ರಾಮನ ಬಂಟ ರಾಜಾಜಿನಗರದ ಸದ್ದಾಂ ಹುಸೈನ್: ಇಲ್ಲಿದೆ ಒಂದು ಝಲಕ್
ಬೆಂಗಳೂರಿನ ಸದ್ದಾಂ ಹುಸೈನ್ ಗೆ ರಾಮ ಮಂದಿರದ ಸ್ವಚ್ಛತೆಯೇ ಕಾಯಕ| ತನ್ನ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಡೆಸುವ ಸದ್ದಾಂಗೆ ದೇವಸ್ಥಾನದ ಸ್ವಚ್ಛತೆ ಮಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ರಾಮ ನವಮಿಯಂದು ಈ ರಾಮನ ಬಂಟನ ಸೇವೆಯ ಒಂದು ಝಲಕ್ ಇಲ್ಲಿದೆ. ರಾಜಾಜಿನಗರದ ಕಡೆ ಹೋದರೆ ಈತನನ್ನು ನೀವೂ ನೋಡಬಹುದು!
ಭಾರತದಾದ್ಯಂತ ಸಂಭ್ರಮದ ರಾಮನವಮಿ ಆಚರಣೆ ನಡೆಯುತ್ತಿದೆ. ದಶರಥ ಮಹಾರಾಜನ ಮಗನಾಗಿ ಜನಿಸಿದ ರಾಮನ ಹುಟ್ಟು ಹಬ್ಬವೇ ಈ ರಾಮನವಮಿ ಸಂಭ್ರಮ.
ಈ ರಾಮನವಮಿಯಂದು ಬೆಂಗಳೂರಿನ ರಾಜಾಜಿನಗರದ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ರಾಮನ ಬಂಟ ಸದ್ದಾಂ ಹುಸೇಐನ್ ಬಗ್ಗೆ ತಿಳಿದುಕೊಳ್ಳಲೇಬೇಕು.
ಸದ್ದಾಂ ಹುಸೈನ್ ಬೆಂಗಳೂರಿನ ರಾಜಾಜಿನಗರದಲ್ಲಿರುವ ರಾಮ ಮಂದಿರದಲ್ಲಿ ಕಳೆದ ಮೂರು ವರ್ಷಗಳಿಂದ ಸ್ವಚ್ಛತಾ ಕಾರ್ಯ ನಡೆಸುತ್ತಾ ಬಂದಿದ್ದಾನೆ.
'ನನಗೆ ದೇವಸ್ಥಾನವನ್ನು ಸ್ವಚ್ಛಗೊಳಿಸುವುದರಿಂದ ಖುಷಿಯಾಗುತ್ತದೆ. ನನ್ನ ಕೆಲಸವನ್ನು ಎಲ್ಲರೂ ಪ್ರಶಂಸಿಸುತ್ತಾರೆ' ಎನ್ನುವ ಸದ್ದಾಂ ಹುಸೈನ್ ರಾಮ ಮಂದಿರದ ಸ್ವಚ್ಛತೆಯನ್ನು ಚಾಚೂ ತಪ್ಪದೇ ಮಾಡುತ್ತಿದ್ದಾನೆ.
ತನ್ನ ಕಾಯಕವನ್ನು ಇಷ್ಟಪಟ್ಟು ಮಾಡುವ ಸದ್ದಾಂ ಕೆಲಸ ನೋಡಿ ದೇವಸ್ಥಾನಕ್ಕೆ ಭೇಟಿ ನೀಡುವವರೆಲ್ಲರೂ ಶಭಾಷ್ ಎನ್ನುತ್ತಾರೆ.
ಇನ್ನು ಹಬ್ಬ, ಹರಿದಿನಗಳ ವೇಳೆ ದೇವಸ್ಥಾನ, ರಥವನ್ನು ಹೂವು, ತಳಿರು ತೋರಣಗಳಿಂದ ಶೃಂಗಾರ ಮಾಡುವುದೆಂದರೆ ಈತನಿಗೆ ಎಲ್ಲಿಲ್ಲದ ಖುಷಿ.
ಧರ್ಮದ ವಿಚಾರವಾಗಿ ಕಿತ್ತಾಡುವುದು ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ನಮ್ಮ ಸಮಾಜಕ್ಕೆ ಪ್ರೇರಣೆ.
ಮುಸ್ಲಿಂ ಯುವಕನ ಈ ಸೇವೆ ಸದ್ಯ ವೈರಲ್ ಆಗುತ್ತಿದ್ದು, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈತನ ಸೇವೆಗೆ ಪ್ರಶಂಸೆ ವ್ಯಕ್ತವಾಗಿದೆ.
ಟ್ವಿಟರ್ ನಲ್ಲಿ ಕೆಲವರು ಈತನ ಕಾಯಕ ಕಂಡು ಈತ ನಿಜವಾದ ಭಾರತೀಯ ಎಂದು ಕಮೆಂಟ್ ಹಾಕಿದ್ದರೆ, ಇನ್ನು ಕೆಲವರು ಸಮಾಜಕ್ಕೆ ಇಂತಹವರ ಅಗತ್ಯವಿದೆ ಎಂದಿದ್ದಾರೆ.
ಅದೇನಿದ್ದರೂ ಜಾತಿ, ಧರ್ಮ ಎಂದು ಲೆಕ್ಕಿಸದೆ ತನ್ನ ಕಾಯಕಕ್ಕೆ ತಲೆ ಬಾಗಿ ದುಡಿಯುವುದರೊಂದಿಗೆ ಶಾಂತಿ, ಪ್ರೀತಿ ಹಾಗೂ ಸಾಮರಸ್ಯದ ಸಂದೇಶ ನೀಡುವ ಈತನಿಗೊಂದು ಸಲಾಂ.