ಸಂಚಾರಿ ಆ್ಯಂಟಿಜನ್ ಟೆಸ್ಟ್ಗೆ ಚಾಲನೆ: ಉಸಿರಾಟದ ತೊಂದರೆ, ಶೀತ, ಜ್ವರ ಇರೋರ ಪರೀಕ್ಷೆ
ಬೆಂಗಳೂರು(ಜು. 18): ಬಿಬಿಎಂಪಿ ವ್ಯಾಪ್ತಿಯ ಕಂಟೇನ್ಮೆಂಟ್ ಪ್ರದೇಶ, ಕೊಳಗೇರಿ ಪ್ರದೇಶ ಹಾಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷಾ ಕಾರ್ಯಕ್ಕೆ ಮೇಯರ್ ಎಂ.ಗೌತಮ್ ಕುಮಾರ್ ಶುಕ್ರವಾರ ಚಾಲನೆ ನೀಡಿದ್ದಾರೆ.
ಕೊಳಗೇರಿ, ಪ್ರದೇಶ ಕಂಟೇನ್ಮೆಂಟ್ ಪ್ರದೇಶ, ಪೌರಕರ್ಮಿಕರ ಕಾಲೋನಿಗಳು ಹಾಗೂ ತೀರ ಉಸಿರಾಟ ತೊಂದರೆ ಮತ್ತು ಶೀತ ಜ್ವರದ ಲಕ್ಷಣಗಳು ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ ಮೇಯರ್ ಎಂ.ಗೌತಮ್ ಕುಮಾರ್.
ರ್ಯಾಪಿಡ್ ಆಂಟಿಜೆನ್ ಟೆಸ್ವ್ಗೆ ಹೋಗುವ ಸಿಬ್ಬಂದಿಗೆ ವಲಯವಾರು ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಾಹನದಲ್ಲಿ ಒಬ್ಬ ಲ್ಯಾಬ್ ಟೆಕ್ನಿಷಿಯನ್, ಕಿರಿಯ ಆರೋಗ್ಯ ಸಿಬ್ಬಂದಿ ಹಾಗೂ ಒಬ್ಬರು ಸಹಾಯಕ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿನಿತ್ಯ ಪರೀಕ್ಷೆ ನಡೆಸಿದ ಅಂಕಿ ಅಂಶಗಳನ್ನು ಐಸಿಎಂಆರ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಮೇಯರ್ ಮಾಹಿತಿ ನೀಡಿದರು.
ಉಪ ಮೇಯರ್ ರಾಮಮೋಹನ ರಾಜು, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್ ರಾಜು, ಮಾನ್ಯ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ವಾರ್ಡ್ಗಳಲ್ಲಿ ಮನೆ-ಮನೆ ಸಮೀಕ್ಷೆ ಕೈಗೊಂಡು ಕೋವಿಡ್-19 ಲಕ್ಷಣಗಳಿರುವ ಸಾರ್ವಜನಿಕರಿಗೆ ರಾರಯಪಿಡ್ ಟೆಸ್ವ್ ಮಾಡಲು ಪೂರ್ವ ವಲಯಕ್ಕೆ 40, ಪಶ್ಚಿಮ ವಲಯಕ್ಕೆ 40, ದಕ್ಷಿಣ ವಲಯಕ್ಕೆ 35, ಬೊಮ್ಮನಹಳ್ಳಿ 20, ದಾಸರಹಳ್ಳಿ 12, ಯಲಹಂಕ 15, ಆರ್.ಆರ್. ನಗರ 20, ಮಹದೇವಪುರ ವಲಯಕ್ಕೆ 20 ಹಾಗೂ ಬೆಂಗಳೂರು ನಗರ ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶಗಳಿವೆ 12 ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ವಲಯ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ವಾಹನಗಳು ಕಾರ್ಯ ನಿರ್ವಹಿಸಲಿವೆ.