ಭಟ್ಕಳ ನದಿಯಲ್ಲಿ ಕಪ್ಪೆಚಿಪ್ಪು ದುರಂತ: ಸಾವಿನ ಸಂಖ್ಯೆ 8ಕ್ಕೇರಿಕೆ, ಮೂವರಿಗಾಗಿ ಹುಡುಕಾಟ
ಉತ್ತರ ಕನ್ನಡದ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋದ 11 ಜನರ ಪೈಕಿ 8 ಮಂದಿ ಮೃತಪಟ್ಟಿದ್ದಾರೆ. ಒಂದೇ ಕುಟುಂಬದವರಾದ ಇವರಲ್ಲಿ, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಸಾವಿನ ಸಂಖ್ಯೆ 8ಕ್ಕೇ ಏರಿಕೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಇನ್ನುಳಿದ ಮೂವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಒಟ್ಟು 11 ಜನರು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ತೆರಳಿದ್ದರು. ನದಿ ಪ್ರದೇಶದಲ್ಲಿ ಅಪಾರ ಜನರು ಸೇರಿದ್ದು, ಮೂವರು ಬದುಕಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಕಪ್ಪೆಚಿಪ್ಪು ಸಂಗ್ರಹ
ಕರಾವಳಿ ಭಾಗದಲ್ಲಿ ಕಪ್ಪೆಚಿಪ್ಪನ್ನು ಆಹಾರವಾಗಿ ಬಳಕೆ ಮಾಡಲಾಗುತ್ತದೆ. ಕಪ್ಪೆಚಿಪ್ಪುಗಳು ಈ ಒಂದು ಸೀಸನ್ನಲ್ಲಿಯೇ ಸಿಗುತ್ತವೆ. ನದಿಯಲ್ಲಿ ಮುಳುಗಿ ತಳದಲ್ಲಿರುವ ಕಪ್ಪೆಚಿಪ್ಪುಗಳನ್ನು ಹೊರಗೆ ತೆಗೆದುಕೊಂಡು ಬರಲಾಗುತ್ತದೆ. ಸಾಮಾನ್ಯವಾಗಿ ಸ್ಥಳೀಯ ಮಹಿಳೆಯರೇ ಕಪ್ಪುಚಿಪ್ಪು ಸಂಗ್ರಹ ಮಾಡುತ್ತಿರುತ್ತಾರೆ. ಎದೆಯಾಳದವರೆಗೆ ನದಿಗೆ ಇಳಿದು ಮಹಿಳೆಯರು ಕಪ್ಪುಚಿಪ್ಪೆ ಸಂಗ್ರಹಣೆ ಮಾಡೋದು ಇಲ್ಲಿಯ ಸಾಮಾನ್ಯ ಕೆಲಸವಾಗಿದೆ.
ದುರಂತ ನಡೆದಿದ್ದು ಹೇಗೆ?
ಶನಿವಾರ ನದಿಯ ಪರಿಸರದಲ್ಲಿ ಮಳೆಯಾಗಿತ್ತು. ಇದರಿಂದ ನದಿಯ ಮಟ್ಟ ಏರಿಕೆಯಾಗಿರುವ ಸಾಧ್ಯತೆಗಳಿವೆ. ಇದನ್ನರಿಯದೇ ಇಳಿದ ಜನರು ನೀರುಪಾಲಾಗಿರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದೆಡೆ ಒಬ್ಬರನ್ನು ರಕ್ಷಿಸಲು ಹೋಗಿ ಎಲ್ಲರೂ ನೀರುಪಾಲಾಗಿರುವ ಸಾಧ್ಯತೆಗಳಿವೆ.
ಶಿರಾಲಿ ಮೂಲದ ಒಂದೇ ಕುಟುಂಬದವರು
ಮೃತರೆಲ್ಲರೂ ಭಟ್ಕಳ ತಾಲೂಕಿನ ಶಿರಾಲಿ ಮೂಲದ ಒಂದೇ ಕುಟುಂಬದವರಾಗಿದ್ದಾರೆ. ಮೃತದೇಹಗಳನ್ನು ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಭಟ್ಕಳ ಪೊಲೀಸರು ಭೇಟಿ ನೀಡಿ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಸ್ಥಳೀಯ ಮೀನುಗಾರರು ಪೊಲೀಸರ ರಕ್ಷಣಾ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ನದಿ ದಡದಲ್ಲಿ ಅಂಬುಲೆನ್ಸ್ ನಿಲ್ಲಿಸಲಾಗಿದೆ. ಕರಾವಳಿ ಭಾಗದಲ್ಲಿ ಮೊದಲ ಬಾರಿ ಇಂತಹದೊಂದು ದುರಂತ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

