- Home
- Karnataka Districts
- Kalaburagi PSI Death: ಗೃಹ ಸಚಿವರ ತವರಲ್ಲಿ ಪಿಎಸ್ಐ ಬಸವರಾಜ್ ಆತ್ಮ*ಹತ್ಯೆ ಹಿಂದಿದೆಯೇ ನಿಗೂಢ ರಹಸ್ಯ?
Kalaburagi PSI Death: ಗೃಹ ಸಚಿವರ ತವರಲ್ಲಿ ಪಿಎಸ್ಐ ಬಸವರಾಜ್ ಆತ್ಮ*ಹತ್ಯೆ ಹಿಂದಿದೆಯೇ ನಿಗೂಢ ರಹಸ್ಯ?
ಕಲಬುರಗಿಯಲ್ಲಿ ಡಿಜಿಆರ್ಬಿ ಘಟಕದ ಪಿಎಸ್ಐ ಬಸವರಾಜ್ ಹೇರೂರ್ (PSI Basavaraj Herur) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಪದೋನ್ನತಿ ಹೊಂದಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಹೊಟ್ಟೆನೋವು ಎಂದು ಹೇಳಲಾಗುತ್ತಿದ್ದರೂ, ವೃತ್ತಿ ಒತ್ತಡದ ಶಂಕೆ ವ್ಯಕ್ತವಾಗಿದೆ.

ಕಲಬುರಗಿ (ಜೂ.17): ನ್ಯಾಯ ಕೊಡಿಸಬೇಕಾದ ಪೊಲೀಸ್ ಅಧಿಕಾರಿಯೇ ಸಾವಿನ ಹಾದಿ ಹಿಡಿದಿರುವ ಆಘಾತಕಾರಿ ಘಟನೆ ರಾಜ್ಯದ ಗೃಹ ಸಚಿವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯ ಡಿಜಿಆರ್ಬಿ (DCRB) ಘಟಕದಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್ ಹೇರೂರ್ (42) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಂಡು ಸಾವಿಗೆ ಶರಣಾಗಿದ್ದಾರೆ.
ಘಟನೆಯಲ್ಲಿ ನಡೆದಿದ್ದೇನು?
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಲೂರ ಗ್ರಾಮದವರಾದ ಬಸವರಾಜ್ ಹೇರೂರ್, ಇತ್ತೀಚೆಗಷ್ಟೇ ಪಿಎಸ್ಐ ಆಗಿ ಪದೋನ್ನತಿ ಹೊಂದಿದ್ದರು. ಎಂದಿನಂತೆ ರಾತ್ರಿ ಕರ್ತವ್ಯ ಮುಗಿಸಿ ಕಲಬುರಗಿ ನಗರದ ಗಂಗಾ ನಗರ ಬಡಾವಣೆಯಲ್ಲಿರುವ ತಮ್ಮ ಮನೆಗೆ ಬಂದಿದ್ದರು. ತಡರಾತ್ರಿ ಹಠಾತ್ ಆಗಿ ತಮ್ಮ ಸ್ನೇಹಿತರಿಗೆ ಕರೆ ಮಾಡಿದ ಬಸವರಾಜ್, 'ನಾನು ಆತ್ಮಹ*ತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಗಾಬರಿಗೊಂಡ ಸ್ನೇಹಿತರು ಕೂಡಲೇ ಬಸವರಾಜ್ ತಂದೆ ಶಾಂತಪ್ಪ ಅವರಿಗೆ ವಿಷಯ ಮುಟ್ಟಿಸಿದ್ದಾರೆ.
ತಂದೆ ಶಾಂತಪ್ಪ ಮಗನ ಕೋಣೆಯ ಬಳಿ ಹೋದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕರೆದರೂ ಓಗೊಡದಿದ್ದಾಗ, ಕಬ್ಬಿಣದ ರಾಡ್ನಿಂದ ಬಾಗಿಲು ಒಡೆದು ಒಳಹೋಗಿದ್ದಾರೆ. ಆದರೆ ಅಷ್ಟರಲ್ಲೇ ಕಾಲ ಮಿಂಚಿಹೋಗಿತ್ತು. ಬಸವರಾಜ್ ಪತ್ನಿಯ ಸೀರೆಯಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದರು.
ವೃತ್ತಿ ಜೀವನ ಮತ್ತು ಹಿನ್ನೆಲೆ:
2014ರ ಬ್ಯಾಚ್ನ ಪೊಲೀಸ್ ಅಧಿಕಾರಿಯಾದ ಬಸವರಾಜ್, ಈ ಹಿಂದೆ ಹುಮನಾಬಾದ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಘಟನೆ ನಡೆದ ಸಮಯದಲ್ಲಿ ಪತ್ನಿ ಮತ್ತು ಮಕ್ಕಳು ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ.
ಸಾವಿನ ಸುತ್ತ ಅನುಮಾನದ ಹುತ್ತ:
ಬಸವರಾಜ್ ಅವರ ಈ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಂದೆ ಶಾಂತಪ್ಪ ಅವರ ಪ್ರಕಾರ, ಬಸವರಾಜ್ಗೆ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವು ಇತ್ತು. ಅಲ್ಲದೆ ಅವರು ಆಗಾಗ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಒಬ್ಬ ಪೊಲೀಸ್ ಅಧಿಕಾರಿಯಾಗಿ ಕೇವಲ ಹೊಟ್ಟೆ ನೋವಿನ ಕಾರಣಕ್ಕೆ ಆತ್ಮ*ಹ*ತ್ಯೆ ಮಾಡಿಕೊಂಡರಾ ಅಥವಾ ಇದರ ಹಿಂದೆ ವೃತ್ತಿ ಜೀವನದ ಒತ್ತಡ ಅಥವಾ ಬೇರೆನಾದರೂ ಕಾರಣಗಳಿವೆಯೇ ಎಂಬ ಪ್ರಶ್ನೆ ಮೂಡಿದೆ.
ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಲಬುರಗಿಯ ಆರ್ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಯೊಬ್ಬರ ಈ ಸಾವು ಇಡೀ ಜಿಲ್ಲೆಯನ್ನು ಕಂಬನಿ ಮಿಡಿಯುವಂತೆ ಮಾಡಿದೆ.

