- Home
- Karnataka Districts
- Haliyala: ರೌಡಿಯ ಮುಂದೆ ಕೈಕಟ್ಟಿ ನಿಂತ ಇನ್ಸ್ಪೆಕ್ಟರ್; ಕೆಲಸ ಮಾಡೋಕ್ ಲಾಯಕ್ಕಿಲ್ಲ ಎಂದು ಸಸ್ಪೆಂಡ್ ಮಾಡಿದ ಸರ್ಕಾರ!
Haliyala: ರೌಡಿಯ ಮುಂದೆ ಕೈಕಟ್ಟಿ ನಿಂತ ಇನ್ಸ್ಪೆಕ್ಟರ್; ಕೆಲಸ ಮಾಡೋಕ್ ಲಾಯಕ್ಕಿಲ್ಲ ಎಂದು ಸಸ್ಪೆಂಡ್ ಮಾಡಿದ ಸರ್ಕಾರ!
ಹಳಿಯಾಳದಲ್ಲಿ ರೌಡಿ ಶೀಟರ್ 'ಮಚ್ ಮಂಜಾ' ಪೊಲೀಸರ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಾಗ, ಸ್ಥಳದಲ್ಲಿದ್ದ ಎಸ್ಐ ಬಸವರಾಜ (SI Basavaraj Suspended) ಕ್ರಮ ಕೈಗೊಳ್ಳದೆ ಅಸಹಾಯಕರಾಗಿ ನಿಂತಿದ್ದರು. ಈ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆಕ್ರೋಶದ ನಂತರ ಎಸ್ಪಿ ಅಮಾನತುಗೊಳಿಸಿ ಆದೇಶಿದ್ದಾರೆ.

ಉತ್ತರ ಕನ್ನಡ (ಜೂ.17): ರೌಡಿ ಶೀಟರ್ ಒಬ್ಬ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದರ್ಪ ಮೆರೆಯುತ್ತಿದ್ದರೂ, ಆತನನ್ನು ನಿಯಂತ್ರಿಸದೆ ಅಸಹಾಯಕರಾಗಿ ಕೈಕಟ್ಟಿ ನಿಂತಿದ್ದ ಹಳಿಯಾಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ (SI) ಬಸವರಾಜ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಘಟನೆಯ ವಿವರ:
ಕೆಲ ದಿನಗಳ ಹಿಂದೆ ಹಳಿಯಾಳದ ಮೌರ್ಯ ಹೋಟೆಲ್ ಬಳಿ ರೌಡಿ ಶೀಟರ್ 'ಮಚ್ ಮಂಜಾ' ಅಲಿಯಾಸ್ ಮಂಜುನಾಥ ಎಂಬಾತ ಪೊಲೀಸರ ಜೀಪ್ ತಡೆದು ರಂಪಾಟ ನಡೆಸಿದ್ದ. ಅಷ್ಟೇ ಅಲ್ಲದೆ, ಜೀಪ್ನಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ವೇಳೆ ಸ್ಥಳದಲ್ಲಿದ್ದ ಎಸ್ಐ ಬಸವರಾಜ ಅವರು ರೌಡಿಯ ಆರ್ಭಟವನ್ನು ತಡೆಯುವ ಬದಲು ಸುಮ್ಮನೆ ನಿಂತಿದ್ದರು. ಒಬ್ಬ ಪೊಲೀಸ್ ಅಧಿಕಾರಿಯ ಎದುರೇ ಕಾನೂನು ಕೈಗೆತ್ತಿಕೊಂಡ ರೌಡಿಯ ವರ್ತನೆ ಮತ್ತು ಪೊಲೀಸರ ಅಸಹಾಯಕತೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಾರ್ವಜನಿಕರ ಆಕ್ಷೇಪ ಮತ್ತು ಕ್ರಮ:
ಪೊಲೀಸರ ಮೇಲೆಯೇ ಹಲ್ಲೆ ನಡೆದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು ಇಲಾಖೆಯ ಘನತೆಗೆ ಧಕ್ಕೆ ತಂದಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಘಟನೆಯ ವಿಡಿಯೋಗಳು ಮತ್ತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ದೀಪನ್ ಎಂ.ಎನ್., ಅಧಿಕಾರಿಯ ಕರ್ತವ್ಯ ಲೋಪವನ್ನು ಮನಗಂಡು ತಕ್ಷಣವೇ ಅಮಾನತು ಆದೇಶ ನೀಡಿದ್ದಾರೆ.
ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಸ್ಥಾನದಲ್ಲಿರುವ ಅಧಿಕಾರಿಗಳೇ ಹೀಗೆ ಅಸಹಾಯಕರಾದರೆ ಸಾರ್ವಜನಿಕರ ರಕ್ಷಣೆ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಈ ಅಮಾನತು ಆದೇಶದ ಮೂಲಕ ಜಿಲ್ಲಾ ಪೊಲೀಸ್ ಇಲಾಖೆಯು ಕರ್ತವ್ಯ ಲೋಪ ಎಸಗುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

