ಬಿಜೆಪಿ ನಿಮ್ಮನ್ನು ನಿರ್ಲಕ್ಷ್ಯ ಮಾಡಿದೆಯಾ? ಸುಮಲತಾ ಅಂಬರೀಶ್ ಉತ್ತರ ಹೀಗಿತ್ತು
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಕಮಲ್ ಹಾಸನ್ ಅವರ ಕನ್ನಡ ಭಾಷೆ ಕುರಿತ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ.

ಬಿಜೆಪಿ ಪಕ್ಷ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆಯಾ ಎಂಬ ಪ್ರಶ್ನೆಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಉತ್ತರಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನ ಗೊರವನಹಳ್ಳಿಯಲ್ಲಿ ಸುಮಲತಾ ಅಂಬರೀಶ್ ಮಾಧ್ಯಮಗಳ ಜೊತೆ ಮಾತನಾಡಿದರು.
ನನಗೆ ಪಕ್ಷದ ವಿಚಾರದಲ್ಲಿ ಯಾವುದೇ ಬೇಸರ ಇಲ್ಲ. ಪಕ್ಷದಲ್ಲಿ ಏನೇನು ನಡೆಯುತ್ತಿದೆ ಎನ್ನುವದನ್ನ ನಾವು ಆಂತರಿಕವಾಗಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ, ಸಾರ್ವಜನಿಕವಾಗಿ ಆ ಕುರಿತು ಚರ್ಚೆ ಮಾಡಲು ಇಷ್ಟಪಡಲ್ಲ. ಪಕ್ಷದ ಒಳಗೆ ಚರ್ಚೆ ಮಾಡ್ತೀನಿ ಎನ್ನುವ ಮೂಲಕ ಸುಮಲತಾ ಅಂಬರೀಶ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ನಟ ಕಮಲ್ ಹಾಸನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, ಕನ್ನಡದ ಬಗ್ಗೆ ಈ ರೀತಿ ಹೇಳಿಕೆ ಕೊಡುವ ಮುಂಚೆ ಯೋಚನೆ ಮಾಡಬೇಕಿತ್ತು. ಅವರು ಹೇಳಿರೋದು ತಪ್ಪು ಅನ್ನೋದು ನನ್ನ ಅನಿಸಿಕೆ ಎಂದು ಹೇಳಿದರು.
ಕಮಲ್ ಹಾಸನ್ ಹೇಳಿಕೆಯಿಂದ ನಮ್ಮ ಭಾಷೆಗೆ ಧಕ್ಕೆ ಬರಲ್ಲ. ಕಮಲ್ ಹಾಸನ್ ಹೇಳಿಕೆ ಅವರ ಅಭಿಪ್ರಾಯವಾಗಿದೆ. ತಮಿಳಿಂದಲೇ ಕನ್ನಡ ಹುಟ್ಟಿರೋದು ಎಂಬುದು ಅವರ ಅಭಿಪ್ರಾಯ. ನಾವು ಇದನ್ನ ಒಪ್ಪಲ್ಲ, ಇದು ನಮ್ಮ ಅಭಿಪ್ರಾಯ. ನಾವು ಭಾಷಾ ತಜ್ಞರಲ್ಲ, ಗೊತ್ತಿಲ್ಲದ ವಿಚಾರವನ್ನ ಮಾತನಾಡಬಾರದೂ. ಅವರು ಕ್ಷಮೆ ಕೇಳಲಿ ಬಿಡಲಿ ಅವರು ಹೇಳಿರೋದು ತಪ್ಪು ಎಂದು ತಮ್ಮ ಅಭಿಪ್ರಾಯವನ್ನು ಸುಮಲತಾ ವ್ಯಕ್ತಪಡಿಸಿದರು.
ಕಮಲ್ ಹಾಸನ್ ರ ಚಿತ್ರವನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡುವ ವಿಚಾರಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್, ಸಿನಿಮಾ ಒಬ್ಬರಿಂದ ಆಗಿದ್ದಲ್ಲ. ನೂರಾರು ಜನರು ಸೇರಿದರೇ ಸಿನಿಮಾ ಆಗೋದು. ಸಿನಿಮಾದಲ್ಲಿ ಒಬ್ಬರದ್ದೇ ಶ್ರಮ ಇರುವುದಿಲ್ಲ. ಸಿನಿಮಾದಲ್ಲಿ ತಮಿಳು, ಕನ್ನಡ, ತೆಲುಗು ಎಲ್ಲ ಭಾಷೆಯವರು ಇರುತ್ತಾರೆ. ಇದರಿಂದ ಸಿನಿಮಾಗೆ ಅನ್ಯಾಯ ಮಾಡಬೇಕಾ ಎಂದು ಚರ್ಚೆಯಾಗಬೇಕು. ನಾನು ಈ ಬಗ್ಗೆ ಹೆಚ್ಚು ಮಾತನಾಡಿ ಕಾಂಟ್ರವರ್ಸಿ ಮಾಡಲ್ಲ. ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಳ್ಳೆಯದು ಎಂದರು.