- Home
- Karnataka Districts
- ಧಾರವಾಡ ಡೆಲಿವರಿ ಬಾಯ್ ಸ್ನೇಹಿತರು ಯಲ್ಲಾಪುರ ಭೀಕರ ಅಪಘಾತದಲ್ಲಿ ಮೃತ್ಯು, ಭೀಕರತೆ ಬಿಚ್ಚಿಟ್ಟ ಫೋಟೋಗಳು!
ಧಾರವಾಡ ಡೆಲಿವರಿ ಬಾಯ್ ಸ್ನೇಹಿತರು ಯಲ್ಲಾಪುರ ಭೀಕರ ಅಪಘಾತದಲ್ಲಿ ಮೃತ್ಯು, ಭೀಕರತೆ ಬಿಚ್ಚಿಟ್ಟ ಫೋಟೋಗಳು!
ಧಾರವಾಡದಿಂದ ಧಾರ್ಮಿಕ ಪ್ರವಾಸಕ್ಕೆ ಹೊರಟಿದ್ದ ಏಳು ಸ್ನೇಹಿತರು ಯಲ್ಲಾಪುರದ ಅರಬೈಲ್ ಘಾಟ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಧಾರವಾಡ ಮೂಲದವರು ಉತ್ತರ ಕನ್ನಡದಲ್ಲಿ ಸಾವು
ಕಾರವಾರ/ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಪ್ರದೇಶದಲ್ಲಿ ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರಿದ್ದ ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಗೋಕರ್ಣ, ಮುರುಡೇಶ್ವರ ಹಾಗೂ ಧರ್ಮಸ್ಥಳದ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕಾಗಿ ಹೊರಟಿದ್ದರು ಎಂದು ತಿಳಿದುಬಂದಿದೆ.
ಪ್ರವಾಸಕ್ಕೆ ಹೊರಟಿದ್ದ ಸ್ನೇಹಿತರು:
ಮೃತಪಟ್ಟವರೆಲ್ಲರೂ ಧಾರವಾಡದಲ್ಲಿ ಡೆಲಿವರಿ ಬಾಯ್ಸ್ ಕೆಲಸ ಮಾಡುತ್ತಿದ್ದ ಸ್ನೇಹಿತರಾಗಿದ್ದಾರೆ. ಪ್ರತಿನಿತ್ಯದ ಕೆಲಸದ ಒತ್ತಡದಿಂದ ಕೊಂಚ ಬಿಡುವು ಮಾಡಿಕೊಂಡು, ದೇವಸ್ಥಾನಗಳ ದರ್ಶನ ಹಾಗೂ ಪ್ರವಾಸದ ಖುಷಿಯಲ್ಲಿದ್ದ ಯುವಕರಿಗೆ ವಿಧಿಯೇ ಸಂಚು ರೂಪಿಸಿತ್ತು. ಒಟ್ಟು 9 ಜನರಿದ್ದ ಈ ಸ್ನೇಹಿತರ ತಂಡವು ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಕರಾವಳಿಯತ್ತ ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ, ಇವರು ಚಲಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
ದೇವರ ದರ್ಶನ ಪಡೆದು ಕ್ಲಿಕ್ಕಿಸಿದ ಕೊನೆಯ ಸೆಲ್ಫಿ!
ಪ್ರವಾಸ ಹೊರಡುವ ಮುನ್ನ ಈ ಸ್ನೇಹಿತರು ಧಾರವಾಡದ ಪ್ರಸಿದ್ಧ ಕೆ.ಸಿ.ಡಿ (KCD) ಸರ್ಕಲ್ ಬಳಿ ಇರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದರು. ಸುಖಕರ ಪ್ರಯಾಣಕ್ಕಾಗಿ ಗಣಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ದೇವಸ್ಥಾನದ ಮುಂಭಾಗದಲ್ಲೇ ಎಲ್ಲರೂ ಒಟ್ಟಾಗಿ ಅತ್ಯಂತ ಸಡಗರದಿಂದ ಸೆಲ್ಫಿ ಫೋಟೋವನ್ನೂ ತೆಗೆದುಕೊಂಡಿದ್ದರು. ಆದರೆ, ಆ ದೇವರ ದರ್ಶನ ಹಾಗೂ ಸೆಲ್ಫಿ ಫೋಟೋವೇ ಆ ಸ್ನೇಹಿತರ ಪಾಲಿಗೆ ಕೊನೆಯಾಗುವುದೆಂದು ಯಾರೂ ಊಹಿಸಿರಲಿಲ್ಲ. ದೇವರಲ್ಲಿ ಮಾಡಿದ ಪ್ರಾರ್ಥನೆ ಫಲಿಸಲಿಲ್ಲ. ಕೆಲವೇ ಗಂಟೆಗಳಲ್ಲಿ ಜವರಾಯ ಜೀವ ಕಸಿದುಕೊಂಡಿದ್ದಾನೆ.
ಮೃತರ ವಿವರಗಳು:
ಅಪಘಾತದ ಭೀಕರತೆಗೆ ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, 6 ಜನ ಸ್ಥಳದಲ್ಲೇ ಜೀವ ಬಿಟ್ಟಿದ್ದು ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
- ಬಸವರಾಜ್ (48 ವರ್ಷ)
- ಅಭಿಷೇಕ್ ಈಶ್ವರ್ (28 ವರ್ಷ)
- ಅಕ್ಷಯ (26 ವರ್ಷ)
- ಅಭಿಷೇಕ್ (26 ವರ್ಷ)
- ಸಂಜೀವ / ಸಂಜಯ ಅಂಗಡಿ (33 ವರ್ಷ - ಕ್ರೂಸರ್ ಚಾಲಕ)
- ಮಂಜುನಾಥ ಚುಲಕಿ (32 ವರ್ಷ)
- ಸಚಿನ್ ಹೆಬ್ಬಳ್ಳಿ(26 - ಕಿಮ್ಸ್ ಆಸ್ಪತ್ರೆಯಲ್ಲಿ ಸಾವು)
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳಕ್ಕೆ ಪೊಲೀಸರ ಭೇಟಿ:
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಹೊರತೆಗೆಯಲಾಯಿತು. ಸದ್ಯ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಧಾರವಾಡದ ಇವರ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.

