ಬೆಂಗಳೂರಲ್ಲಿ ‘ಮಾದರಿ ಪಾರಂಪರಿಕ ಗ್ರಾಮ’ ಸೃಷ್ಟಿ: ಹಳ್ಳಿ ಜೀವನ ಕ್ರಮದ ಸೊಗಡಿನ ಅನಾವರಣ
ಬೆಂಗಳೂರು(ನ.14): ಜಕ್ಕೂರಿನ ಶ್ರೀರಾಮಪುರ ಅಡ್ಡರಸ್ತೆಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಉದ್ಘಾಟಿಸಿದ್ದಾರೆ.
ರಾಜ್ಯದ ಎಲ್ಲ ಗ್ರಾಮಗಳ ಜೀವನ ಕ್ರಮವನ್ನು ಬಿಂಬಿಸುವ ಪಾರಂಪರಿಕ ಗ್ರಾಮ ಅದ್ಭುತವಾಗಿ ಮೂಡಿ ಬಂದಿದೆ. ಹಿಂದಿನ ಕಾಲದ ಗ್ರಾಮ ಜೀವನವನ್ನು ಹಳ್ಳಿಯ ಮತ್ತು ನಗರದ ಮಕ್ಕಳು ನೋಡಿ ತಿಳಿದುಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದ ಸಿಎಂ
ಗ್ರಾಮ ಬದುಕಿನ ಚಿತ್ರಣವನ್ನು ಇಲ್ಲಿ ಎಳೆಎಳೆಯಾಗಿ ಬಿಡಿಸಲಾಗಿದೆ. ಸಂಸಾರ ಸಹಿತ ಬುತ್ತಿಕಟ್ಟಿಕೊಂಡು ಬಂದು ಅರ್ಧ ದಿನ, ಇಲ್ಲಿದ್ದು ಗ್ರಾಮಗಳ ಪರಂಪರೆ ಕಣ್ತುಂಬಿಕೊಳ್ಳಬೇಕು. ಇಂತಹ ಕಲಾಕೃತಿಯನ್ನು ರಚಿಸಿದ ಕಲಾವಿದರನ್ನು ಹೊಗಳಲು ಪದಗಳು ಸಿಗುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
ಪ್ರತಿ ಹಳ್ಳಿಯೂ ಸ್ವಾವಲಂಬಿ ಆಗಬೇಕು ಎಂಬ ಮಹಾತ್ಮ ಗಾಂಧಿ ಅವರ ಕನಸನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ. ಕೋವಿಡ್ - 19 ರ ನಿಯಂತ್ರಣದಲ್ಲಿ ಗ್ರಾಮ ಪಂಚಾಯತ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದ ಯಡಿಯೂರಪ್ಪ
ಕರ್ನಾಟಕ ರಾಜ್ಯದ ಗ್ರಾಮಗಳು ಹೇಗಿದ್ದವು ಎಂಬುದು ಇಲ್ಲಿಗೆ ಬಂದರೆ ಗೊತ್ತಾಗುತ್ತದೆ. ನಮ್ಮ ಯುವ ಜನತೆ ಈ ಪಾರಂಪರಿಕೆ ಗ್ರಾಮಕ್ಕೆ ಬರಬೇಕು. ಇಡೀ ರಾಜ್ಯದ ಶಾಲಾ - ಕಾಲೇಜು ಮಕ್ಕಳನ್ನು ಇಲ್ಲಿಗೆ ಪ್ರವಾಸಕ್ಕೆ ಕರೆದುಕೊಂಡು ಬರಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೃಷ್ಣ ಭೈರೇಗೌಡ, ನಗರಗಳಲ್ಲಿನ ಬಹುತೇಕರು ಹಳ್ಳಿಯಿಂದಲೇ ಬಂದಿದ್ದರೂ ಕೂಡ ಈಗ ಮೂಲದಿಂದ ದೂರವಾಗುತ್ತಿದ್ದಾರೆ. ಅವರಿಗೆ ಇಪ್ಪತ್ತು-ಮೂವತ್ತು ವರ್ಷಗಳ ಹಿಂದಿನ ಗ್ರಾಮೀಣ ಬದುಕನ್ನು ಈ ಪಾರಂಪರಿಕ ಗ್ರಾಮ ನೆನಪಿಸಲಿದೆ. ಎಚ್. ಕೆ. ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಈ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು ಎಂದು ಹೇಳಿದರು.
ಶುಕ್ರವಾರ ಪಾರಂಪರಿಕ ಗ್ರಾಮದ ಉದ್ಘಾಟನೆ ನಡೆದಿದ್ದರೂ ಸಾರ್ವಜನಿಕರಿಗೆ ಪ್ರವೇಶ ಸಿಗಲು ಇನ್ನಷ್ಟುಸಮಯ ಕಾಯುವುದು ಅನಿವಾರ್ಯ. ಪಾರ್ಕಿಂಗ್ ವ್ಯವಸ್ಥೆ, ಟಿಕೆಟ್ ದರ ನಿಗದಿ ಮತ್ತು ಕೋವಿಡ್ -19ರ ಸ್ಥಿತಿಗತಿಯನ್ನು ನೋಡಿಕೊಂಡು ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುವುದು. ಡಿಸೆಂಬರ್ ಮುಕ್ತಾಯದೊಳಗೆ ಈ ಬಗ್ಗೆ ನಿರ್ಧಾರಕ್ಕೆ ಬಂದು ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 12 ಕೋಟಿ ರು. ವೆಚ್ಚದಲ್ಲಿ ಮೂರು ವರ್ಷದಲ್ಲಿ ನಿರ್ಮಾಣವಾಗಿರುವ ಈ ಪಾರಂಪರಿಕ ಗ್ರಾಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ, ಬಹುತೇಕ ಗ್ರಾಮ ಸಮುದಾಯದ ಜೀವನ ಕ್ರಮದ ಚಿತ್ರಣವಿದೆ. ಡಾ. ಟಿ.ಬಿ. ಸೊಲಬಕ್ಕನವರ ಮತ್ತವರ ತಂಡ ನಿರ್ಮಿಸಿರುವ ಈ ಮಾದರಿ ಗ್ರಾಮದಲ್ಲಿ ರಾಜ್ಯದ ಎಲ್ಲ ಜಾನಪದ ಶಿಲ್ಪಾಕಲಾಕೃತಿ, ಕಂಬಳ, ಕುಸ್ತಿ, ಲಗೋರಿ, ರೈತರ ಸಂತೆ, ದನಗಳ ಸಂತೆ, ವಿವಿಧ ಗ್ರಾಮೀಣ ಕಸುಬುಗಳು, ವೇಷಭೂಷಣ, ಸಮುದಾಯಗಳ ಶಿಲ್ಪಾಕಲಾಕೃತಿಗಳಿವೆ. ಕಲಾಕೃತಿಯನ್ನು ನಿರ್ಮಿಸಲು ಸಿಮೆಂಟ್, ಉಕ್ಕು ಮತ್ತು ಇಟ್ಟಿಗೆಗಳನ್ನು ಬಳಸಲಾಗಿದೆ.