ಸ್ಮಾರ್ಟ್ಸಿಟಿ ಯೋಜನೆಯಿಂದ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ: ಸಚಿವ ಪ್ರಹ್ಲಾದ ಜೋಶಿ
ಹುಬ್ಬಳ್ಳಿ(ಆ.24): ಮಹಾನಗರದಲ್ಲಿ ಈಗಾಗಲೇ ಸ್ಮಾರ್ಟ್ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ನಗರದ ಅಭಿವೃದ್ಧಿಗೆ ಈ ಯೋಜನೆ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯ ಚಿಟಗುಪ್ಪಿ ಆಸ್ಪತ್ರೆ ನವೀಕೃತ, ನೆಹರು ಕ್ರೀಡಾಂಗಣ ಅಭಿವೃದ್ಧಿ, ರೈಲ್ವೆ ನಿಲ್ದಾಣ ಬಳಿಯ ಸ್ಮಾರ್ಟ್ರಸ್ತೆ, ಗಣೇಶ ಪೇಟೆ ಮೀನು ಮಾರುಕಟ್ಟೆ ನಿರ್ಮಾಣ ಮತ್ತು ಉಣಕಲ್ ಕೆರೆ ಅಭಿವೃದ್ಧಿ ಫೇಸ್-1 ಕಾಮಗಾರಿಗೆ ಚಾಲನೆ ನೀಡಿದ ಪ್ರಹ್ಲಾದ ಜೋಶಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್ಸಿಟಿ ಯೋಜನೆಯಡಿ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹುಬ್ಬಳ್ಳಿ ಧಾರವಾಡದಲ್ಲಿ ಕೈಗೊಂಡಿದ್ದೇವೆ. ಆರು ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಸ್ಮಾರ್ಟ್ಸಿಟಿ ಯೋಜನೆ ಮುಂದಿನ ದಿನಗಳಲ್ಲಿ ಮಹಾನಗರದ ರೂಪುರೇಷೆ ಬದಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ಸಚಿವರು
26.18 ಕೋಟಿ ವೆಚ್ಚದಲ್ಲಿ ಚಿಟಗುಪ್ಪಿ ಆಸ್ಪತ್ರೆ ನವೀಕೃತಗೊಳಿಸಲಾಗುತ್ತಿದೆ. ಕಾಮಗಾರಿಯಲ್ಲಿ ಒಂದನೇ ಮಹಡಿ ಕಟ್ಟಡ ಹಾಗೂ ಆಡಳಿತ ವಿಭಾಗದ ನಾಲ್ಕು ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಲಾಗುವುದು. 20.26 ಕೋಟಿ ವೆಚ್ಚದಲ್ಲಿ ನಗರದ ನೆಹರು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಈ ಕಾಮಗಾರಿಯಲ್ಲಿ ಜಿ+2 ಕಟ್ಟಡ ಟೇಬಲ್ ಟೆನ್ನಿಸ್ ಕೋರ್ಟ್, ಕಾನ್ಫೆರೆಸ್ಸ್ ಸಭಾಂಗಣದಲ್ಲಿ ಮತ್ತು ಸಾಂಸ್ಕೃತಿಕ ಭವನ, ಜಿಮ್ನಾಸ್ಟಿಕ್, ಕ್ರೀಡಾಂಗಣ ಕಟ್ಟಡ ಕಾಮಗಾರಿಗಳನ್ನು ಆಯೋಜಿಸಲಾಗಿದೆ ಎಂದರು.
5.08 ಕಿಮೀ ಮುಖ್ಯ ರಸ್ತೆಯನ್ನು ಒಟ್ಟು 50.75 ಕೋಟಿ ವೆಚ್ಚದಲ್ಲಿ ರೈಲೈ ಸ್ಟೇಷನ್ ರಸ್ತೆಯ ಸ್ಮಾರ್ಟ್ ರಸ್ತೆ ಪ್ಯಾಕೇಜ್- 2ರ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಇವುಗಳಲ್ಲಿ ಕ್ರೀಡಾಂಗಣದ ಸುತ್ತಲಿನ ಜೆಸಿ ನಗರ ರಸ್ತೆ, ಕೊಪ್ಪಿಕರ, ಕೋಯಿನ್ ರಸ್ತೆ, ವಿಕ್ಟೋರಿಯಾ, ಬ್ರಾಡ್ವೇ, ಮರಾಠಗಲ್ಲಿ ಸೇರಿದಂತೆ ಸಿಬಿಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಒಳಗೊಂಡಿದೆ ಎಂದರು.
ಗಣೇಶ ಪೇಟೆಯ ಮೀನು ಮಾರುಕಟ್ಟೆಯ ಬೇಸ್ಮೆಂಟ್, ಗ್ರೌಂಡ್ ಫೆಲರ್ ಹಾಗೂ ಮೆಜ್ ನೈನ್ ಫೆಲರ್ ಮಹಡಿಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಕಾಮಗಾರಿಗಾಗಿ 5.38 ಕೋಟಿ ಅಭಿವೃದ್ಧಿ ಕಾಮಗಾರಿಯನ್ನು ಹೊಂದಲಾಗಿದೆ. ಇನ್ನು 4.60 ಕೋಟಿ ವೆಚ್ಚದಲ್ಲಿ ಮೇದಾರ ಓಣಿಯ ಪಾರ್ಕಿಂಗ್ ಹಾಗೂ ಡಿಸ್ಪೆನ್ಸರಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉಣಕಲ್ ಕೆರೆ ಅಭಿವೃದ್ಧಿ ಯೋಜನೆ ಭಾಗ-1ರ ಕಾಮಗಾರಿಯನ್ನು 14.83 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಈ ಯೋಜನೆಯಲ್ಲಿ ಬಯೋರೆಮಿಡಿಯೇಶನ್, ಕೆರೆಯಲ್ಲಿ ಹೂಳು ತೆಗೆಯುವುದು, ನೀರಿನ ಗುಣಮಟ್ಟ, ಸಬ್ಮರ್ಜಡ್ ಎರಿಯೇಟರ್ಸ್ ಹಾಗೂ ಫೆರೕಟಿಂಗ್ ರಾರಯಪ್ಚರ್ಸ್ನ್ನು ಅಳವಡಿಸುವ ಯೋಜನೆ ಸೇರಿ ಒಟ್ಟು 119 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಭೂಮಿಪೂಜೆ ನೇರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ವೇಳೆ ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಸ್ಮಾರ್ಟ್ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.