ದಿಢೀರನೇ ಡಿಕೆಶಿ ಮನೆಗೆ ಬಂದ ನಾಗಾ ಸಾಧುಗಳು; ಭಕ್ತಿಯಿಂದ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್!
ಗೋಕರ್ಣದಲ್ಲಿ ಪೂಜೆ ಸಲ್ಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಇದೀಗ ನಾಗಾ ಸಾಧುಗಳ ಆಶೀರ್ವಾದ ಪಡೆದಿದ್ದಾರೆ. ಅವರ ಸರ್ವಧರ್ಮ ಸಮಭಾವದ ನಿಲುವಿನ ಹಿಂದಿನ ಕಾರಣವೇನು? ಸಂಪೂರ್ಣ ವಿವರ ತಿಳಿಯಲು ಇಲ್ಲಿ ಓದಿ.

ನಾಗಾ ಸಾಧುಗಳ ಆಶೀರ್ವಾದ
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆ ಪವಿತ್ರ ಕ್ಷೇತ್ರ ಗೋಕರ್ಣದಲ್ಲಿ ಶಿವನ ದರ್ಶನ ಪಡೆದಿದ್ದ ಡಿಸಿಎಂ, ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಾಗಾ ಸಾಧುಗಳ ಆಶೀರ್ವಾದ ಪಡೆದಿದ್ದಾರೆ.
ನಿನ್ನೆ ಆತ್ಮಲಿಂಗಕ್ಕೆ ವಿಶೇಷ ಪೂಜೆ
ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಸುಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್, ಆತ್ಮಲಿಂಗಕ್ಕೆ ವಿಶೇಷ ಪೂಜೆ ಹಾಗೂ ಹರಕೆಗಳನ್ನು ಸಲ್ಲಿಸಿದ್ದರು. ನಾಡಿನ ಸುಭಿಕ್ಷೆ ಮತ್ತು ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿ ಬಂದ ಬೆನ್ನಲ್ಲೇ, ಇಂದು ಸದಾಶಿವನಗರದ ಅವರ ನಿವಾಸಕ್ಕೆ ನಾಗಾ ಸಾಧುಗಳು ಆಗಮಿಸಿದ್ದು ವಿಶೇಷವಾಗಿತ್ತು.
ನಾಗಾ ಸಾಧುಗಳ ಬಗ್ಗೆ ಡಿಕೆಶಿ ಹೇಳಿಕೆ
ತಮ್ಮ ಮನೆಗೆ ಆಗಮಿಸಿದ ನಾಗಾ ಸಾಧುಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, 'ನಮ್ಮ ಮನೆಗೆ ಯಾರು ಬೇಕಾದರೂ ಬರಬಹುದು. ಎಲ್ಲಾ ಧರ್ಮದಲ್ಲೂ ಇರುವಂತೆ ನಾಗಾ ಸಾಧುಗಳೂ ಇದ್ದಾರೆ, ಅವರ ಆಶೀರ್ವಾದ ಪಡೆದಿದ್ದೇನೆ. ನಮಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲ' ಎಂದು ಸ್ಪಷ್ಟಪಡಿಸಿದರು.
ನಮ್ಮದು ಧಾರ್ಮಿಕ ಇಲಾಖೆ ಇದ್ದಂತೆ
ಧರ್ಮ ಮತ್ತು ದಾನದ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ ಡಿಕೆಶಿ, 'ಯಾವುದೇ ಲಾಭದ ನಿರೀಕ್ಷೆ ಇಲ್ಲದೆ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ಹೇಗೆ ಹಣ ನೀಡುತ್ತೇವೆಯೋ, ಇಲ್ಲೂ ಕೂಡ ಅದೇ ಭಾವನೆ ಇದೆ. ನಮ್ಮದು ಒಂತರಾ ಧಾರ್ಮಿಕ ಇಲಾಖೆ ಇದ್ದಂತೆ. ಎಲ್ಲರನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ' ಎಂದರು.
ಸರ್ವಧರ್ಮ ಸಮಭಾವ
ಈ ಸರಣಿ ಧಾರ್ಮಿಕ ಕಾರ್ಯಕ್ರಮಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಡಿಕೆ ಶಿವಕುಮಾರ್ ಅವರು ತಮ್ಮ ದೈವಭಕ್ತಿ ಮತ್ತು ಸರ್ವಧರ್ಮ ಸಮಭಾವದ ನಡೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

