ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ನಿಗೂಢ ಶವವಾಗಿ ಪತ್ತೆ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ಅವರ ಶವ ಮೈಸೂರಿನ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಮೇ 7 ರಿಂದ ನಾಪತ್ತೆಯಾಗಿದ್ದ ಅವರ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಡ್ಯ (ಮೇ 11): ದೇಶದ ಖ್ಯಾತ ಕೃಷಿ ವಿಜ್ಞಾನಿ ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ. ಸುಬ್ಬಣ್ಣ ಅಯ್ಯಪ್ಪನ್ ಅವರ ಶವವನ್ನು ಮೈಸೂರಿನ ಶ್ರೀರಂಗಪಟ್ಟಣದ ಸಾಯಿ ಆಶ್ರಮದ ಹತ್ತಿರದ ಕಾವೇರಿ ನದಿಯಲ್ಲಿ ನಿನ್ನೆ ಸಂಜೆ ಪತ್ತೆ ಹಚ್ಚಲಾಗಿದೆ. ಮೇ 7ರಿಂದ ನಾಪತ್ತೆಯಾಗಿದ್ದ ಅವರು ಈ ರೀತಿ ನಿಗೂಢವಾಗಿ ಮೃತರಾಗಿರುವುದು ಆತಂಕ ಉಂಟುಮಾಡಿದೆ.
ಡಾ. ಅಯ್ಯಪ್ಪನ್ ಅವರು ಮೈಸೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಮೇ 7 ರಂದು ಅವರು ಮನೆಯಿಂದ ನಿರ್ಗಮಿಸಿದ ಬಳಿಕ ಹಿಂತಿರುಗಿಲ್ಲ. ಸಂಬಂಧಿಕರು ಅವರ ನಾಪತ್ತೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಿನ್ನೆ ಸಂಜೆ ಕಾವೇರಿ ನದಿಯಲ್ಲಿ ಅಪರಿಚಿತ ಶವವೊಂದು ತೇಲುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮೇಲೆತ್ತಿದಾಗ ಅದು ಡಾ. ಸುಬ್ಬಣ್ಣ ಅಯ್ಯಪ್ಪನ್ ಅವರದ್ದೆ ಎಂಬುದು ದೃಢಪಟ್ಟಿದೆ. ನದಿ ದಡದಲ್ಲಿ ಅವರ ಸ್ಕೂಟರ್ ಸಹ ಪತ್ತೆಯಾಗಿದೆ.
ಈ ಶವ ಪತ್ತೆಯಾದ ಹಿನ್ನೆಲೆ ಇದೀಗ ನಿಗೂಢತೆಯನ್ನು ಹುಟ್ಟುಹಾಕಿದ್ದು, ಡಾ. ಅಯ್ಯಪ್ಪನ್ ಅವರ ಮರಣದ ಕುರಿತು ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಆತ್ಮಹತ್ಯೆ, ಅಪಘಾತ ಅಥವಾ ಬೇರೆ ಯಾವ ಕಾರಣ ಎಂಬುದನ್ನು ತಿಳಿಯುವ ಉದ್ದೇಶದಿಂದ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಡಾ. ಅಯ್ಯಪ್ಪನ್ ಅವರು ಭಾರತೀಯ ಕೃಷಿ ಕ್ಷೇತ್ರದಲ್ಲಿ ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರ ನಿಧನಕ್ಕೆ ವಿವಿಧ ವಲಯಗಳಿಂದ ಸಂತಾಪ ವ್ಯಕ್ತವಾಗುತ್ತಿದೆ. ದೇಶದ ವೈಜ್ಞಾನಿಕ ಸಮುದಾಯ ಈ ವಿಷಯವನ್ನು ನೋವಿನಿಂದ ಸ್ವೀಕರಿಸಿದೆ.