ರಾಜವೀರ ಮದಕರಿನಾಯಕ ಶೂಟಿಂಗ್ ನವೆಂಬರ್ನಲ್ಲಿ ಆರಂಭ
ರಾಜವೀರ ಮದಕರಿನಾಯಕ ಶೂಟಿಂಗ್ ನವೆಂಬರ್ನಲ್ಲಿ ಆರಂಭ | ದರ್ಶನ್ ಕೈಯಲ್ಲಿ ಸಾಲು ಸಾಲು ಸಿನಿಮಾ
ದರ್ಶನ್ ಮುಂದೆ ಸಾಲು ಸಾಲು ಸಿನಿಮಾಗಳಿವೆ. ಅದರಲ್ಲಿ ಎರಡು ಐತಿಹಾಸಿಕ ಸಿನಿಮಾಗಳು.
ಒಂದು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಾಜವೀರ ಮದಕರಿನಾಯಕ’, ಇನ್ನೊಂದು ತರುಣ್ ಸುಧೀರ್ ನಿರ್ದೇಶನದ ‘ಸಿಂಧೂರ ಲಕ್ಷ್ಮಣ’.
ಇವುಗಳಲ್ಲಿ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ರಾಜವೀರ ಮದಕರಿನಾಯಕ ಮುಂದಕ್ಕೆ ಹೋಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿತ್ತು. ಆದರೆ ಆ ಸುದ್ದಿಯನ್ನು ರಾಜೇಂದ್ರಸಿಂಗ್ ಬಾಬು ಅಲ್ಲಗಳೆದಿದ್ದಾರೆ.
‘ನವೆಂಬರ್ 15 ಅಥವಾ ನವೆಂಬರ್ ತಿಂಗಳ ಕೊನೆಯಿಂದ ಚಿತ್ರೀಕರಣ ಆರಂಭವಾಗುತ್ತಿದೆ. ನಮ್ಮ ಚಿತ್ರಕ್ಕೂ ಮೊದಲೇ ಮತ್ತೊಂದು ಸಿನಿಮಾ ಶೂಟಿಂಗ್ ಮಾಡಿಕೊಳ್ಳಲಿದೆ ಎಂಬುದು ಗಾಳಿ ಸುದ್ದಿ.
ಕೆಲಸಕ್ಕೆ ಬಾರದವರು, ಬೈಟೂ ಕಾಫಿ ಕುಡಿದುಕೊಂಡು ಬೇಕಾಬಿಟ್ಟಿಯಾಗಿ ಮಾತನಾಡುವವರ ಸುದ್ದಿ ಅದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಿಂಗ್ ಬಾಬು.
ಈ ಕುರಿತು ಕೇಳಿದರೆ ಸಿಂಧೂರ ಲಕ್ಷ್ಮಣ ನಿರ್ಮಾಪಕ ಉಮಾಪತಿಯವರು, ‘ದರ್ಶನ್ ಅವರ ಕಡೆಯಿಂದ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಅವರು ಯಾವ ಸಿನಿಮಾ ಹೇಳುತ್ತಾರೋ ಅದೇ ಶೂಟಿಂಗ್ಗೆ ಹೋಗುತ್ತದೆ. ಈಗ ನಾನು ಏನೂ ಹೇಳಲಾರೆ’ ಎಂದಿದ್ದಾರೆ.