ಸಮುದಾಯ ಒಡೆಯುವ ಕೆಲಸ ನಡೆಯುವುದಿಲ್ಲ: ಶ್ರೀರಾಮುಲು
ಬೆಂಗಳೂರು(ಅ. 25): ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಒಕ್ಕಲಿಗ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಸಮುದಾಯ ಒಡೆಯುವ ಕೆಲಸ ನಡೆಯುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್.ಆರ್.ನಗರದ ಜಾಲಹಳ್ಳಿ ವಾರ್ಡ್ನಲ್ಲಿ ಮುನಿರತ್ನ ಪರ ರೋಡ್ಶೋ ನಡೆಸಿದ ಬಳಿಕ ಮಾತನಾಡಿದ ಅವರು, ಆರ್.ಆರ್.ನಗರದಲ್ಲಿ ಕಾಂಗ್ರೆಸ್ನಿಂದ ಒಕ್ಕಲಿಗ ಕಾರ್ಡ್ ಬಳಕೆ ಮಾಡಲಾಗುತ್ತಿದೆ. ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಆರ್.ಅಶೋಕ ಮತ್ತು ಅಶ್ವತ್ಥ್ನಾರಾಯಣ ಅವರಿದ್ದಾರೆ. ಸಮುದಾಯವನ್ನು ಒಡೆಯುವ ಕಾಂಗ್ರೆಸ್ ಉದ್ದೇಶ ಫಲಿಸುವುದಿಲ್ಲ ಎಂದು ಹೇಳಿದರು.
![article_image2](https://static-ai.asianetnews.com/images/01enexcd8tmyn1k69bhrnk9wv0/ele-ck1u0aiqw6t-jpg_300x274xt.jpg)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ತಾವು ಕಲ್ಲು ಬಂಡೆ. ಸೋಲಿಲ್ಲದ ಸರದಾರರು ಎಂದುಕೊಂಡಿದ್ದಾರೆ. ಈ ಬಾರಿ ಆರ್.ಆರ್.ನಗರದ ಜನ ಇವರಿಬ್ಬರು ಹೆಸರನ್ನು ಕಳಚಿ ಹಾಕುವ ಮೂಲಕ ಮನೆಗೆ ಕಳುಹಿಸಲಿದ್ದಾರೆ. ಡಿ.ಕೆ.ಸುರೇಶ್ ಲೋಕಸಭೆ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ನಲ್ಲಿ ನಾನು ಸಿಎಂ ಅನ್ನುವ ಜಗಳ ಶುರುವಾಗಿದೆ. ಇತ್ತ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಉಪ ಚುನಾವಣೆಯಲ್ಲಿಯೇ ಸೋಲುವ ಅವರು ಹೇಗೆ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೇಗೆ ಅಧಿಕಾರಕ್ಕೆ ತರಲಿದ್ದಾರೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ. ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು ಎನ್ನುವುದು ಅವರ ಪಕ್ಷದವರ ಮನಸ್ಸಿನಲ್ಲೇ ಇದೆ. ಮುನಿರತ್ನ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೋಡ್ ಶೋಗೂ ಮುನ್ನ ಶ್ರೀರಾಮುಲು ಅವರು ಜಾಲಹಳ್ಳಿ ವಾರ್ಡ್ನ ಮುತ್ಯಾಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಸಚಿವ ರಾಮುಲು ಅವರಿಗೆ ಕಂದಾಯ ಸಚಿವ ಆರ್.ಅಶೋಕ ಅವರ ಪುತ್ರ ಶರತ್ ಸಾಥ್ ನೀಡಿದರು. ರೋಡ್ ಶೋನಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.