ಅಮೂಲ್ಯ ಅಣ್ಣನ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ; ಸದ್ದಿಲ್ಲದೆ ಸಿನಿಮಾ ಒಪ್ಪಿಗೆ!
ಡಾರ್ಲಿಂಗ್ ಕೃಷ್ಣ ಸದ್ದಿಲ್ಲದೆ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ನಾಗಶೇಖರ್ ನಿರ್ದೇಶನದ, ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರವನ್ನು ಒಪ್ಪಿದ್ದು, ಇದರ ಬೆನ್ನಲ್ಲೇ ನಟಿ ಅಮೂಲ್ಯ ಅಣ್ಣ ದೀಪಕ್ ಅರಸ್ ನಿರ್ದೇಶನದ ಚಿತ್ರಕ್ಕೂ ನಾಯಕನಾಗುತ್ತಿದ್ದಾರೆ.
‘ಲವ್ ಮಾಕ್ಟೇಲ್’ ಚಿತ್ರದ ನಂತರ ಕೃಷ್ಣನ ಅದೃಷ್ಟಬದಲಾಗಿದ್ದು, ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಈಗಾಗಲೇ ಅವರ ನಟನೆಯ ಹಳೆಯ ಚಿತ್ರವೊಂದು ಬಿಡುಗಡೆಯ ಹಂತಕ್ಕೆ ಬಂದಿದ್ದೆ. ಜತೆಗೆ ‘ವರ್ಜಿನ್’ ಹೆಸರಿನ ಚಿತ್ರವನ್ನು ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಹೆಸರಿನಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ.
ಅಲ್ಲಿಗೆ ಎರಡು ಚಿತ್ರಗಳು ಟೇಕಾಫ್ ಆಗಿದ್ದರೆ, ಮತ್ತೆರಡು ಚಿತ್ರಗಳಿಗೆ ಸೈನ್ ಮಾಡಿದ್ದಾರೆ ಕೃಷ್ಣ.
ಹಾಗಾದರೆ ದೀಪಕ್ ಅರಸ್ ನಿರ್ದೇಶನದ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬುದು ಇನ್ನಷ್ಟೆಗೊತ್ತಾಗಬೇಕಿದೆ. ನಾಗಶೇಖರ್ ನಿರ್ದೇಶನದ ಸಿನಿಮಾ ಮುಗಿದ ಮೇಲೆಯೇ ಎನ್ನಲಾಗುತ್ತಿದೆ.
ಹಾಗೆ ನೋಡಿದರೆ ದೀಪಕ್ ಅರಸ್ ಅವರು ರಾಕೇಶ್ ಅಡಿಗ ಹಾಗೂ ಅಮೂಲ್ಯ ಕಾಂಂಬಿನೇಷನ್ನಲ್ಲಿ 2011ರಲ್ಲಿ ‘ಮನಸಾಲಜಿ’ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಇದರ ನಂತರ ಮತ್ತೆ ಅವರು ಚಿತ್ರ ಶುರು ಮಾಡಿರಲಿಲ್ಲ. ಈಗ ‘ಲವ್ ಮಾಕ್ಟೇಲ್’ ಚಿತ್ರದ ಯಶಸ್ಸಿನಲ್ಲಿರುವ ಕೃಷ್ಣ ಅವರನ್ನು ನಾಯಕನ್ನಾಗಿಸಿ ಸಿನಿಮಾ ಮಾಡಲು ಹೊರಟಿದ್ದಾರೆ ಎನ್ನುವ ಮಾಹಿತಿ ಇದೆ.
ಇದು ಯಾವ ರೀತಿಯ ಸಿನಿಮಾ ಎಂಬುದು ಇನ್ನಷ್ಟೆಗೊತ್ತಾಗಬೇಕಿದೆ.
ಜತೆಗೆ ಕೃಷ್ಣ ಅವರು ತಮ್ಮದೇ ನಿರ್ದೇಶನ, ನಿರ್ಮಾಣದಲ್ಲಿ ‘ಲವ್ ಮಾಕ್ಟೇಲ್’ ಚಿತ್ರದ ಪಾರ್ಟ್-2 ಶುರು ಮಾಡಬೇಕಿದೆ. ಅದರ ತಯಾರಿಯೂ ಮಾಡಿಕೊಳ್ಳುತ್ತಿದ್ದಾರೆ.