- Home
- Karnataka Districts
- ದಾವಣಗೆರೆ ಒಂದು ಮದುವೆ-ಎರಡು ಹೆಣ: ಪತಿ ಹಾಗೂ ಮಾವನ ಸಾವಿಗೆ ಕಾರಣರಾದ ಪತ್ನಿ, ಪ್ರಿಯಕರ ಅರೆಸ್ಟ್!
ದಾವಣಗೆರೆ ಒಂದು ಮದುವೆ-ಎರಡು ಹೆಣ: ಪತಿ ಹಾಗೂ ಮಾವನ ಸಾವಿಗೆ ಕಾರಣರಾದ ಪತ್ನಿ, ಪ್ರಿಯಕರ ಅರೆಸ್ಟ್!
ದಾವಣಗೆರೆಯಲ್ಲಿ ನವವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಓಡಿಹೋದ ಕಾರಣ, ಮನನೊಂದ ಆಕೆಯ ಪತಿ ಹಾಗೂ ಮದುವೆ ಮಾಡಿಸಿದ್ದ ಸೋದರಮಾವ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಜೋಡಿ ಆತ್ಮ*ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಮಹಿಳೆ ಮತ್ತು ಆಕೆ ಪ್ರಿಯಕರನನ್ನು ಬಂಧಿಸಿದ್ದಾರೆ.

ದಾವಣಗೆರೆ (ಜ.29): 'ಒಂದು ಸುಳ್ಳು, ನೂರು ಅನಾಹುತಗಳಿಗೆ ಕಾರಣವಾಗುತ್ತದೆ' ಎಂಬಂತೆ, ಅನೈತಿಕ ಸಂಬಂಧದ ಮೋಹಕ್ಕೆ ಬಿದ್ದ ನವವಿವಾಹಿತೆಯೊಬ್ಬಳು ಗಂಡನ ಮನೆ ಬಿಟ್ಟು ಪ್ರಿಯಕರನೊಂದಿಗೆ ಓಡಿಹೋದ ಘಟನೆ ಎರಡು ಕುಟುಂಬಗಳನ್ನು ಸರ್ವನಾಶ ಮಾಡಿದೆ. ಮದುವೆಯಾಗಿ ಕೇವಲ 2 ತಿಂಗಳಿಗೆ ಹೆಂಡತಿ ಓಡಿಹೋಗಿದ್ದಕ್ಕೆ ಗಂಡ ಹಾಗೂ ಮದುವೆ ಮಾಡಿಸಿದ ಆಕೆಯ ಸೋದರಮಾವ ಇಬ್ಬರೂ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಪೊಲೀಸರು ಓಡಿಹೋದ ಜೋಡಿಗಳನ್ನು ಬಂಧಿಸಿದ್ದಾರೆ.
ಮದುವೆಯಾದ ಎರಡೂವರೆ ತಿಂಗಳಲ್ಲೇ ಪತ್ನಿ ಕೈಕೊಟ್ಟ ನೋವಿನಲ್ಲಿ ಪತಿ ಹಾಗೂ ಮದುವೆ ಮಾಡಿಸಿದ್ದ ಪತ್ನಿಯ ಸೋದರಮಾವ ಇಬ್ಬರೂ ಆತ್ಮ*ಹತ್ಯೆಗೆ ಶರಣಾದ ಘಟನೆ ಬೆಣ್ಣೆನಗರಿ ದಾವಣಗೆರೆಯನ್ನು ಬೆಚ್ಚಿಬೀಳಿಸಿದೆ. ಈ ಜೋಡಿ ಆತ್ಮ*ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಾವಣಗೆರೆ ಗ್ರಾಮಾಂತರ ಪೊಲೀಸರು ಮೃತ ಹರೀಶ್ ಪತ್ನಿ ಸರಸ್ವತಿ ಹಾಗೂ ಆಕೆಯ ಪ್ರಿಯಕರ ಶಿವಕುಮಾರ್ ಅಲಿಯಾಸ್ ಕುಮಾರ್ನನ್ನು ಬಂಧಿಸಿದ್ದಾರೆ.
ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದ ಹರೀಶ್ (32) ದಾವಣಗೆರೆಯ ಆರಾಧ್ಯ ಸ್ಟೀಲ್ ಫ್ಯಾಕ್ಟರಿಯಲ್ಲಿ ಹೆಚ್ಆರ್ (HR) ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಕೇವಲ ಎರಡೂವರೆ ತಿಂಗಳ ಹಿಂದೆಯಷ್ಟೇ ದಾವಣಗೆರೆ ನಗರದ ಆನೆಕೊಂಡದ ಸರಸ್ವತಿ ಎಂಬಾಕೆಯೊಂದಿಗೆ ಅದ್ದೂರಿಯಾಗಿ ವಿವಾಹವಾಗಿತ್ತು. ಸರಸ್ವತಿಯ ಸೋದರಮಾವ ರುದ್ರೇಶ್ (40) ಮುಂದೆ ನಿಂತು ಈ ಮದುವೆಯನ್ನು ಮಾಡಿಸಿದ್ದರು. ಆದರೆ, ವಿವಾಹದ ನಂತರವೂ ಸರಸ್ವತಿ ತನ್ನ ಹಳೆಯ ಪ್ರಿಯಕರ ಶಿವಕುಮಾರ್ ಜೊತೆ ಸಂಪರ್ಕದಲ್ಲಿದ್ದಳು ಎಂಬ ಆರೋಪ ಕೇಳಿಬಂದಿದೆ.
ಜನವರಿ 23ರಂದು ಗುಮ್ಮನೂರಿನ ಗಂಡನ ಮನೆಯಿಂದ ಸರಸ್ವತಿ ಏಕಾಏಕಿ ನಾಪತ್ತೆಯಾಗಿದ್ದಳು. ಆಕೆ ತನ್ನ ಪ್ರಿಯಕರ ಕುಮಾರ್ ಜೊತೆ ಕಾರಿನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಷ್ಟೇ ಅಲ್ಲದೆ, ಪತ್ನಿ ಪರಾರಿಯಾದ ನಂತರ ಪ್ರಿಯಕರ ಕುಮಾರ್, ಹರೀಶ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. 'ಸರಸ್ವತಿ ತಂಟೆಗೆ ಬರಬೇಡ, ಬಂದರೆ ಸುಮ್ಮನಿರಲ್ಲ' ಎಂದು ಹರೀಶ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಮಾನಸಿಕ ಕಿರುಕುಳ ನೀಡಿದ್ದ ಎಂದು ಕುಟುಂಬಸ್ಥರು ದೂರಿದ್ದಾರೆ.
ಪತ್ನಿಯ ಈ ವರ್ತನೆ ಮತ್ತು ಸಮಾಜದಲ್ಲಿ ತಲೆತಗ್ಗಿಸುವಂತಾದ ಪರಿಸ್ಥಿತಿಯಿಂದ ತೀವ್ರ ಮನನೊಂದ ಹರೀಶ್, ಗಣರಾಜ್ಯೋತ್ಸವದ ದಿನದಂದು (ಜ.26) ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಹರೀಶ್ ಸುದೀರ್ಘವಾದ ಡೆತ್ನೋಟ್ ಬರೆದಿಟ್ಟಿದ್ದು, 'ನನ್ನ ಸಾವಿಗೆ ಪತ್ನಿ ಸರಸ್ವತಿ, ಆಕೆಯ ತಂದೆ-ತಾಯಿ ಹಾಗೂ ಆಕೆಯನ್ನು ಕರೆದುಕೊಂಡು ಹೋದ ಕುಮಾರ್ ಕಾರಣ. ನನ್ನ ಅಂತ್ಯಸಂಸ್ಕಾರವನ್ನು ಬಸವ ಧರ್ಮದ ಪ್ರಕಾರ ನೆರವೇರಿಸಿ' ಎಂದು ಉಲ್ಲೇಖಿಸಿದ್ದರು.
ಇತ್ತ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ, ಸರಸ್ವತಿಯ ಸೋದರಮಾವ ರುದ್ರೇಶ್ ತೀವ್ರ ಆಘಾತಕ್ಕೆ ಒಳಗಾಗಿದ್ದರು. ತಾನೇ ಮುಂದೆ ನಿಂತು ಮಾಡಿಸಿದ ಮದುವೆ ದುರಂತದಲ್ಲಿ ಅಂತ್ಯವಾಯಿತಲ್ಲ ಎಂಬ ಕೊರಗು ಅವರನ್ನು ಕಾಡಿತ್ತು. ಹರೀಶ್ ಸಾವಿನ ಸುದ್ದಿ ತಿಳಿದ ಕೂಡಲೇ ಆನೆಕೊಂಡದ ತಮ್ಮ ನಿವಾಸದಲ್ಲಿ ರುದ್ರೇಶ್ ವಿಷ ಸೇವಿಸಿದ್ದರು. ಅಸ್ವಸ್ಥಗೊಂಡ ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೂಡ ಸಾವನ್ನಪ್ಪಿದ್ದಾರೆ. ಒಂದೇ ಘಟನೆಯಿಂದ ಎರಡು ಪ್ರಾಣಗಳು ಬಲಿಯಾದವು.
ಈ ಜೋಡಿ ಆತ್ಮ*ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು, ಹರೀಶ್ ಕುಟುಂಬಸ್ಥರ ದೂರಿನ ಮೇರೆಗೆ ತನಿಖೆ ಚುರುಕುಗೊಳಿಸಿದ್ದರು. ತಲೆಮರೆಸಿಕೊಂಡಿದ್ದ ಸರಸ್ವತಿ ಮತ್ತು ಆಕೆಯ ಪ್ರಿಯಕರ ಶಿವಕುಮಾರ್ನನ್ನು ನಿನ್ನೆ ರಾತ್ರಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಒಟ್ಟಾರೆಯಾಗಿ, ಕ್ಷಣಿಕ ಸುಖಕ್ಕಾಗಿ ಮಾಡಿದ ಒಂದು ತಪ್ಪು, ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಎರಡು ಕುಟುಂಬಗಳಲ್ಲಿ ನೀರವ ಮೌನ ಆವರಿಸುವಂತೆ ಮಾಡಿದೆ.

