Raichur: ಕಾಯಿಪಲ್ಲೆ ಖರೀದಿ ನೆಪದಲ್ಲಿ ಬಂಡಾರ ಎರಚಿ ಹಣವನ್ನು ದೋಚಿದ ಸಾಧುವೇಷದ ಕದೀಮರು
ಮಸ್ಕಿ ಪಟ್ಟಣದಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದ ಐವರ ಗ್ಯಾಂಗ್, ಅಂಗಡಿ ಮಾಲೀಕನ ಮೇಲೆ ಕುಂಕುಮ ಮತ್ತು ಬಂಡಾರ ಎರಚಿ ಮತ್ತು ಬರುವಂತೆ ಮಾಡಿದೆ. ನಂತರ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದೆ.

ಕುಂಕುಮ, ಬಂಡಾರ ಎರಚಿ ಮೋಸ
ಕಾಯಿಪಲ್ಲೆ (ತರಕಾರಿ) ಖರೀದಿ ನೆಪದಲ್ಲಿ ತರಕಾರಿ ಅಂಗಡಿಗೆ ಬಂದು ಕುಂಕುಮ, ಬಂಡಾರ ಎರಚಿ ಮತ್ತು ಬರುವಂತೆ ಮಾಡಿ 1 ಲಕ್ಷ ರು. ಹಣ ದೋಚಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಐದು ಜನರ ಗ್ಯಾಂಗ್
ಭಾನುವಾರ ಸಂತೆ ಹಿನ್ನೆಲೆಯಲ್ಲಿ ಸ್ಥಳೀಯ ಲಕ್ಷ್ಮೀ ವೆಂಕಟೇಶ್ವರ ಹೆಸರಿನ ತರಕಾರಿ ಮಳಿಗೆ ಆಗಮಿಸಿದ ಐದು ಜನರ ಗ್ಯಾಂಗ್ ಮಳಿಗೆ ಮಾಲೀಕ ಮೌನೇಶ್ ಜೊತೆಗೆ ವ್ಯಾಪಾರದ ಮಾತುಗಳನ್ನಾಡಿ ವಿವಿಧ ಕಾಯಿಪಲ್ಲೆಗಳನ್ನು ಪ್ಯಾಕ್ ಮಾಡಿಸಿದ್ದು, ಬ್ಯಾಗ್ ತೆಗೆದುಕೊಳ್ಳುವ ನೆಪದಲ್ಲಿ ಒಂದು ರೂಪಾಯಿ ನಾಣ್ಯವನ್ನು ಕೆಳಗಡೆ ಬಿಸಾಕಿದ್ದಾರೆ.
1 ಲಕ್ಷ ರು. ನಗದು ಸುಲಿಗೆ
ಈ ವೇಳೆ ಮೌನೇಶ್ ಕಾಯಿನ್ ತೆಗೆಯಲು ಕೆಳಗಡೆ ಬಗ್ಗಿ ಎದ್ದಾಗ ಗಮನ ಬೇರೆಡೆಗೆ ಸೆಳೆಯುವಂತೆ ಮಾಡಿ ಕುಂಕುಮ, ಬಂಡಾರವನ್ನು ಎಸೆದು ಮಾತು ಬಾರದಂತೆ ಮಾಡಿ ಸುಮ್ಮನೆ ಕುಳಿತಾಗ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರು. ನಗದನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.
ಸಿಂಧನೂರು ಬಳಿಕ ಮಸ್ಕಿ
ಘಟನೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಸಿಂಧನೂರು ನಗರದಲ್ಲಿ ಸಹ ಸಾಧುವೇಷದಲ್ಲಿ ಆಗಮಿಸಿದ ಕೆಲವರು ಔಷಧಿ ಅಂಗಡಿಯಲ್ಲಿ ಕುಡಿಯುವ ನೀರಿನ ಕೇಳೋ ನೆಪದಲ್ಲಿ ಮಾಲೀಕರಿಗೆ ಹೂವು ಕೊಟ್ಟು ಮತ್ತು ಬರುವಂತೆ ಮಾಡಿ ವಂಚಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಕೃತ್ಯ ಮಸ್ಕಿಯಲ್ಲಿ ನಡೆದಿರುವುದು ಆ ಭಾಗದ ವ್ಯಾಪಾರಿಗಳು, ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ನೀರು ಕೇಳ್ತಾರೆ, ಹೂವಿನ ಆಶೀರ್ವಾದ ಮಾಡ್ತಾರೆ; ಮಾಯವಾಗುತ್ತೆ ನಿಮ್ಮಲ್ಲಿರೋ ಚಿನ್ನ-ಹಣ!

