ಎಲ್ಐಸಿ ಕ್ಲರ್ಕ್ ಕಲ್ಕಿ: ದೇವರಾಗಲು ಹೊರಟಾಗಲೇ ಅಡ್ಡ ಬಂತು ಐಟಿ!
ದೇಶ- ವಿದೇಶಗಳಲ್ಲಿ ಅಪಾರ ಭಕ್ತರನ್ನು ಹೊಂದಿರುವ ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್ಗೆ ಸೇರಿದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಆಶ್ರಮಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಭಾರೀ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಲ್ಕಿ ಭಗವಾನ್ ಆಶ್ರಮದ ಮೇಲೆ ಐಟಿ ದಾಳಿ ನಡೆದ ಬಳಿಕ ಅವರ ಕುರಿತು ತಿಳಿಯಲು ಜನ ಉತ್ಸುಕರಾಗಿದ್ದು, ಕಲ್ಕಿ ಪೂರ್ವಾಪರ, ಆತ ಬೆಳೆದು ಬಂದ ದಾರಿ ಕುರಿತು ಇಲ್ಲಿದೆ ಮಾಹಿತಿ.
ಕಲ್ಕಿ ಭಗವಾನ್ ನೈಜ ಹೆಸರು ವಿ. ವಿಜಯ್ಕುಮಾರ್ ನಾಯ್ಡು
7 ಮಾರ್ಚ್ 1949ರಂದು ತಮಿಳುನಾಡಿನ ವೆಲ್ಲೋರ್ ಜಿಲ್ಲೆಯ ಗುಡಿಯತಂ ಪಟ್ಟಣದ ನಥಮ್ ಗ್ರಾಮದಲ್ಲಿ ಕಲ್ಕಿ ಜನನ
ಚೆನ್ನೈನ ಡಾನ್ ಬಾಸ್ಕೋ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಕಲ್ಕಿ, ಡಿಜಿ ವೈಷ್ಣವ ಕಾಲೇಜ್ನಿಂದ ಗಣಿತ ವಿಷಯದಲ್ಲಿ ಪದವಿ ಪಡೆದರು.
9 ಜೂನ್ 1977ರಲ್ಲಿ ಪದ್ಮಾವತಿ ಅವರೊಂದಿಗೆ ವಿಜಯ್ಕುಮಾರ್ ಮದುವೆಯಾದರು. ಒನ್ನೆಸ್ ವಿವಿ ವಿದ್ಯಾರ್ಥಿಗಳು ಪದ್ಮಾವತಿ ಅವರನ್ನು ಅಮ್ಮಾ ಎಂತಲೇ ಕರೆಯುತ್ತಾರೆ.
ವೃತ್ತಿಯಿಂದ ಎಲ್ಐಸಿ ಕ್ಲರ್ಕ್ ಆಗಿದ್ದ ವಿಜಯ್ಕುಮಾರ್, ಆಧ್ಯಾತ್ಮಿಕ ಪ್ರಪಂಚದಲ್ಲಿ ಕಾಲಿರಿಸಿ ಕಲ್ಕಿ ಭಗವಾನ್ ಆಗಿ ಮೆರೆದರು.
ಕಲ್ಕಿ ಭಗವಾನ್ 1984ರಲ್ಲಿ ಆಂಧ್ರಪ್ರದೇಶದ ಚಿತ್ತೊರ್ ಜಿಲ್ಲೆಯಲ್ಲಿ ಜೀವಾಶ್ರಮ ಶಾಲೆಯನ್ನು ತೆರೆದರು.
1991ರಿಂದ ಕಲ್ಕಿ ಭಗವಾನ್ ಆಧ್ಯಾತ್ಮಿಕ ಪ್ರವಚನ ನೀಡಲು ಪ್ರಾರಂಭಿಸಿದರು.
1999ರಲ್ಲಿ ಕಲ್ಕಿ ಭಗವಾನ್ ಆಂಧ್ರಪ್ರದೇಶದಲ್ಲಿ ಒನ್ನೆಸ್ ವಿವಿ ಪ್ರಾರಂಭಿಸಿದರು.
ಕಲ್ಕಿ ಭಗವಾನ್ ಅವರನ್ನು ವಿಷ್ಣುವಿನ 10ನೇ ಅವತಾರ ಎಂದು ಅವರ ಭಕ್ತರು ನಂಬುತ್ತಾರೆ.
ಕಳೆದ ಬುಧವಾರ ಕಲ್ಕಿ ಭಗವಾನ್ ಅವರ ವಿವಿಧ ರಾಜ್ಯಗಳ ಆಶ್ರಮದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಐಟಿ ದಾಳಿಯಲ್ಲಿ ಅಪಾರ ಪ್ರಮಾಣದ ಹಣ ದೊರೆತಿದ್ದರೂ ಕಲ್ಕಿ ಭಗವಾನ್ ಅವರನ್ನು ಇದುವರೆಗೂ ಬಂಧಿಸಿಲ್ಲ.