Bandhana 2 Muhurtha: ಬಂಧನ 2 ಚಿತ್ರಕ್ಕೆ ಮುಹೂರ್ತ ಹೇಗಿತ್ತು ನೋಡಿ!
ಮೂವತ್ತೇಳು ವರ್ಷಗಳ ಹಿಂದೆ ಯಾವ ಜಾಗದಲ್ಲಿ ಡಾ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಕಾಂಬಿನೇಶನ್ನ ‘ಬಂಧನ’ ಚಿತ್ರಕ್ಕೆ ಮುಹೂರ್ತ ಆಗಿತ್ತೋ ಅದೇ ಜಾಗದಲ್ಲಿ ಮೊನ್ನೆಯಷ್ಟೆ ‘ಬಂಧನ 2’ ಚಿತ್ರಕ್ಕೂ ಮುಹೂರ್ತ ನಡೆಯಿತು.
ಬೆಂಗಳೂರಿನ ಅಶೋಕ ಹೋಟೆಲ್ನ ಅದೇ ಸ್ವಿಮ್ಮಿಂಗ್ ಫೂಲ್ ಬಳಿ ಚಿತ್ರತಂಡ ಮುಹೂರ್ತದ ಸಡಗರದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿತು. ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ, ಅಣಜಿ ನಾಗರಾಜ್ ನಿರ್ಮಾಣ ಹಾಗೂ ಛಾಯಾಗ್ರಹಣ ಇಲ್ಲಿದೆ.
ಇದು ‘ಬಂಧನ’ ಚಿತ್ರದ ಮುಂದುವರಿದ ಭಾಗ. ನಂದಿನಿಯ ಮಗ ದೊಡ್ಡವನಾಗಿದ್ದಾನೆ. ಅವನ ಸುತ್ತ ಕಥೆ ಸಾಗುತ್ತದೆ. ನಂದಿನಿ ಮಗನಾಗಿ ಆದಿತ್ಯ ನಟಿಸುತ್ತಿದ್ದಾರೆ.
ಸುಹಾಸಿನಿ ಹಾಗೂ ಜೈ ಜಗದೀಶ್ ಅವರ ಪಾತ್ರಗಳು ಹಾಗೆ ಮುಂದುವರಿಯಲಿವೆ. ಚಿತ್ರದ ಉದ್ದಕ್ಕೂ ಡಾ ವಿಷ್ಣುವರ್ಧನ್ ಅವರ ನೆನಪುಗಳು ಮರುಕಳಿಸುತ್ತವೆ... ಇವಿಷ್ಟು ಅಂಶಗಳನ್ನು ಚಿತ್ರತಂಡ ಮೊದಲಿಗೆ ಹೇಳಿಕೊಂಡಿತು.
‘ಆಗ 22 ಲಕ್ಷ ವೆಚ್ಚದಲ್ಲಿ ಮೂಡಿ ಬಂದಿದ್ದ ‘ಬಂಧನ’ ಚಿತ್ರದ ಯಶಸ್ಸಿನ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಾಷ್ಟ್ರ ಮಟ್ಟದಲ್ಲಿ ಈ ಚಿತ್ರಕ್ಕೆ ಮನ್ನಣೆ ಸಿಕ್ಕಿತು. ವಿಷ್ಣು ಎಮೋಷನಲಿ ನಮ್ಮ ಜತೆ ಯಾವಾಗಲೂ ಇರುತ್ತಾರೆ.' ಎಂದು ರಾಜೇಂದ್ರ ಸಿಂಗ್ ಮಾತನಾಡಿದ್ದಾರೆ.
' ಚಿತ್ರದಲ್ಲಿ ಲವ್ ಜತೆಗೆ ಆ್ಯಕ್ಷನ್ ಕೂಡ ಇರುತ್ತದೆ. ವಿಷ್ಣು ಅಭಿಮಾನಿಗಳು ತಮ್ಮ ಸಲಹೆ, ಅಭಿಪ್ರಾಯ ನೀಡಬಹುದು. ಸೂಕ್ತವಾದ್ದನ್ನು ಪರಿಗಣಿಸುತ್ತೇವೆ’ ಎಸ್ ವಿ ರಾಜೇಂದ್ರ ಸಿಂಗ್ಬಾಬು ಹೇಳಿದರು.
ನಟಿ ಸುಹಾಸಿನಿ ಮಾತನಾಡಿ, ‘ಒಂದು ಕನಸಿನ ಸಿನಿಮಾ ‘ಬಂಧನ’. ಚಿತ್ರದ ನೆನಪುಗಳು ತುಂಬಾ ಇವೆ. ‘ಬಂಧನ 2’ ಚಿತ್ರದಲ್ಲಿ ಈಗಿನ ಜನರೇಶನ್ ಮಕ್ಕಳು ಏನು ಮಾಡ್ತಾರೆ ಎನ್ನುವ ಅಂಶ ಇದೆ.ತುಂಬಾ ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ’ ಎಂದರು.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ನಿರ್ದೇಶಕಿ ವಿಜಯ್ ಲಕ್ಷ್ಮೀ ಸಿಂಗ್ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
‘ಬಂಧನ ಸಿನಿಮಾ ಶುರುವಾದಾಗ ನನಗೆ 6 ವರ್ಷ. ಇದೇ ಜಾಗದಲ್ಲಿ ನಿಂತು ಮುಹೂರ್ತ ನೋಡಿದ್ದೆ. ಮೈಸೂರಿನಲ್ಲಿ ಚಿತ್ರದ ಶೂಟಿಂಗ್ಗೆ ಹೋಗಿದ್ದೆ. ಅದೇ ಹೆಸರಿನ ಚಿತ್ರದಲ್ಲಿ ನಟಿಸುತ್ತೇನೆ ಎಂದುಕೊಳ್ಳಲ್ಲಿಲ್ಲ. ಒಳ್ಳೆಯ ಸಿನಿಮಾ ಕೊಡುತ್ತೇವೆಂಬ ಭರವಸೆ ಇದೆ’ ಎಂದಿದ್ದು ನಟ ಆದಿತ್ಯ. ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿರುವ ಚಿಂತನ್, ಸಂಗೀತ ನಿರ್ದೇಶಕ ಧರ್ಮವಿಶ್, ಜೈ ಜಗದೀಶ್ ಚಿತ್ರದ ಕುರಿತು ಮಾತನಾಡಿದರು.