ಮೇಘಾಲಯದಲ್ಲಿ ಕರ್ನಾಟಕ ಮಾಧ್ಯಮ ತಂಡ: ನೈಸರ್ಗಿಕ ಸೇತುವೆ ನಿರ್ಮಾತೃ ಶ್ರೀ ಹ್ಯಾಲಿ ವಾರ್ ಜೊತೆ ಸಂವಾದ.
ಮೇಘಾಲಯದ ದುರ್ಗಮ ಸೀಜ್ ಗ್ರಾಮದಲ್ಲಿ ಮರದ ಬೇರುಗಳಿಂದ ನೈಸರ್ಗಿಕ ಸೇತುವೆ ನಿರ್ಮಿಸಿ ಪದ್ಮಶ್ರೀ ಪುರಸ್ಕೃತ ಹ್ಯಾಲಿ ವಾರ್ ಅವರ ಸಾಧನೆಯನ್ನು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ತಂಡ ವೀಕ್ಷಿಸಿತು. ಪ್ರಕೃತಿಯ ಒಡನಾಟದಿಂದ 70 ಅಡಿ ಉದ್ದದ ಬೇರಿನ ಸೇತುವೆ ನಿರ್ಮಿಸಿರುವ ಅವರ ಜೀವನಗಾಥೆ ಇಲ್ಲಿದೆ.

ಮರದ ಬೇರುಗಳಲ್ಲೇ ನೈಸರ್ಗಿಕ ಸೇತುವೆ ನಿರ್ಮಿಸಿದ ಮೇಘಾಲಯದ ಸಾಧಕ ಹ್ಯಾಲಿ ವಾರ್!
ಮೇಘಾಲಯದ ಪಶ್ಚಿಮ ಖಾಸಿ ಜಿಲ್ಲೆಯ ದುರ್ಗಮ ಪ್ರದೇಶದಲ್ಲಿರುವ ಸೀಜ್ ಗ್ರಾಮದ ಉಮಕಾರ್ ನೈಸರ್ಗಿಕ ಸೇತುವೆ ನಿರ್ಮಾತೃ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಹ್ಯಾಲಿ ವಾರ್ ಅವರೊಂದಿಗೆ ಕರ್ನಾಟಕದ ಮಾಧ್ಯಮ ತಂಡವು ಸಂವಾದ ನಡೆಸಿತು.
ಭಾರತ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆ ಆಯೋಜಿಸಿರುವ ಮೇಘಾಲಯ ಅಧ್ಯಯನ ಪ್ರವಾಸದ 5ನೇ ದಿನವಾದ ಇಂದು, ಮಾಧ್ಯಮ ಪ್ರತಿನಿಧಿಗಳು ಶ್ರೀ ಹ್ಯಾರಿ ವಾರ್ ಅವರ ಜೀವನ, ಸಾಧನೆಗಳ ಕುರಿತು ಮಾಹಿತಿ ಪಡೆದುಕೊಂಡರು.
50 ವರ್ಷಗಳ ತಪಸ್ಸಿನಿಂದ ಮೂಡಿದ 70 ಅಡಿ ಉದ್ದದ ಜೀವಂತ ಸೇತುವೆ!
ಶ್ರೀ ಹ್ಯಾಲಿ ವಾರ್ ಅವರು ಶಾಲಾ ಶಿಕ್ಷಣ ಪಡೆಯದಿದ್ದರೂ, ಪ್ರಕೃತಿಯೊಂದಿಗೆ ಗಾಢ ಒಡನಾಟ ಹೊಂದಿದ್ದಾರೆ. ಸುಮಾರು ತಮ್ಮ ಹತ್ತನೇ ವಯಸ್ಸಿನಲ್ಲೇ ನೈಸರ್ಗಿಕ ಸೇತುವೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದ ಅವರಿಗೆ ಈಗ ಸುಮಾರು 69ರ ಪ್ರಾಯ. ಈ ವಯಸ್ಸಿನಲ್ಲೂ ತುಂಬು ಉತ್ಸಾಹದಿಂದ ಪರಿಸರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮರದ ಬೇರುಗಳಿಂದಲೇ ಸುಮಾರು 70 ಅಡಿ ಉದ್ದದ ಸೇತುವೆಯನ್ನು ಕಳೆದ 50 ವರ್ಷಗಳಿಂದ ನಿರ್ಮಿಸಿ, ಅದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ.
“ಚಿಕ್ಕವಯಸ್ಸಿನಲ್ಲೇ ನಾನು ತಂದೆ ಮತ್ತು ತಾತನೊಂದಿಗೆ ಮರದ ಬೇರುಗಳನ್ನು ಸೇತುವೆಯನ್ನಾಗಿ ಪರಿವರ್ತಿಸಲು ತೆರಳುತ್ತಿದ್ದೆ. ಕಾಲಾಂತರದಲ್ಲಿ ಈ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಂಡೆ. ಇದುವರೆಗೂ ಮೂರು ನೈಸರ್ಗಿಕವಾಗಿ ಜೀವ ಹೊಂದಿರುವ ಬೇರುಗಳ ಸೇತುವೆ ನಿರ್ಮಿಸಿದೆ” ಎಂದು ಶ್ರೀ ಹ್ಯಾಲಿ ವಾರ್ ತಿಳಿಸಿದರು.
ಶ್ರೀ ವಾರ್ ಅವರ ಪುತ್ರ ಶ್ರೀ ವಿಲ್ಲಿಂಗ್ ಸನ್ ಅವರು ತಮ್ಮ ತಂದೆಯ ಕುರಿತು ಮಾತನಾಡಿ, ತಂದೆಯ ಕಾರ್ಯ ನಮಗೆ ಬಾಲ್ಯದಿಂದಲೂ ಪ್ರೇರಣೆಯಾಗಿದೆ. ನಾನು ಸಹ ಅವರ ರೀತಿಯಲ್ಲೇ ಸೇತುವೆ ಕಟ್ಟುಯ ಕಾಯಕದಲ್ಲಿ
ತೊಡಗಿಸಿಕೊಂಡಿದ್ದೇನೆ. ಮೇಘಾಲಯದ ಈ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತದೆ. ಮಳೆಗಾಲ ಹಾಗೂ ತುರ್ತು ಸಂದರ್ಭಗಳಲ್ಲಿ ನಾವು ನಿರ್ಮಿಸಿದ ಬೇರಿನ ಸೇತುವೆಗಳು ಜನರ ಸಂಚಾರಕ್ಕೆ ಅನುಕೂಲವಾಗಿದೆ. ಇದು ಮುಖ್ಯವಾಗಿ ನಮ್ಮ ಗ್ರಾಮದಿಂದ ಪಕ್ಕದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸಾಧನವಾಗಿದೆ” ಎಂದು ತಿಳಿಸಿದರು.
ಹ್ಯಾಲಿ ವಾರ್,ಅವರ ಕುಟುಂಬಕ್ಕೆ ಗೌರವ
ಇದೇ ಸಂದರ್ಭದಲ್ಲಿ ಬೆಂಗಳೂರಿನ ವಾರ್ತಾ ಶಾಖೆ ಹಾಗೂ ಕರ್ನಾಟಕ ಮಾಧ್ಯಮ ಪ್ರತಿನಿಧಿಗಳಿಂದ ಶ್ರೀ ಹ್ಯಾಲಿ ವಾರ್, ಅವರ ಪತ್ನಿ ಶ್ರೀಮತಿ ಫಿಲಾರಿಸ್ ಖೈಲೆಪ್ ಹಾಗೂ ಪುತ್ರ ಶ್ರೀ ವಿಲ್ಲಿಂಗ್ ಅವರನ್ನು ಸನ್ಮಾನಿಸಲಾಯಿತು.
ಕಡಿದಾದ ಬೆಟ್ಟದ ಸಾಲುಗಳ ನಡುವೆ ಇರುವ ಸೀಜ್ ಗ್ರಾಮದ ಪಕೃತಿ ಸೌದರ್ಯ ಹಾಗು ಬೇರಿನ ಸೇತುವೆಯ ಸಾಹಸಮಯ ಸೌಂದರ್ಯವನ್ನು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳು ಕಣ್ತುಂಬಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

