2014ರ ಬಳಿಕ ದೇಶದಲ್ಲಿ ರಾಜಕಾರಣ ಬದಲಾವಣೆ: ಪ್ರಹ್ಲಾದ ಜೋಶಿ
ಧಾರವಾಡ(ಡಿ.19): ಇಂದಿರಾ ಗಾಂಧಿ ಹತ್ಯೆ ಆನಂತರ ದೇಶದಲ್ಲಿ ಏಕಧ್ರುವಿ ರಾಜಕಾರಣವಿತ್ತು. 2014ರ ಆನಂತರ ಸಂಪೂರ್ಣ ಸ್ಥಿತಿಗತಿ ಬದಲಾಗಿದೆ. ಬಿಜೆಪಿ ವಿರುದ್ಧ ಎಲ್ಲರೂ ಒಗ್ಗೂಡಿದರೂ ವಿಪಕ್ಷಗಳಿಗೆ ಗೆಲ್ಲಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದ ತೇಜಸ್ವಿನ ನಗರದಲ್ಲಿ ಧಾರವಾಡ-71ರ ವಿವಿಧ ಮಂಡಳದ ಹಾಗೂ ಪ್ರಕೋಷ್ಠದ ಮುಖಂಡರಿಗೆ ಶುಕ್ರವಾರ ನಡೆದ ಪಂಡಿತ ದೀನದಯಾಳ ಪ್ರಶಿಕ್ಷಣ ವರ್ಗ ಉದ್ಘಾಟಿಸಿದ ಅವರು, 2014ರ ಆನಂತರ ಬದಲಾದ ರಾಜಕಾರಣ- ಭಾಜಪ ಮತ್ತು ನಮ್ಮ ಜವಾಬ್ದಾರಿ ಕುರಿತು ಮಾತನಾಡಿದರು. ದೇಶದಲ್ಲಿ ನಡೆದ 58 ಚುನಾವಣೆಗಳಲ್ಲಿ 42ರಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ಇದೀಗ ಬಿಜೆಪಿ ಸೋಲಿಸಲು ಎಲ್ಲರೂ ಒಂದಾಗುವ ಸ್ಥಿತಿ ಉಂಟಾಗಿದ್ದು, ಈ ಪೈಕಿ ಬಿಹಾರ ಚುನಾವಣೆ ಐತಿಹಾಸಿಕ ಗೆಲವು. ಕಾಂಗ್ರೆಸ್ ಎದುರಿಸಲು ಎಲ್ಲರೂ ಒಗ್ಗೂಡುತ್ತಿದ್ದರು. ಆದರೆ, 2014ರಿಂದ 2019ರ ವರೆಗೆ ಸಂಪೂರ್ಣ ಬಿಜೆಪಿ ಆಡಳಿತ. ಮೇಲ್ವರ್ಗದ, ನಗರವಾಸಿಗಳ ಪಕ್ಷ ಎಂಬ ಆರೋಪ ನಮಗಿತ್ತು. ಇದೀಗ ಸರ್ವವ್ಯಾಪ್ತಿಯಲ್ಲಿ ಬಿಜೆಪಿ ಅಕ್ಷರಶಃ ಮನೆ ಮಾಡಿರುವುದು ಅಭಿಮಾನ ಮೂಡಿಸಿದೆ ಎಂದರು.
ಸ್ವಾಮಿನಾಥನ್ ವರದಿ ಜಾರಿಗೆ ಮಾಡಿದ್ದು ಮೋದಿ ಸರ್ಕಾರ. ಇದನ್ನು ಸ್ವತಃ ಸ್ವಾಮಿನಾಥನ್ ಹೇಳಿದ್ದು, ಯಾವ ಕಾರಣಕ್ಕೆ ರೈತ ಕಾಯ್ದೆ ವಿರೋಧಿಸಲಾಗುತ್ತಿದೆಯೋ ತಿಳಿಯುತ್ತಿಲ್ಲ. ರೈತರು ಸಹ ತೃಪ್ತಿದಾಯಕ ಜೀವನ ನಡೆಸುವುದು ಬೇಡವೇ? ದೇಶದ ಭದ್ರತೆಯಿಂದ ಹಿಡಿದು ಆಹಾರ ಭದ್ರತೆ ವರೆಗೆ ರೈತನಿಂದ ಹಿಡಿದು ಕೂಲಿ ಕಾರ್ಮಿಕರ ವರೆಗೆ ಬದಲಾವಣೆ ಬೇಕಲ್ಲವೇ ಎಂದು ಜೋಶಿ ಪ್ರಶ್ನಿಸಿದರು.
ಶಾಸಕ ಅಮೃತ ದೇಸಾಯಿ ಮಾತನಾಡಿ, ಬಿಜೆಪಿ ಶಿಸ್ತಿನ ಸಿಪಾಯಿಗಳನ್ನು ನಿರ್ಮಿಸುವ ಪಕ್ಷ. ತತ್ವ-ಸಿದ್ಧಾಂತ, ನೈತಿಕತೆ, ಜವಾಬ್ದಾರಿ ಬೆಳೆಸುವ ಪಕ್ಷ. ಈ ಕಾರಣಕ್ಕೆ ಬಿಜೆಪಿ ಬುನಾದಿ ಗಟ್ಟಿಯಾಗಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉತ್ತಮ ಅವಕಾಶಗಳಿವೆ. ಎರಡು ದಿನದ ಪ್ರಶಿಕ್ಷಣ ವರ್ಗ ಸದ್ಭಳಕೆ ಮಾಡಿಕೊಳ್ಳಲು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ, ಬಿಜೆಪಿ ಕಾರ್ಯಕರ್ತರು ಫಲಾಪೇಕ್ಷೆ ಇಲ್ಲದೆ ದುಡಿಯುವ ಜನರು. ನಮ್ಮ ಪಕ್ಷದ ಕಾರ್ಯಕರ್ತರು ಧ್ಯೇಯ, ತತ್ವ-ಸಿದ್ಧಾಂತ, ಆದರ್ಶ ಒಪ್ಪಿ-ಅಪ್ಪಿ ಕೆಲಸ ಮಾಡುತ್ತಾರೆ ಎಂದರು. ಪ್ರಶಿಕ್ಷಣದಲ್ಲಿ ಪಡೆದ ಜ್ಞಾನದ ಬಗ್ಗೆ, ಕೇಂದ್ರ-ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವಂತೆ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಈರೇಶ ಅಂಚಟಗೇರಿ, ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಸುನೀಲ ಮೋರೆ ಇದ್ದರು.