ಬಂಟ್ವಾಳದ ಮಿನಿ ವಿಧಾನಸೌಧ ಕಟ್ಟಡಕ್ಕೆ ನಾಗದೋಷವಂತೆ, ಜನಪ್ರತಿನಿಧಿಗಳಿಂದ ನಡೀತು ಹೋಮ ಹವನ..!
ಮಂಗಳೂರು(ಅ.19): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಟ್ಟಣದ ಆಡಳಿತ ಸೌಧಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಅಗಮಿಸುತ್ತಾರೆ. ಆದರೆ ಮೂರು ವರ್ಷಗಳ ಹಿಂದೆ ಆರಂಭವಾದ ಈ ಕಟ್ಟಡದಲ್ಲಿ ಒಂದಲ್ಲ ಒಂದು ಸಮಸ್ಯೆ ತಪ್ಪಿದ್ದಿಲ್ಲ. ಅಲ್ಲದೇ ಒಂದೇ ತಿಂಗಳಲ್ಲಿ ಇಬ್ಬರು ಅಧಿಕಾರಿಗಳು ಕೂಡ ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ. ಹೀಗಾಗಿ ಸಾರ್ವಜನಿಕರ ಜೊತೆ ಸೇರಿಕೊಂಡು ಜಿ. ಪಂ. ಸದಸ್ಯ ತುಂಗಪ್ಪ ಬಂಗೇರಾ ತಾಂಬೂಲ ಪ್ರಶ್ನೆಯ ಪರಿಹಾರದಂತೆ ಇಂದು ತಾಲೂಕು ಕಚೇರಿ ಎದುರಿನ ರಕ್ತೇಶ್ವರೀ ಸನ್ನಿಧಿಯಲ್ಲಿ ಉಡುಪಿಯ ಮನೋಹರ್ ತಂತ್ರಿಗಳ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನೆರವೇರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಟ್ಟಣದ ಬಿ.ಸಿ.ರೋಡ್ ಬಳಿ ಇರುವ ಮಿನಿ ವಿಧಾನಸೌಧ ಕಟ್ಟಡ
ನಿತ್ಯವೂ ಜನಜಂಗುಳಿಯಿಂದ ಕೂಡಿರುವ ಈ ಮಿನಿ ವಿಧಾನಸೌಧ ನಿರ್ಮಾಣವಾಗಿ ಮೂರು ವರ್ಷಗಳಾಗಿವೆ. ಆದರೆ ಈ ಮೂರು ವರ್ಷಗಳಲ್ಲಿ ಇಲ್ಲಿ ಒಂದಲ್ಲ ಒಂದು ಸಮಸ್ಯೆ ತಪ್ಪಿಲ್ಲವಂತೆ. ಇಲ್ಲಿನ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ಸಮಸ್ಯೆ ಆಗ್ತಾನೆ ಇರುತ್ತೆ ಅನ್ನೋದು ಸ್ಥಳೀಯ ಜನಪ್ರತಿನಿಧಿಗಳ ಮಾತು.
ಅಲ್ಲದೇ ಕಳೆದ ಸಪ್ಟೆಂಬರ್ ತಿಂಗಳಲ್ಲಿ ಇದೇ ತಾಲೂಕು ಕಚೇರಿಯ ಇಬ್ಬರು ಉಪತಹಶೀಲ್ದಾರ್ಗಳು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಯಾವ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ ಹೃದಯಾಘಾತ ಮತ್ತು ಅಲ್ಪಕಾಲದ ಅನಾರೋಗ್ಯದಿಂದ ಶ್ರೀಧರ್ ಮತ್ತು ರಾಧಾಕೃಷ್ಣ ಎಂಬ ಉಪತಹಶೀಲ್ದಾರ್ಗಳು ಮೃತಪಟ್ಟಿದ್ದಾರೆ.
ಹೀಗಾಗಿ ಸ್ಥಳೀಯ ಜಿ.ಪಂ ಸದಸ್ಯ ತುಂಗಪ್ಪ ಬಂಗೇರಾ ಎಂಬವರು ವೆಂಕಟರಮಣ ಮುಚ್ಚಿನ್ನಾಯ ಎಂಬವರ ಮೂಲಕ ತಾಂಬೂಲ ಪ್ರಶ್ನಾಚಿಂತನೆ ಇಟ್ಟಿದ್ದು, ಇದರಲ್ಲಿ ಹಲವು ಅಚ್ಚರಿಯ ವಿಚಾರಗಳು ಹೊರಬಿದ್ದಿದೆ.
ಇಡೀ ಕಟ್ಟಡಕ್ಕೆ ನಾಗದೋಷವಿದ್ದು, ಪರಿಹಾರ ಕಾಣದೇ ಇದ್ದರೆ ಇನ್ನಿಬ್ಬರು ಅನಾರೋಗ್ಯಕ್ಕೆ ತುತ್ತಾಗುವ ಎಚ್ಚರಿಕೆ ಸಿಕ್ಕಿದೆ. ಅದರಂತೆ ಕಚೇರಿಯ ಇನ್ನಿಬ್ಬರಿಗೂ ಅನಾರೋಗ್ಯ ಕಾಡಿದೆ. ಹೀಗಾಗಿ ಸಾರ್ವಜನಿಕರ ಜೊತೆ ಸೇರಿಕೊಂಡು ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರಾ, ತಾಂಬೂಲ ಪ್ರಶ್ನೆಯ ಪರಿಹಾರದಂತೆ ಇಂದು ತಾಲೂಕು ಕಚೇರಿ ಎದುರಿನ ರಕ್ತೇಶ್ವರೀ ಸನ್ನಿಧಿಯಲ್ಲಿ ಉಡುಪಿಯ ಮನೋಹರ್ ತಂತ್ರಿಗಳ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನೆರವೇರಿಸಿದ್ದಾರೆ.
ಇಡೀ ತಾಲೂಕು ಕಚೇರಿ, ತಹಶೀಲ್ದಾರ್ ಕೊಠಡಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕಚೇರಿಗೂ ತೀರ್ಥ ಪ್ರೋಕ್ಷಣೆ ಮಾಡಲಾಗಿದೆ. ಹಲವು ದೋಷಗಳು ಕಂಡು ಬಂದಿರುವ ಕಾರಣದಿಂದ ಈ ಹೋಮ ಅನಿವಾರ್ಯ ಅಂತ ಸಾರ್ವಜನಿಕವಾಗಿಯೇ ಎಲ್ಲವೂ ಸರಿಯಾಗಲಿ ಅಂತ ಹೋಮ ಮಾಡಿಸಿದ್ದೇವೆ ಎಂದು ಜಿ.ಪಂ ಸದಸ್ಯ ತುಂಗಪ್ಪ ಬಂಗೇರಾ ಅವರು ತಿಳಿಸಿದ್ದಾರೆ.
ರಮಾನಾಥ್ ರೈ ಶಾಸಕರಾಗಿದ್ದ ಅವಧಿಯಲ್ಲಿ ಈ ಮಿನಿವಿಧಾನ ಸೌಧ ನಿರ್ಮಾಣವಾಗಿತ್ತು. ಸದ್ಯ ಇಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ಶಾಸಕರಾಗಿದ್ದಾರೆ. ತಾಂಬೂಲ ಪ್ರಶ್ನೆಯ ಪ್ರಕಾರ ಕೇವಲ ನಾಗದೋಷ ಮಾತ್ರವಲ್ಲದೇ ವಾಸ್ತು ದೋಷ, ಸ್ಮಶಾನ ದೋಷ ಮತ್ತು ಶತ್ರು ಭಾದೆಯೂ ಕಂಡು ಬಂದಿದೆ.
ಆಗಿನ ಆಡಳಿತ ಸಂಪ್ರದಾಯದ ಪ್ರಕಾರ, ವಾಸ್ತು ಪ್ರಕಾರ ಕಟ್ಟಡ ಕಟ್ಟಿಸದೇ, ಅದರ ಪ್ರವೇಶವನ್ನೂ ಸರಿಯಾದ ರೀತಿಯಲ್ಲಿ ಮಾಡಿಲ್ಲ ಅನ್ನೋದು ಈಗಿನ ಜನಪ್ರತಿನಿಧಿಗಳ ಆರೋಪ. ಹೀಗಾಗಿಯೇ ಇಲ್ಲಿ ಈ ರೀತಿ ಸಮಸ್ಯೆಗಳು ಆಗುತ್ತಿದ್ದು, ಆಡಳಿತ ಮತ್ತು ಜನರ ಹಿತದೃಷ್ಟಿಯಿಂದ ಈ ಹೋಮ ಮಾಡಿಸಲಾಗಿದೆ. ಆದರೆ ಈ ಹೋಮದಲ್ಲಿ ತಾಲೂಕು ಕಚೇರಿಯ ಆಡಳಿತ ವರ್ಗ ಭಾಗಿಯಾಗಿಲ್ಲ. ಕೇವಲ ಜನಪ್ರತಿನಿಧಿಗಳು ಮತ್ತು ಜನರಷ್ಟೇ ಸೇರಿಕೊಂಡು ಎದುರಿನ ದೇವಸ್ಥಾನದಲ್ಲಿ ಪ್ರಾಯಶ್ಚಿತ ಹೋಮ ಮಾಡಿದ್ದಾರೆ. ಇನ್ನಾದರೂ ನಾಗದೋಷ ನಿವಾರಣೆಯಾಗಲಿ ಅಂತ ಸ್ಥಳೀಯ ನಾಗಸಾನಿಧ್ಯಕ್ಕೂ ತಂಬಿಲ ಸೇವೆ ನೀಡಲು ಪ್ರಶ್ನಾ ಚಿಂತನೆ ವೇಳೆ ಸಲಹೆ ಬಂದಿದೆ. ಹೀಗಾಗಿ ಎಲ್ಲವನ್ನೂ ಮಾಡಿಸಿ ಇನ್ನಾದರೂ ಸಮಸ್ಯೆ ತಪ್ಪಿಸಬೇಕು ಎಂದು ಸ್ಥಳೀಯ ಜನಪ್ರತಿನಿಧಿ ಶಂಕರ್ ಅವರು ತಿಳಿಸಿದ್ದಾರೆ.
ನಾಗ ಸಾನಿಧ್ಯವಿರುವ ಕರಾವಳಿಯಲ್ಲಿ ನಾಗದೋಷಗಳು ಸಾಮಾನ್ಯ. ಅಂತಹ ವೇಳೆ ಪರಿಹಾರ ಕಂಡುಕೊಳ್ಳೋದು ಅನಿವಾರ್ಯ. ಸರ್ಕಾರಿ ಕಚೇರಿಗೆ ನಾಗದೋಷ ಅನ್ನೋ ಮಾತುಗಳು ಇದ್ದರೂ ಇದು ಮೂಢನಂಬಿಕೆಯ ನೆಲೆಯಲ್ಲೂ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.