಗೆ ಹೋಗಿ ಪತ್ರ ನೀಡುವ ಕೆಲಸ, ಮೆಡಿಕಲ್ ಸ್ಟೋರ್ (Medical Store) ನಲ್ಲೂ ಸಹ ಕೆಲಸ ಮಾಡಿದ್ದರಂತೆ. ನಟನಾಗುವ ಹುಚ್ಚು, ಇದೀಗ ಇಷ್ಟು ದೊಡ್ಡ ವೇದಿಕೆ ಕಲ್ಪಿಸಿದೆ ಎಂದಿದ್ದಾರೆ ಯಶವಂತ್.
ಯಶವಂತ್ ಅವರಿಗೆ ಸಿನಿಮಾ ಎಂದರೆ ಹುಟ್ಟು ಪ್ರೀತಿ. ಎಲ್ಲಾ ಚಿತ್ರಗಳನ್ನು ಥಿಯೇಟರ್ ಗೆ ಹೋಗಿ ನೋಡುತ್ತಾರಂತೆ. ಮೊಬೈಲಿನಲ್ಲಿ ಸಿನಿಮಾ ಹಾಡುಗಳಿಗೆ, ಡೈಲಾಗ್ ಗಳಿಗೆ ರೀಲ್ಸ್ ಮಾಡುತ್ತಾ ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಯಶವಂತ್, ಒಂದು ದಿನ ಕನ್ಯಾಕುಮಾರಿ (Kanyakumari) ಸೀರಿಯಲ್ ತಂಡದ ಕೈಗೆ ಸಿಕ್ಕಿದ್ರು. ಅಲ್ಲಿಂದ ಯಶವಂತ್ ಹಿಂದಿರುಗಿ ನೋಡೇ ಇಲ್ಲ.