ಹೆಂಡ್ತಿ ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ಕುಚುಕು ಗೆಳೆಯನ ಹೃದಯಕ್ಕೆ ಚಾಕು ಇರಿದವ ಅರೆಸ್ಟ್
ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣಕ್ಕೆ ದತ್ತು ಎಂಬಾತ ತನ್ನ ಬಾಲ್ಯದ ಗೆಳೆಯ ಶರಣು ಗೌಳಿಯ ಹೃದಯಕ್ಕೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಕಲಬುರಗಿಯ ನರ್ತಕಿ ಬಾರ್ ಬಳಿ ಈ ಘಟನೆ ನಡೆದಿದ್ದು, ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.

ಗೆಳೆಯನ ಹೃದಯಕ್ಕೆ ಚಾಕು
ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಬಾಲ್ಯದ ಗೆಳೆಯನ ಹೃದಯಕ್ಕೆ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಬ್ರಹ್ಮಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದತ್ತು ಬಂಧಿತ ಆರೋಪಿ. ಚಾಕು ಇರಿದ ಬಳಿಕ ಮತ್ತೋರ್ವ ಸ್ನೇಹಿತನಿಗೆ ಆತನನ್ನು ಆಸ್ಪತ್ರೆಗೆ ದಾಖಲಿಸುವಂತೆ ಹೇಳಿ ದತ್ತು ಪರಾರಿಯಾಗಿದ್ದನು.
ಇಬ್ಬರು ಬಾಲ್ಯದ ಗೆಳೆಯರು
ಕೊಲೆಯಾದ ಶರಣು ಗೌಳಿ ಮತ್ತು ದತ್ತು ಇಬ್ಬರು ಬಾಲ್ಯದ ಗೆಳೆಯರು. ಶರಣು ಗೌಳಿ ಮೊಬೈಲ್ ರಿಪೇರಿ ಕೆಲಸ ಮಾಡಿಕೊಂಡಿದ್ದನು. ಇತ್ತೀಚೆಗಷ್ಟೇ ದತ್ತು ತನ್ನ ಮೊಬೈಲ್ ರಿಪೇರಿ ಮಾಡಿಕೊಡುವಂತೆ ಶರುಣಗೆ ನೀಡಿದ್ದನು. ಸುಮಾರು ದಿನಗಳು ಕಳೆದ್ರೂ ದತ್ತುವಿನ ಮೊಬೈಲ್ನ್ನು ಶರಣು ನೀಡಿರಲಿಲ್ಲ.
ನರ್ತಕಿ ಬಾರ್
ಇದರಿಂದ ಕೋಪಗೊಂಡ ದತ್ತು ಫೋನ್ ಮಾಡಿ ಶರಣು ಜೊತೆ ಜಗಳ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಶರಣು, ಗೆಳೆಯ ದತ್ತುಗೆ ಮಾತ್ರವಲ್ಲದೇ ಆತನ ಪತ್ನಿ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾನೆ. ಇದೇ ಕೋಪದಲ್ಲಿ ಮನೆಯಲ್ಲಿದ್ದ ಚಾಕು ಜೊತೆ ಶರಣು ಮದ್ಯ ಕುಡಿಯುತ್ತಿದ್ದ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಬಳಿಯಲ್ಲಿರುವ ನರ್ತಕಿ ಬಾರ್ಗೆ ಬಂದಿದ್ದಾನೆ.
ಎಸ್ಕೇಪ್ ಆಗಿದ್ದ ಆರೋಪಿ
ಶರಣು ಬಾರ್ನಿಂದ ಹೊರ ಬರುತ್ತಿದ್ದಂತೆ ನೇರವಾಗಿ ಆತನ ಎದೆಗೆ ಚಾಕುವಿನಿಂದ ಬಲವಾಗಿ ಇರಿದಿದ್ದಾನೆ. ಎದೆಗೆ ಚುಚ್ಚಿದ ಚಾಕು ಹೃದಯಕ್ಕೆ ತಾಗಿದ ಪರಿಣಾಮ ಶರಣು ಗೌಳಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಚಾಕು ಚುಚ್ಚಿದ ಬಳಿಕ ದತ್ತು ಎಸ್ಕೇಪ್ ಆಗಿದ್ದನು.
ಬ್ರಹ್ಮಪುರ ಪೊಲೀಸ್ ಠಾಣೆ
ಕೊಲೆ ನಡೆದ ಎರಡು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 2018ರಲ್ಲಿಯೂ ಕೊಲೆ ಪ್ರಕರಣವೊಂದರಲ್ಲಿ ಆರೋಪಿ ದತ್ತು ಜೈಲುಪಾಲಾಗಿದ್ದಾನೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

