ಬೆಂಗಳೂರು: ಕೋರಮಂಗಲ ಕಣಿವೆ ಜಲಮಾರ್ಗಕ್ಕೆ ಶಂಕು
ಬೆಂಗಳೂರು(ಮಾ.26): ‘ಕೆ-100 ರಾಜಕಾಲುವೆ’ ಯೋಜನೆಯಡಿ ರಾಜಕಾಲುವೆಗಳು ಹರಿಯುವ ಪ್ರದೇಶಗಳ ಅಭಿವೃದ್ಧಿಗೆ ರೂಪರೇಷೆ ರೂಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಗೆ ಹರಿಯುವ ಕೋರಮಂಗಲ ಕಣಿವೆಯನ್ನು ಜಲಮಾರ್ಗ ಯೋಜನೆಗಾಗಿ ಅಭಿವೃದ್ಧಿಗೊಳಿಸುವ ಮತ್ತು ಸುಂದರೀಕರಣಗೊಳಿಸುವ ಯೋಜನೆಗೆ ಚಾಲನೆ ನೀಡಿದೆ.
175 ಕೋಟಿ ವೆಚ್ಚದಲ್ಲಿ ಕೈಗೆತ್ತಿಗೊಂಡಿರುವ ಈ ಯೋಜನೆಯನ್ನು ಮುಂದಿನ 10 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ ಸಿಎಂ ಯಡಿಯೂರಪ್ಪ
ಗುರುವಾರ ನಗರದ ಶಾಂತಿನಗರ ಬಸ್ ನಿಲ್ದಾಣ ಬಳಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ನಗರದಲ್ಲಿನ ರಾಜಕಾಲುವೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಬೆಂಗಳೂರು ಮಿಷನ್-2022 ಕಾರ್ಯಕ್ರಮದಲ್ಲಿ ಕೆ-100 ರಾಜಕಾಲುವೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಯೋಜನೆಗೆ 175 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹಣಕಾಸು ಸಮಸ್ಯೆ ಎದುರಾಗದಂತೆ ಸರ್ಕಾರವು ನೋಡಿಕೊಳ್ಳಲಿದೆ. ಆದರೆ, ಗುತ್ತಿಗೆದಾರರು 10 ತಿಂಗಳ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಒದಗಿಸಬೇಕು ಎಂದು ಸೂಚನೆ ನೀಡಿದ ಸಿಎಂ
ಬೆಂಗಳೂರು ನಗರದಲ್ಲಿ ನಾಲ್ಕು ಬೃಹತ್ ಮಳೆ ರಾಜಕಾಲುವೆಗಳಿದ್ದು, ಇವುಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಇಂತಹ ರಾಜಕಾಲುವೆಗಳನ್ನು ಹಲವಾರು ನಗರ ಪಟ್ಟಣಗಳಲ್ಲಿ ಜಲಮಾರ್ಗವಾಗಿ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ನಗರದ ಕೋರಮಂಗಲ ರಾಜಕಾಲುವೆಯನ್ನು ಸಹ ಜಲಮಾರ್ಗವಾಗಿ ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ಪರಿವರ್ತಿಸಲು ಉದ್ದೇಶಿಸಲಾಗಿದೆ.
ಜಲಮಾರ್ಗದ ಯೋಜನೆಯಲ್ಲಿ ನಾಗರಿಕ ಒಳಚರಂಡಿ ಕೈಗಾರಿಕಾ ತ್ಯಾಜ್ಯ ನೀರನ್ನು ರಾಜಕಾಲುವೆಯಿಂದ ಬೇರ್ಪಡಿಸಿ ಪರಿಸರ ಹಾನಿಯನ್ನು ನಿಯಂತ್ರಿಸಲಾಗುವುದು. ಕಲುಷಿತಗೊಂಡಿರುವ ರಾಜಕಾಲುವೆಯ ತಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ವಿನ್ಯಾಸಗೊಳಿಸಲಾಗಿದೆ. ಪಾದಚಾರಿ ಮಾರ್ಗವನ್ನುಚಚ್ರ್ ಸ್ಟ್ರೀಟ್ ಮಾದರಿಯಲ್ಲಿ ನಿರ್ಮಿಸಿ ಒಂದು ನಗರ ಪ್ರದೇಶದಿಂದ ಮತ್ತೊಂದು ನಗರ ಪ್ರದೇಶಕ್ಕೆ ಸುಲಲಿತವಾಗಿ ಕಾಲ್ನಡಿಗೆಯಲ್ಲಿ ತೆರಳುವಂತೆ ಮಾಡಲಾಗುವುದು ಎಂದು ಹೇಳಿದ ಸಿಎಂ
ವರ್ಷದ 365 ದಿನವು ಜಲಮಾರ್ಗದಲ್ಲಿ ಶುದ್ಧೀಕರಿಸಿದ ನೀರು ಹರಿಯುವಂತೆ ಮಾಡಲು 5 ಎಂಎಲ್ಡಿ ಎಸ್ಟಿಪಿಯನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನವನ, ಕಾರಂಜಿ, ಶೌಚಾಲಯವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ವಾತಾವರಣವನ್ನು ಬೆಂಗಳೂರು ನಗರದ ಹೃದಯ ಭಾಗದಲ್ಲಿ ಸೃಷ್ಟಿಸಲಾಗಿದೆ. ನಗರದ ವಾಯುಮಾಲಿನ್ಯ ಜಲಮಾಲಿನ್ಯ ತಡೆಗಟ್ಟಲು, ಹಸಿರಿನ ಹೊದಿಕೆ ವಿಸ್ತರಿಸಲು ಕೆರೆಗಳ ಅಭಿವೃದ್ಧಿ, ರಾಜಕಾಲುವೆಗಳ ಅಭಿವೃದ್ಧಿಗೆ ಈ ಕಾರ್ಯಯೋಜನೆಯಲ್ಲಿ ಒತ್ತು ನೀಡಲಾಗಿದೆ. ರಾಜಕಾಲುವೆಗಳು ನಗರ ಸೌಂದರ್ಯಕ್ಕೆ ಪೂರಕವಾಗುವಂತೆ ಅಭಿವೃದ್ಧಿಪಡಿಸಿವುದು ಮಹತ್ವಾಕಾಂಕ್ಷೆ ನಮ್ಮದಾಗಿದೆ ಎಂದ ಯಡಿಯೂರಪ್ಪ
ಶಾಸಕ ಉದಯ ಗರುಡಾಚಾರ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬಿಬಿಎಂಪಿ ವಿಶೇಷ ಅಧಿಕಾರಿ ಗೌರವ್ ಗುಪ್ತಾ, ಆಯುಕ್ತ ಮಂಜುನಾಥ್ ಪ್ರಸಾದ್ ಇತರರು ಉಪಸ್ಥಿತರಿದ್ದರು.